ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ, ಮಾಧ್ಯಮಗಳ ಮೇಲೆ ಜವಾಬ್ದಾರಿ ಹೆಚ್ಚಿದೆ: ಎಚ್ಡಿಕೆ
ಮೈಸೂರು, ಮಾರ್ಚ್ 01: ಆಧುನಿಕ ಕಾಲದಲ್ಲಿ ಮಾಧ್ಯಮಗಳು ಪೈಪೋಟಿಗೆ ಇಳಿದಿದ್ದು, ಮಾಧ್ಯಮಗಳು ಪ್ರಾಮಾಣಿಕವಾಗಿ ಮಾನವೀಯ ಮೌಲ್ಯದ ಸುದ್ದಿಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.
ಮೈಸೂರಿನ ಸುತ್ತೂರಿನಲ್ಲಿ ನಡೆಯುತ್ತಿರುವ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾನು ಮೊದಲಿನಿಂದಲೂ ಮಾಧ್ಯಮ ಕ್ಷೇತ್ರದ ಜೊತೆಗೆ ಹೆಚ್ಚು ನಂಟು ಹೊಂದಿದ್ದೇನೆ. ಸರ್ಕಾರದ ಉದ್ದೇಶ, ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಕುಮಾರಸ್ವಾಮಿ ಸಿಎಂ ಆಗಲು 'ಈ ದೇವಿ'ಯ ಆಶೀರ್ವಾದವೇ ಕಾರಣವಂತೆ
ನಮ್ಮ ಸರ್ಕಾರದ ಸಾಲ ಮನ್ನಾದಂತಹ ಮಹತ್ವದ ಯೋಜನೆ ಜನರಿಗೆ ತಲುಪಿಸುವಲ್ಲಿ ಮಾಧ್ಯಮ ಕೆಲಸ ಮಾಡಬೇಕಿದೆ. ಆದರೆ ಸುಳ್ಳು ಸುದ್ದಿ ಹಬ್ಬಿಸಿ ನಿಜವಾದ ಸುದ್ದಿ ಯಾವುದು ಎಂಬ ಗೊಂದಲ ಸೃಷ್ಟಿ ಮಾಡುವ ಕಾಲ ಬಂದಿದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಧ್ಯಮಗಳಿಂದ ಮಾತ್ರ ಸಾಧ್ಯ. ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದೇವೆ. ನಮ್ಮ ಸರ್ಕಾರ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವದತ್ತ ಸಂಘಟನಾತ್ಮಕ ಹೆಜ್ಜೆ ಹಾಕುತ್ತಿರುವುದು ಸಂತೋಶದ ಸಂಗತಿ. ಸಂಘದ ಹುಟ್ಟಿಗೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರನ್ನು ನೆನಪಿಸಿಕೊಳ್ಳಬೇಕು. ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ವಿದ್ಯುನ್ಮಾನ ಕ್ಷೇತ್ರವಂತೂ ವಿಸ್ತಾರಗೊಳ್ಳುತ್ತಲೇ ಇದೆ. ಹಲವಾರು ಹೊಸ ಟಿ.ವಿ. ಚಾನಲ್ಗಳು ರಾಜ್ಯದಲ್ಲಿ ಕಾರ್ಯಾರಂಭ ಮಾಡಿ, ವೀಕ್ಷಕರಿಗೆ ಸುದ್ದಿ ನೀಡಲು ಪೈಪೋಟಿಗಿಳಿದಿವೆ.ಆದರೆ ಮಾಧ್ಯಮಗಳು ಮಾನವೀಯ ಕಳಕಳಿಯುಳ್ಳ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳನ್ನು, ವಿಚಾರಗಳೆಡೆ ಹೆಚ್ಚಿನ ಗಮನಹರಿಸಬೇಕಿದೆ ಎಂದರು.
ಹೇಳಿಕೆ ತಪ್ಪಾಗಿ ವರದಿ, ಚಾನೆಲ್ ವಿರುದ್ಧ ಕುಮಾರಸ್ವಾಮಿ ಬೇಸರ
ಅಪರಾಧ ಸುದ್ದಿಗಳಲ್ಲಿ ಕ್ರೌರ್ಯವನ್ನು ಹೆಚ್ಚಾಗಿ ವೈಭವೀಕರಿಸದೆ ವಸ್ತುನಿಷ್ಠ ವರದಿಗಳನ್ನು ಜನರ ಮುಂದಿಡಬೇಕು. ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ಅಳವಡಿಸಿಕೊಳ್ಳಬೇಕಾದುದು, ಇಂದಿನ ಅಗತ್ಯವಾಗಿದೆ. ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ವಿಭಜಿಸುವ ಶಕ್ತಿಗಳಿಂದ ಜನರನ್ನು ರಕ್ಷಿಸುವುದು ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸುವುದು ಮಾಧ್ಯಮಗಳ, ಪತ್ರಕರ್ತರ ಇವತ್ತಿನ ತುರ್ತು ಕೆಲಸವಾಗಿದೆ ಎಂದರು.