ಮೈಸೂರು ನಂಬರ್ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರು
ಮೈಸೂರು, ಜನವರಿ 19: ಸ್ವಚ್ಛ ನಗರಿ ಸ್ಪರ್ಧೆಯಲ್ಲಿ ಕಳೆದ ವರ್ಷ ಐದನೇ ಸ್ಥಾನಕ್ಕೆ ತೃಪ್ತಿ ಹೊಂದಿದ್ದ ಮೈಸೂರು, ಈ ಬಾರಿ ಸ್ವಚ್ಛತೆಯಲ್ಲಿ ನಂಬರ್ ಒನ್ ಆಗುವ ಪ್ರಯತ್ನಕ್ಕೆ ಮುಂದಾಗಿದ್ದು, ಸಾರ್ವಜನಿಕರ ಸಹಕಾರವನ್ನೂ ಕೋರಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಮಹಾನಗರಪಾಲಿಕೆ ಆಯುಕ್ತ ಡಾ.ಗುರುದತ್ ಹೆಗಡೆ ಅವರು, ಕಳೆದ ಬಾರಿ 6 ಸಾವಿರ ಅಂಕಗಳಿಗೆ 5298 ಅಂಕಗಳಿಸಿ ನಗರವು ಐದನೇ ಸ್ಥಾನವನ್ನು ಪಡೆದುಕೊಂಡಿತ್ತು. ಇದುವರೆಗೂ ಒಂದು ತಿಂಗಳ ಕಾಲ ಸರ್ವೆ ನಡೆಸಲಾಗುತ್ತಿತ್ತು. ಈ ಬಾರಿ ಜ.1ರಿಂದ ಮಾ.31ರವರೆಗಿನ 90 ದಿನಗಳ ಕಾಲ ಸ್ವಚ್ಛ ಸರ್ವೇಕ್ಷಣೆ ನಡೆಯಲಿದೆ. ಕಳೆದ ವರ್ಷ ನಾಲ್ಕು ಅಂಶಗಳ ಅನುಸಾರ ಅಂಕಗಳನ್ನು ವಿಂಗಡಿಸಲಾಗಿತ್ತು. ಈ ಬಾರಿ ಶೇ.30(1800 ಅಂಕ)ರಷ್ಟು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ, ಸೇವಾ ಮಟ್ಟದ ಪ್ರಗತಿ ಶೇ.40 (2400 ಅಂಕ)ರಷ್ಟು, ಪ್ರಮಾಣೀಕರಣ ಶೇ.25(1800)ರಷ್ಟು ನಿಗದಿ ಪಡಿಸಲಾಗಿದೆ ಎಂದು ಹೇಳಿದರು.
ಮೇಯರ್ ಅವಧಿ ಇಂದು ಮುಕ್ತಾಯ; ಮೀಸಲಿನತ್ತ ಎಲ್ಲರ ಚಿತ್ತ
ಪ್ರಮಾಣೀಕರಣದಲ್ಲಿ ಸ್ಟಾರ್ ರೇಟಿಂಗ್ 1100
ಕಸ ಸಾಗಿಸುವ ವಾಹನಗಳ ಅವಶ್ಯಕತೆ ಹಿನ್ನೆಲೆಯಲ್ಲಿ ತಿಂಗಳಲ್ಲಿ ಟೆಂಡರ್ ಮೂಲಕ ಹೆಚ್ಚುವರಿ ವಾಹನಗಳ ಖರೀದಿಸಲಾಗುವುದು. ಪ್ರಮಾಣೀಕರಣದಲ್ಲಿ ಸ್ಟಾರ್ ರೇಟಿಂಗ್ 1100, ಬಯಲು ಬಹಿರ್ದೆಸೆ ಮುಕ್ತ ಹಾಗೂ ತ್ಯಾಜ್ಯ ನೀರು ಮರು ಬಳಕೆಗೆ 700 ಅಂಕಗಳನ್ನು ನಿಗದಿಪಡಿಸಿದೆ. ಮೈಸೂರು ಈ ಬಾರಿ ಸ್ಟಾರ್ ರೇಟಿಂಗ್ ಪಟ್ಟಿಯಲ್ಲಿದೆ. ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ.
