ಮೇಕೆದಾಟು, ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡಲು ಬಿಜೆಪಿ ಕಟಿಬದ್ಧ: ಅರುಣ್ ಸಿಂಗ್
ಮೈಸೂರು, ಸೆಪ್ಟೆಂಬರ್ 1: ಕಾವೇರಿ ಜಲ ವಿವಾದ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನ ವಿಚಾರದಲ್ಲಿ ಕರ್ನಾಟಕದ ಪರ ಬ್ಯಾಟ್ ಬೀಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, "ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡಲು ಬಿಜೆಪಿ ಕಟಿಬದ್ಧವಾಗಿದೆ," ಎಂದು ತಿಳಿಸಿದ್ದಾರೆ.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಿಂದ ತಮಿಳುನಾಡಿಗೆ 30 ಟಿಎಂಸಿ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶವನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದುಕೊಂಡು ಗೌರವಿಸುತ್ತೇವೆ. ಕಾವೇರಿ ನೀರು ನಿರ್ಹಹಣಾ ಮಂಡಳಿ ನೀಡಿರುವ ಆದೇಶವನ್ನು ಪರಿಶೀಲಿಸಲಾಗುವುದು. ಈ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತೇವೆ," ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚಿಸಿದ ಪ್ರಾಧಿಕಾರ
ಇದೇ ವೇಳೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಬಿಜೆಪಿ ಘಟಕ ವಿರೋಧಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, "ಕರ್ನಾಟಕದ ಪರ ಬ್ಯಾಟಿಂಗ್ ಮಾಡಿದ ಅರುಣ್ ಸಿಂಗ್, ಮೇಕೆದಾಟು ಯೋಜನೆ ವಿಚಾರದಲ್ಲೂ ರಾಜ್ಯ ಸರ್ಕಾರ ಮತ್ತು ಬಿಜೆಪಿ ಕರ್ನಾಟಕದ ರೈತರ ಹಿತ ಕಾಪಾಡಲಿದೆ ಎಂದು ಭರವಸೆ ನೀಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಬದಲಾಗಲಿದ್ದಾರೆಯೇ? ಎಂಬ ಪ್ರಶ್ನೆಗೆ ಹಾಗಾದರೇ ನೀವೇ ಹೇಳಿ ಯಾರು ಬರುತ್ತಿದ್ದಾರೆ?," ಎಂದು ನಗುತ್ತಲೇ ಉತ್ತರಿಸಿದರು.
ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಅರಣ್ ಸಿಂಗ್
ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು. ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆ ಇದೇ ಮೊದಲ ಬಾರಿ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಅರಣ್ ಸಿಂಗ್ಗೆ, ಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಈ ವೇಳೆ ಸುತ್ತೂರು ಶ್ರೀಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಅರುಣ್ ಸಿಂಗ್, ಬಳಿಕ ಶ್ರೀಗಳೊಂದಿಗೆ ಉಭಯ ಕುಶಲೋಪರಿ ಮಾತುಕತೆ ನಡೆಸಿದರು.
