ಸೊಸೆ ಮೊಳೆ ಹೊಡೆದು ಬಂದ ಹಾಗೆ ಬಂದಿದ್ದೇವೆ; ಸಚಿವ ಬಿ.ಸಿ. ಪಾಟೀಲ್
ಮೈಸೂರು ಜೂನ್ 16: "ಬಿಜೆಪಿಯಲ್ಲೀಗ ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ ಸೊಸೆ ಮೊಳೆ ಹೊಡೆದು ಬಂದ ಹಾಗೆ ಬಂದಿದ್ದೇವೆ,'' ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
"ಬಿಜೆಪಿಯಲ್ಲಿ ಯಾವುದೇ ತರಹದ ಭಿನ್ನ ಭಾವನೆಗಳಿಲ್ಲ, ಟೀಕೆ ಟಿಪ್ಪಣಿಗಳು ಸಹಜ. ಐದು ಬೆರಳುಗಳು ಒಂದೇ ಸಮಾನಗಿರುವುದಿಲ್ಲ. ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ವ್ಯತ್ಯಾಸಗಳು ಇರುತ್ತವೆ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ನಾಳೆಯೇ ತೆರೆ ಬೀಳಲಿದೆ
ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ಕೇಳಿಬಂದಿರುವ ನಾಯಕತ್ವ ಬದಲಾವಣೆ ಗೊಂದಲಕ್ಕೆ ಇಂದು ತೆರೆ ಬೀಳಲಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಇಂದು ಸಂಜೆ ಸಭೆ ನಡೆಸಲಿದ್ದು, ಸಭೆಗೆ ಎಲ್ಲರನ್ನು ಬರುವಂತೆ ಆಹ್ವಾನ ಇದೆ. ಆದರೆ ಅರುಣ್ ಸಿಂಗ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಅವಕಾಶ ಸಿಕ್ಕರೆ ಪ್ರತ್ಯೇಕ ಭೇಟಿಯಾಗುತ್ತೇನೆ. ಅವರು ಏನು ಮಾಡುತ್ತಾರೆ'' ನೋಡೋಣವೆಂದರು.
ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಬಿ.ಸಿ. ಪಾಟೀಲ್, "ಬಾಂಬೆ ಟೀಂ ಮೊದಲು ಇತ್ತು, ಈಗ ಇಲ್ಲ. ಈಗಲೂ 16 ಜನರಿಂದಲೇ ಗೊಂದಲ ಎನ್ನುವ ವಿಚಾರವಿದೆ. ಆ ರೀತಿ ಏನೇ ಇದ್ದರೂ ಇಂದು ಸಚಿವ ಈಶ್ವರಪ್ಪ ಸಿಗ್ತಾರೆ, ಅವರ ಜತೆ ಈ ಕುರಿತಂತೆ ಮಾತಾಡುತ್ತೇನೆ. ಈಶ್ವರಪ್ಪ ಯಾವತ್ತೂ ನಮ್ಮ ಪರ ಮಾತಾಡಿಕೊಂಡು ಬಂದಿದ್ದಾರೆ. ಅವರು ಆ ರೀತಿ ಮಾತನಾಡಲು ಸಾಧ್ಯವಿಲ್ಲ,'' ಎಂದು ಪುನರುಚ್ಚರಿಸಿದರು.
ಇದೇ ವೇಳೆ, ನನ್ನ ಅಧಿಕಾರ ನನ್ನ ಮಗ ಚಲಾಯಿಸುವುದು ನನಗೆ ಇಷ್ಟ ಇಲ್ಲ ಎಂಬ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, "ಸಚಿವ ಯೋಗೇಶ್ವರ್ ಅಡ್ಡಗೊಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ,'' ಎಂದು ಆಗ್ರಹಿಸಿದರು.
"ಅದೇ ರೀತಿ ಸಿಎಂ ಯಡಿಯೂರಪ್ಪ ಪರವಾಗಿ ಸಹಿ ಸಂಗ್ರಹ ಮಾಡಿರುವುದೂ ಸರಿಯಲ್ಲ. ಇಂತಹ ಸಂಧರ್ಭದಲ್ಲಿ ಈ ರೀತಿಯ ಯಾವ ಬೆಳವಣಿಗೆಗಳೂ ಸರಿಯಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ, ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಬಾರದು,'' ಎಂದರು.