ತ್ಯಾಜ್ಯ ನಿರ್ಮಾಣ ಘಟಕ್ಕೆ ಅನುಮೋದನೆ
ಅಲ್ಲದೆ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಂಡು ಉದ್ಯಾನವನಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಜತೆಗೆ ಕಟ್ಟಡ ತ್ಯಾಜ್ಯ ನಿರ್ಮಾಣ ಘಟಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಈ ವರ್ಗಗಳಲ್ಲಿ ಸ್ವಚ್ಛ ಸರ್ವೇಕ್ಷಣೆಯ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಲು ಸಹಕಾರಿಯಾಗಲಿದೆ ಎಂದರು.
ನಂಬರ್ ಒನ್ ಖಂಡಿತ ನಾವೇ ಬರುತ್ತೇವೆ
ಎಲ್ಲೆಂದರಲ್ಲಿ ಕಸ ಎಸೆದು ಬೇಜವಾಬ್ದಾರಿ ತೋರುವ ನಾಗರೀಕರು ನಗರದ ದೃಷ್ಟಿಯಿಂದ ಜವಾಬ್ದಾರಿ ತೋರಬೇಕಿದೆ. ವಾಣಿಜ್ಯ ಕಟ್ಟಡಗಳಲ್ಲಿ ಹೆಚ್ಚಾಗಿ ಕಸ ನೀಡದೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಲುವಿನ ಮೂಲಕ ಕಸವನ್ನು ವಾಹನಕ್ಕೆ ನೀಡುವಂತೆ ಎಚ್ಚರಿಸಲಾಗುವುದು. ಅದಕ್ಕೂ ಹೆಚ್ಚಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರಜ್ಞಾವಂತರೆಲ್ಲರ ಪ್ರಯತ್ನವನ್ನೂ ಮೀರಿ ಸಾರ್ವಜನಿಕರು ಕಸ ಹಾಕದೇ ಪೌರ ಕಾರ್ಮಿಕರಿಗೆ ಕಸ ನೀಡಿ ನಮ್ಮೊಂದಿಗೆ ಜೋಡಿಸಿದರೆ ನಂಬರ್ ಒನ್ ಖಂಡಿತ ನಾವೇ ಬರುತ್ತೇವೆ ಎಂದರು.
ಜೈಲು ಶಿಕ್ಷೆ ಅಥವಾ ಸಾವಿರ ರುಪಾಯಿ ದಂಡ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆ, ರಾಜಕೀಯ ಪಕ್ಷ, ಖಾಸಗಿ ವ್ಯಕ್ತಿಗಳು, ಧಾರ್ಮಿಕ ಸಂಸ್ಥೆ ಇತರೆ ಯಾರೂ ಸಹ ಮಹಾನಗರ ಪಾಲಿಕೆ ಆಸ್ತಿ, ಸರ್ಕಾರಿ, ಖಾಸಗಿ, ಸಾರ್ವಜನಿಕರ ಆಸ್ತಿ, ವಿದ್ಯುತ್ ಕಂಬ, ಮೀಡಿಯನ್ಸ್, ಡಿವೈಡರ್ಸ್, ಕಲ್ವರ್ಟ್ಸ್, ರಸ್ತೆ ಬದಿ ಮರ, ವೃತ್ತದಲ್ಲಿ ಪ್ಲೆಕ್ಸ್, ಬಾವುಟ, ಬಂಟಿಂಗ್ಸ್ ಗಳನ್ನು ಅಳವಡಿಸುವವರಿಗೆ ಆರು ತಿಂಗಳು ಜೈಲು ಶಿಕ್ಷೆ ಅಥವಾ ಸಾವಿರ ರುಪಾಯಿ ದಂಡ ಹಾಗೂ ಎರಡನ್ನು ವಿಧಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.