ಶಾಸಕರ ರಾಜೀನಾಮೆ ಆಶ್ಚರ್ಯ ತಂದಿದೆ: ಸಚಿವ ಜಿ.ಟಿ. ದೇವೇಗೌಡ
ಮೈಸೂರು, ಜುಲೈ 6: ಶಾಸಕರ ರಾಜೀನಾಮೆ ಸಲ್ಲಿಕೆ ವಿಚಾರ ನನಗೆ ಆಶ್ಚರ್ಯ ತಂದಿದೆ ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
ಸಚಿವ ಜಿಟಿಡಿಗೆ ಹೈಕೋರ್ಟ್ ತುರ್ತು ನೋಟಿಸ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ರಾಜೀನಾಮೆ ನೀಡಲು ಮುಂದಾಗಿರುವುದು ಮತ್ತೂ ಆಶ್ಚರ್ಯವಾಗಿದೆ. ವಿಶ್ವನಾಥ್ ಅವರನ್ನು ಜೆಡಿಎಸ್ ಗೆ ಕರೆತಂದಿದ್ದು ನಾನಲ್ಲ. ಅದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಅವರನ್ನು ಗೆಲ್ಲಿಸುವ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ರಾಜೀನಾಮೆ ಕೊಟ್ಟ ಶಾಸಕರು ಜನರಿಗೆ ಗೌರವ ನೀಡಬೇಕಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಸದ್ಯ ನಾನು ಬೆಂಗಳೂರಿಗೆ ಹೋಗುವುದಿಲ್ಲ ಎಂದರು.
ಜಿ.ಟಿ.ದೇವೇಗೌಡರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಯ ಕುರಿತು ಮಾತನಾಡಿದ ಅವರು, ನಾನು ಬಿಜೆಪಿಯವರ ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ. ಅಂದ ಮಾತ್ರಕ್ಕೆ ಬಿಜೆಪಿಗೆ ಹೋಗುತ್ತೇನೆ ಎಂದು ಅರ್ಥವಲ್ಲ. ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಅಷ್ಟೆ. ಪ್ರಧಾನಿ ಮೋದಿ ಅವರು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇನೆ. ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸಲು ಅವರು ಮುಂದಾಗುವುದಿಲ್ಲ ಎಂಬ ನಂಬಿಕೆ ಇಟ್ಟು ಹೇಳಿದ್ದೇನೆ ಅಷ್ಟೇ ಎಂದರು.