"ಮಾಜಿ ಸಿಎಂ ಎಚ್ಡಿಕೆ ಮಾತು ಮನಸ್ಸಿಗೆ ಘಾಸಿ ಮಾಡಿತ್ತು, ಅದಕ್ಕೆ ಟೀಕಿಸಿದೆ''
ಮೈಸೂರು, ಮಾರ್ಚ್ 2: "ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ, ಕೀಳಾಗಿ ಮಾತನಾಡುತ್ತಿದ್ದರು. ನನಗೆ ತುಂಬಾ ಘಾಸಿ ಆಯ್ತು, ಅದೇ ಕಾರಣಕ್ಕೆ ನಾನು ಸಹ ಮಾತನಾಡಿದೆ'' ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಸಿಎಂ ಕುಮಾರಸ್ವಾಮಿ ಅವರು ಪದೇ ಪದೇ ನನ್ನನ್ನು ವೈಯಕ್ತಿಕ ವಿಚಾರಕ್ಕೆ ಟೀಕಿಸಿದರು. ಆ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದ್ದೆ'' ಎಂದರು.
ಏರು ಧ್ವನಿಯಲ್ಲಿ ಕೆಮ್ಮಿಕೊಂಡು ಭಾಷಣ ಮಾಡಿದ್ನಲ್ಲಾ, ಅವನ ಯೋಗ್ಯತೆ ನನಗೆ ಗೊತ್ತಿಲ್ಲವೇ: ಎಚ್ಡಿಕೆ ವಾಕ್ ಪ್ರಹಾರ
"ಆದರೂ ಅವರು ನನ್ನ ವಿರುದ್ಧ ಮಾತನಾಡೋದನ್ನು ನಿಲ್ಲಿಸಲಿಲ್ಲ, ತೇಜೋವಧೆ ಮುಂದುವರೆಸಿದರು. ಇದರಿಂದ ಬೇಸರಗೊಂಡು ನಾನು ವೈಯಕ್ತಿಕವಾಗಿ ಅವರನ್ನು ಟೀಕಿಸಿದೆ. ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ತಪ್ಪು ನನಗೂ ಗೊತ್ತಿದೆ. ಮಾತಿಗೆ ಮಾತು ಬೆಳೆದರೆ ಟೀಕೆಗಳು ಹೆಚ್ಚಾಗುತ್ತವೆ. ಮಾಧ್ಯಮದವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಬುದ್ಧಿವಾದ ಹೇಳಿದರೆ ಒಳ್ಳೆಯದು'' ಎಂದು ತಿಳಿಸಿದರು.
"ನೀರಿನ ಪೈಪ್ ಲೆಟರ್ಹೆಡ್ನಲ್ಲಿ ದುಡ್ಡು ಮಾಡುತ್ತಾನೆ ಎಂದು ಕುಮಾರಸ್ವಾಮಿ ಆರೋಪ ಮಾಡ್ತಾರೆ. ಹಾಗಾದರೆ ನಮ್ಮ ಕಾರ್ಯಕರ್ತರಿಗೆ ನಾನು ಶಿಫಾರಸು ಮಾಡಬಾರದೇ? ಅದನ್ನು ಟೀಕೆ ಮಾಡಿದರೆ ಹೇಗೆ? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ. ರಾಜಕಾರಣದಲ್ಲಿ ಯಶಸ್ಸು ಗಳಿಸಲು ಜನತೆಯ ಆಶೀರ್ವಾದ ಮುಖ್ಯ. ಇಲ್ಲಸಲ್ಲದ ವೈಯಕ್ತಿಕ ಟೀಕೆಗಳನ್ನು ಯಾರೂ ಮಾಡಬಾರದು. ಸಾರ್ವಜನಿಕ ಜೀವನದಲ್ಲಿ ಇತಿಮಿತಿಯಲ್ಲೇ ಬದುಕಿದ್ದೇನೆ'' ಎಂದು ಸಚಿವ ಸಿಪಿ ಯೋಗೇಶ್ವರ್ ಹೇಳಿದರು.
"ಎಚ್ಡಿಕೆ ಅಧಿಕಾರವಧಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಿಲ್ಲ''
"ಆದರೆ ನನ್ನ ತಾಳ್ಮೆಯ ಕಟ್ಟೆ ಒಡೆದಿದ್ದಕ್ಕೆ ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿವಾಗಿ ಟೀಕಿಸಿದೆ ಎಂದು ಹೇಳಿದ ಸಚಿವರು, ಇನ್ನು, ಅಭಿವೃದ್ಧಿ ಮತ್ತು ರಾಜಕೀಯವನ್ನು ನಾನು ಮಿಶ್ರಣ ಮಾಡಲ್ಲ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಟ್ಟುವುದೇ ನನ್ನ ಗುರಿ. ಜೆಡಿಎಸ್ ಪಕ್ಷವನ್ನು ನಾವು ನಂಬುವ ಪರಿಸ್ಥಿತಿ ಇಲ್ಲ. ಮೈಸೂರು ಪಾಲಿಕೆಯ ಮೈತ್ರಿ ವಿಚಾರದಲ್ಲೂ ಇದು ಮತ್ತೊಮ್ಮೆ ಸಾಬೀತಾಗಿದೆ'' ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅಭಿಪ್ರಾಯಪಟ್ಟರು.