ಏ.10ರಂದು ಮೈಸೂರಿನಲ್ಲಿ ಬಿಎಸ್ಪಿ ಮಹಾ ಸಮಾವೇಶ:ಮಾಯಾವತಿ ಆಗಮನ
ಮೈಸೂರು, ಮಾರ್ಚ್ 14: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಕೇವಲ 5 ದಿನಗಳು ಕಳೆದಿದೆ. ಇದಕ್ಕೆ ಪುಷ್ಟಿಕೊಡುವಂತೆ ರಾಜಕೀಯ ಚಟುವಟಿಕೆಗಳು ಸಹ ಚುರುಕುಗೊಂಡಿವೆ. ಇತ್ತ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿ ಫೈನಲ್ ಹಂತಕ್ಕೆ ತಲುಪಿವೆ.
ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಸಕಿಗೆ ನೋಟಿಸ್
ಈ ನಡುವೆ ಬಿಎಸ್ ಪಿ ಸಹ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದು, ಏಪ್ರಿಲ್ 10 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಲೋಕಸಮರಕ್ಕೆ ಮಾಯಾವತಿ ನೇತೃತ್ವದ ಬಿಎಸ್ ಪಿ ಸಿದ್ಧತೆ ನಡೆಸುತ್ತಿದ್ದು, ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಈ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಮಾಯಾವತಿ ಬಗ್ಗೆ ಹುಷಾರು! ಅಖಿಲೇಶ್ ಯಾದವ್ಗೆ ಚಿಕ್ಕಪ್ಪನ ಎಚ್ಚರಿಕೆ
ಸಮಾವೇಶದ ಹಿನ್ನೆಲೆಯಲ್ಲಿ ಇಂದು ಮಾಜಿ ಸಚಿವ ಹಾಗೂ ಬಿಎಸ್ ಪಿ ಶಾಸಕ ಎನ್ ಮಹೇಶ್ ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಸಮಾವೇಶ ನಿಮಿತ್ತ ಮೈಸೂರಿಗೆ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಆಗಮಿಸಲಿದ್ದು, ಅಂದು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.
ಸಮಾವೇಶಕ್ಕೆ ಯುಪಿ ಸಂಸದರು, ಮಾಜಿ ಸಚಿವರುಗಳು ಸೇರಿದಂತೆ ರಾಜ್ಯ ಬಿಎಸ್ಪಿ ನಾಯಕರು ಕೂಡ ಭಾಗಿಯಾಗಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷದ ವರ್ಚಸ್ಸು ತೋರಿಸಲು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮುಂದಾಗಿದ್ದು, ಸಮಾವೇಶಕ್ಕೆ 1ಲಕ್ಷ ಮಂದಿ ಕಾರ್ಯಕರ್ತರು ಬರುವ ನಿರೀಕ್ಷೆ ಇದೆ.
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗೆ ಈಗ ಮತ್ತೊಂದು ಪಕ್ಷದ ಬೆಂಬಲ
ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಗಳಿಂದ ಜನ ಸೇರುವ ನಿರೀಕ್ಷೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ಬೇರೆ ಪಕ್ಷಗಳ ಜೊತೆ ಕೈಜೋಡಿಸಿಲ್ಲ. ನಾವು ಸ್ವತಂತ್ರವಾಗಿ ಚುನಾವಣೆ ಎದರಿಸುತ್ತಿದ್ದೇವೆ ಎಂದು ಶಾಸಕ ಎನ್.ಮಹೇಶ್ ಇದೇ ವೇಳೆ ತಿಳಿಸಿದರು.