ಅದ್ಧೂರಿಯ ಮೈಸೂರು ದಸರಾ; ಜಂಬೂಸವಾರಿಗೆ ಸಾಕ್ಷಿಯಾದ ಲಕ್ಷಾಂತರ ಜನ
ಮೈಸೂರು, ಅಕ್ಟೋಬರ್ 8: ಐತಿಹಾಸಿಕ 409ನೇ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಮಂಗಳವಾರ ಸಾಕ್ಷಿಯಾದರು.
ಈ ಒಂದು ಅಪರೂಪದ ಕ್ಷಣಕ್ಕಾಗಿ ವರ್ಷದಿಂದ ಕಾಯುತ್ತಿದ್ದ ಮಂದಿ ಚಿನ್ನದ ಅರ್ಜುನ ಹೊತ್ತ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಯನ್ನು ಕಣ್ಣು ತುಂಬಿಸಿಕೊಂಡು ಕೃತಾರ್ಥರಾದರು.
ಜಂಬೂಸವಾರಿ ಕಣ್ತುಂಬಿಕೊಂಡ ಜನ
ಬೆಳಗ್ಗಿನಿಂದಲೇ ಸುತ್ತಮುತ್ತಲಿನ ಹಳ್ಳಿಗಳಿಂದ, ಮೊದಲೇ ನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಲಕ್ಷಾಂತರ ಮಂದಿ ಅರಮನೆ ಹಾಗೂ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಸ್ ಪಡೆದವರು ಕಾಯ್ದಿರಿಸಿದ ಸ್ಥಳಗಳಲ್ಲಿ ಆಸೀನರಾದರೆ, ಉಳಿದವರ ಪೈಕಿ ಕೆಲವರು ರಸ್ತೆ ಬದಿಯಲ್ಲಿ ಸೂಕ್ತವಾದ ಜಾಗವನ್ನು ಆರಿಸಿಕೊಂಡು ಆಸೀನರಾಗಿದ್ದರು. ಮತ್ತೆ ಕೆಲವರು ಕಟ್ಟಡ ಹಾಗೂ ಮರಗಳ ಮೇಲೆ ಹತ್ತಿ ಕುಳಿತು ಜಂಬೂಸವಾರಿಯನ್ನು ವೀಕ್ಷಿಸಿದರು.
ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ
ಸಂಪ್ರದಾಯದಂತೆ ಬೆಳಿಗ್ಗೆ ಅರಮನೆ ದರ್ಬಾರ್ ಹಾಲ್ನಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಮುಗಿಸಿದ ಯದುವೀರ್ ಒಡೆಯರ್ ಅವರು, ಅರಮನೆಯಿಂದ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಬನ್ನಿಪೂಜೆ ನೆರವೇರಿಸಿ ಬಂದ ಬಳಿಕ ಒಡೆಯರ್ ಅವರ ಅಪ್ಪಣೆ ಪಡೆದ ಬಳಿಕ ಜಂಬೂಸವಾರಿಗೆ ಮುಂದಿನ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು.
ಮಧ್ಯಾಹ್ನ ಮುಖ್ಯಮಂತ್ರಿಯಿಂದ ನಂದಿ ಧ್ವಜಕ್ಕೆ ಪೂಜೆ
ಮಧ್ಯಾಹ್ನ 2.09ಕ್ಕೆ ಬಲರಾಮ ದ್ವಾರದ ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂಜೆ ನೆರವೇರಿಸಿದರು. ಈ ಸಂದರ್ಭ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ಈ ವೇಳೆ ಸ್ತಬ್ಧ ಚಿತ್ರ ಮತ್ತು ಜಾನಪದ ಕಲಾ ತಂಡಗಳು ಸಾಗಿದವು.
ಚಾಮುಂಡಿ ದೇವಿ ಮೆರವಣಿಗೆಗೆ ಜನರ ಜೈಕಾರ
ಸಂಜೆ 4.17ರ ಕುಂಭ ಲಗ್ನದಲ್ಲಿ ಅರ್ಜುನ ಹೊತ್ತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ನೆರವೇರಿಸಿದರು. ಇದೇ ವೇಳೆ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅರ್ಜುನನಿಗೆ ಕಾವೇರಿ ಮತ್ತು ವಿಜಯ ಎಂಬ ಹೆಣ್ಣಾನೆಗಳು ಕುಮ್ಕಿ ಆನೆಗಳಾಗಿ ಮೆರವಣಿಗೆಯುದ್ದಕ್ಕೂ ಸಾಗಿದವು. ಇನ್ನು ಅಶ್ವದಳ, ಪೊಲೀಸ್ ಕವಾಯತ್ ಸಾಥ್ ನೀಡಿತು. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಕುಳಿತಿದ್ದ ಜನ ತಾಯಿ ಚಾಮುಂಡೇಶ್ವರಿಗೆ ಜೈಕಾರ ಕೂಗುತ್ತಾ ಕಣ್ತುಂಬಿಕೊಂಡರು.