"ನನ್ನದೇನಿದ್ದರೂ ಸೈಲೆಂಟ್ ರಾಜಕಾರಣ" ಎಂದು ಎಚ್ ಡಿಕೆಗೆ ತಿವಿದ ಜಿಟಿಡಿ
ಮೈಸೂರು, ಜನವರಿ 7: "ಅಬ್ಬರಿಸಿ ಬೊಬ್ಬರಿದರೆ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ" ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ ಜಿಟಿ ದೇವೇಗೌಡ.
ಹುಣಸೂರು ಉಪ ಚುನಾವಣೆಯಲ್ಲಿ ಜಿಟಿಡಿ ತಟಸ್ಥವಾಗಿದ್ದರು. ಹಾಗೆಯೇ ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿಯೂ ತಟಸ್ಥವಾಗೇ ಉಳಿಯುವೆ ಎಂದು ಹೇಳಿದ್ದರು. ಈ ತಮ್ಮ ನಿಲುವಿಗೆ ಜಿಟಿಡಿ ಸ್ಪಷ್ಟನೆಯನ್ನು ಕೂಡ ನೀಡಿದರು.
"ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್"
ನಾನು ಮಾತನಾಡದೆಯೇ ರಾಜಕಾರಣ ಮಾಡಬಲ್ಲೆ ಎಂದು ಹೇಳಿಕೊಂಡ ಜಿಟಿಡಿ, "ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ. ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ" ಎಂದು ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.
"ವೋಟ್ ಹಾಕೋದಷ್ಟೆ ನನ್ ಕೆಲಸ" ಎಂದು ಮತ್ತೆ ಅಸಮಾಧಾನ ಹೊರಹಾಕಿದ ಜಿಟಿಡಿ
"ಇಡೀ ರಾಜ್ಯವೇ ಅಣ್ಣ ಎಂದು ಕರೆದಿದ್ದು ಕುಮಾರಸ್ವಾಮಿಗೆ"
"ಕುಮಾರಸ್ವಾಮಿ ಅವರಿಗೆ ಯಾಕೆ ವೈರಾಗ್ಯ? ಅವರಿಗೆ ವೈರಾಗ್ಯ, ರಾಜಕೀಯ ನಿವೃತ್ತಿ ಎರಡೂ ಬೇಡ. ಅವರಿಗೆ ಅದೃಷ್ಟ ಚೆನ್ನಾಗಿದೆ. ಇನ್ನೊಂದು ಬಾರಿ ಮುಖ್ಯಮಂತ್ರಿಯು ಆಗಬಹುದು. ಅವರ ಕುಟುಂಬ ದೈವ ಭಕ್ತ ಕುಟುಂಬ. ಅವರು ಫಿನಿಕ್ಸ್ ನಂತೆ ಎದ್ದುಬರಬಹುದು. ಅವರು ಅಂದುಕೊಂಡಿದ್ದೆಲ್ಲವು ಆಗಿದೆ.
ಮೊದಲ ಬಾರಿ ಎಂಎಲ್ ಎ ಆದರು, ಸಿಎಂ ಆದರು. ಮೂರನೇ ಬಾರಿ ಎಂಎಲ್ ಎ ಆದರು. ಆಗಲೂ ಸಿಎಂ ಆದರು. ಆದರೆ ಪಾಪಾ ನಮ್ಮ ರೇವಣ್ಣ ಮಾತ್ರ ಡಿಸಿಎಂ ಆಗೋ ಆಸೆ ಈಡೇರಿಲ್ಲ. ರೇವಣ್ಣ ಡಿಸಿಎಂ ಆಗಲಿ ಅನ್ನೋದು ನನ್ನ ಆಸೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ವೈರಾಗ್ಯ ರಾಜಕೀಯ ನಿವೃತ್ತಿ ಮಾತು ಬೇಡ" ಎಂದು ವ್ಯಂಗ್ಯವಾಗಿಯೇ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.
ಬಿಜೆಪಿ ಬಿಟ್ಟು ಯಾರೂ ಬರಲ್ಲ ಎಂದ ಜಿಟಿಡಿ
15 ಬಿಜೆಪಿ ಶಾಸಕರು ಹೊರಗೆ ಬರ್ತಾರೆಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಈಗ ಯಾರೀ ಬಿಜೆಪಿ ಬಿಟ್ಟು ಹೋಗ್ತಾರೆ. ಅಧಿಕಾರ ಇದೆ, ಸುಭದ್ರ ಸರ್ಕಾರ ಇದೆ. ಹೋಗೋದಾದ್ರೆ ಮೂರು ವರ್ಷದ ನಂತರ ಹೋಗ್ತಾರೆ. ಅದು ಏನಾದರೂ ಸರಿಯಾದ ಹೊಂದಾಣಿಕೆ ಇಲ್ಲವಾದ್ರೆ ಮಾತ್ರ. 15 ಮಂದಿ ಹೋಗಲ್ಲ. ಹೋಗಲ್ಲ ಅಂತಾನೆ ಬಿಜೆಪಿಗೆ ಹೋದ್ರು. ಮಂತ್ರಿ ಆಗಬೇಕು ಎಂದು ಹೋದವರು ಮತ್ತೆ ಯಾಕೆ ಬರ್ತಾರೆ? ಯಾರು ಕೂಡ ಬಿಜೆಪಿಯಿಂದ ಬರೋದಿಲ್ಲ" ಎಂದು ಹೇಳಿದ್ದಾರೆ.
"ಜೆಡಿಎಸ್ ಶಾಸಕನಾಗೇ ಇರುತ್ತೇನೆ" ಎಂದು ಮತ್ತೆ ಸಿಎಂ ಹೊಗಳಿದ ಜಿಟಿಡಿ
"ಹೆಸರು ಬದಲಾವಣೆ ಬಿಟ್ಟು ಅಭಿವೃದ್ಧಿ ಮಾಡಲಿ"
ಸದ್ಯಕ್ಕೆ ಸುದ್ದಿಯಲ್ಲಿರುವ, ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, "ರಾಮನಗರ ಜಿಲ್ಲೆಗೆ ತನ್ನದೆ ಆದ ಇತಿಹಾಸ ಇದೆ. ಹೆಸರು ಬದಲಾವಣೆಯ ಚರ್ಚೆ ಬಿಟ್ಟು ಅಭಿವೃದ್ಧಿ ಮಾಡಲಿ.
ರಾಮಮಂದಿರವನ್ನು ಯಾಕೆ ಅಯೋಧ್ಯೆಯಲ್ಲೇ ಕಟ್ಟುತ್ತಿದ್ದಾರೆ? ಅದಕ್ಕೆ ಒಂದು ಇತಿಹಾಸ ಇದೆ ಅನ್ನುವ ಕಾರಣಕ್ಕೆ ತಾನೇ. ರಾಮನಗರದಿಂದ ಹೋದವರು ರಾಜ್ಯವನ್ನು ಆಳಿದ್ದಾರೆ. ರಾಮನಗರ ಜಿಲ್ಲೆ ಬೆಂಗಳೂರು, ಮೈಸೂರಿನಂತೆ ಒಂದು ನಗರ ಅಷ್ಟೇ. ರಾಮ ಅಂತ ಹೆಸರಿದೆ ಅನ್ನೋ ಕಾರಣಕ್ಕೆ ಬದಲಾವಣೆ ಬೇಡ" ಎಂದರು.