ಮಠಕ್ಕೆ ಭೇಟಿ ನೀಡಿದ ಅರುಣ್ ಸಿಂಗ್ಗೆ ಸಂಸದ ಪ್ರತಾಪ್ ಸಿಂಹ, ಮಾಜಿ ಎಂಎಲ್ಸಿ ಸಿದ್ದರಾಜು, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್, ನಗರಾಧ್ಯಕ್ಷ ಶ್ರೀವತ್ಸ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಅರುಣ್ ಸಿಂಗ್ಗೆ ಸಾಥ್ ನೀಡಿದರು.ಮಹಿಳೆಯರಿಗೆ ಡ್ರೆಸ್ ಕೋಡ್ ಕಡ್ಡಾಯಕ್ಕೆ ಒತ್ತಾಯ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ, ಮೈಸೂರಿನ ಪ್ರಮುಖ ಪ್ರವಾಸಿತಾಣ ಚಾಮುಂಡಿ ಬೆಟ್ಟಕ್ಕೆ ಡ್ರೆಸ್ ಕೋಡ್ ನಿಯಮ ಜಾರಿಗೆ ತರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಚಾಮುಂಡಿ ಬೆಟ್ಟ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ಡ್ರೆಸ್ ಕೋಡ್ ಕಡ್ಡಾಯ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ
"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದು, ವಿದೇಶಿಗರಂತೆ ನಮ್ಮ ಜನರು ಇಂದು ಓಡಾಡುತ್ತಿದ್ದಾರೆ. ನೈಟ್ ಪ್ಯಾಂಟ್ಸ್, ಜೀನ್ಸ್ ಪ್ಯಾಂಟ್ ಧರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ರಾಜ್ಯ ಸರ್ಕಾರ ನಮ್ಮ ರಾಜ್ಯದ ದೇವಸ್ಥಾನಗಳಿಗೆ ಪ್ರವೇಶಿಸುವ ಭಕ್ತಾಧಿಗಳಿಗೆ ಡ್ರೆಸ್ ಕೋಡ್ ನಿಯಮ ಜಾರಿಗೊಳಿಸುವ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ. ಕೂಡಲೇ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕಿದ್ದು, ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ," ಹಿಂದೂ ಮಹಾಸಭಾ ಪದಾಧಿಕಾರಿ ನಾಗಮಣಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜೀವನ ಹಾಗೂ ಜೀವನ ಶೈಲಿಯನ್ನೇ ಬದಲಿಸಿ
"ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಕೆಲವರಿಗೆ ಸನಾತನ ಧರ್ಮದ ಅರಿವಿಲ್ಲದಿರುವುದು ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಎಲ್ಲಾ ಧರ್ಮದಲ್ಲಿಯೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡಿದರೂ, ನಾವೆಲ್ಲರೂ ಪಾಶ್ಚಾತ್ಯ ಧರ್ಮಗಳತ್ತ ವಾಲಿಕೊಂಡಿರುವುದು ನಮ್ಮ ಜೀವನ ಹಾಗೂ ಜೀವನ ಶೈಲಿಯನ್ನೇ ಬದಲಿಸಿದೆ. ಹೀಗಾಗಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ," ಎಂದು ಮಾಹಿತಿ ನೀಡಿದರು.
ಗ್ಯಾಂಗ್ ರೇಪ್ ಪ್ರಕರಣ ನಿಜಕ್ಕೂ ಖಂಡನೀಯ
ಇದೇ ವೇಳೆ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ಸಂಗ್ರಹವಾಗುವ ಹುಂಡಿ ಹಣದ ಬಗ್ಗೆ ಮಾತನಾಡಿದ ನಾಗಮಣಿ, "ಮುಜರಾಯಿ ಸುಪರ್ದಿಗೆ ಬರುವ ಎಲ್ಲಾ ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಬಳಸಿಕೊಂಡು ಭಕ್ತರಿಗೆ ಉಚಿತವಾಗಿ ಅನ್ನ ದಾಸೋಹ ನೀಡುವುದು ಸೇರಿದಂತೆ ಇನ್ನಿತರ ಅನುಕೂಲಗಳಿಗೆ ಬಳಸಬೇಕೆಂದು," ಒತ್ತಾಯಿಸಿದರು.
"ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ನಿಜಕ್ಕೂ ಖಂಡನೀಯ. ಶಾಂತಿಪ್ರಿಯ ನಗರಿ ಎನಿಸಿರುವ ಮೈಸೂರಿನಲ್ಲಿ ಇಂತಹ ಘಟನೆ ನಡೆದಿರುವುದು ಇಲ್ಲಿನ ಜನರಿಗೆ ನೋವುಂಟು ಮಾಡಿದೆ. ಆದರೆ ಈ ವಿಷಯದಲ್ಲಿ ತುರ್ತು ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.