ದಸರಾ ಆನೆ ದ್ರೋಣ ಹಠಾತ್ ಸಾವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಮಾವುತರು
ಮೈಸೂರು, ಮೇ.06: ಅದು ದಟ್ಟ ಕಾನನ. 1.5 ಸಾವಿರ ಚದರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಹತ್ತಾರು ಆನೆಗಳ ಶಿಬಿರಗಳು. ಆನೆಗಳ ಯೋಗಕ್ಷೇಮ ನೋಡಿಕೊಳ್ಳಲು ಕಾವಾಡಿಗಳು ಹಾಗೂ ಮಾವುತರು ಇದ್ದಾರೆ. ಆದರೆ ಆನೆಗಳ ಅನಾರೋಗ್ಯದ ವೇಳೆ ಅವುಗಳಿಗೆ ಚಿಕಿತ್ಸೆ ನೀಡಲು ಇರುವುದು ಕೇವಲ ಮೂವರು ವೈದ್ಯರು ಮಾತ್ರ. ವಿಪರ್ಯಾಸವೆಂದರೆ ಶಿಬಿರಗಳಿಗೆ ತೆರಳಲು ಅವರಿಗೆ ವಾಹನದ ವ್ಯವಸ್ಥೆಯೇ ಇಲ್ಲ.
ಹೌದು, ಇತ್ತೀಚೆಗೆ ವೈದ್ಯರು ಬರುವುದು ತಡವಾದ ಕಾರಣ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಸಾವಿಗೀಡಾದ ಎಂಬ ಆರೋಪ ಹೆಚ್ಚು ಕೇಳಿ ಬರುತ್ತಿದೆ.ಸಮಯಕ್ಕೆ ಸರಿಯಾಗಿ ವೈದ್ಯರು ಆಗಮಿಸಿದ್ದಲ್ಲಿ ಆತ ಬದುಕುತ್ತಿದ್ದ ಎಂದು ಮಾವುತರು ಕೊರಗುತ್ತಿದ್ದಾರೆ.
ಜೊತೆಗೆ ಹಲವು ಕಾರಣಗಳಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆರು ಆನೆಗಳು ಮೃತಪಟ್ಟಿವೆ. ಸಾಕಷ್ಟು ಪ್ರಕರಣಗಳಲ್ಲಿ ಆನೆಗಳ ಸಾವು ಸಹಜ ಎಂದು ಬಿಂಬಿಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ದಸರಾ ಆನೆ ದ್ರೋಣ ಸಾವಿನ ಸುತ್ತ ಅನುಮಾನದ ಹುತ್ತ
ನಾಗರಹೊಳೆ, ಮಡಿಕೇರಿ, ತಿತಿಮತಿ, ದುಬಾರೆ, ಬಳ್ಳೆ ಆನೆಗಳ ಶಿಬಿರಗಳಲ್ಲಿ ತಲಾ 20ಕ್ಕೂ ಹೆಚ್ಚು ಆನೆಗಳನ್ನು ಸಾಕಲಾಗುತ್ತಿದೆ. ಹುಲಿ ಸೆರೆ, ಮರದ ದಿಮ್ಮಿಗಳ ಸಾಗಣೆ ಹಾಗೂ ಇನ್ನಿತರ ಕೆಲಸಗಳಿಗೆ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅವುಗಳನ್ನು ನೋಡಿಕೊಳ್ಳಲು ಕಾವಾಡಿಗಳು ಹಾಗೂ ಮಾವುತರು ಇದ್ದಾರೆ. ಸಣ್ಣಪುಟ್ಟ ಕಾಯಿಲೆಗಳು ಕಂಡು ಬಂದಲ್ಲಿ ಕಾವಾಡಿಗಳು ಹಾಗೂ ಮಾವುತರ ಪರಂಪರಾಗತವಾಗಿ ಬಂದ ದೇಸಿ ಪದ್ಧತಿ ಚಿಕಿತ್ಸೆ ಮೂಲಕ ಸಮಸ್ಯೆ ಪರಿಹರಿಸುತ್ತಾರೆ.
ಆದರೆ ಆಂಥ್ರಾಕ್ಸ್ , ಅತಿಸಾರ, ವೈರಲ್ , ಅಸ್ತಮಾ, ಬ್ಯಾಕ್ಟೀರಿಯಾ ಕಾರಣದಿಂದ ಬರುವ ಕಾಯಿಲೆಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಬೇಕೇ ಬೇಕು. ಇಲ್ಲವಾದಲ್ಲಿ ಕಾಯಿಲೆ ಉಲ್ಬಣಗೊಂಡು ಆನೆಗಳು ಸಾವಿಗೀಡಾಗುವ ಸಾಧ್ಯತೆ ಹೆಚ್ಚಿದೆ.
ತಲುಪಲು ಕನಿಷ್ಟ ಒಂದು ಗಂಟೆ ಬೇಕು
ಮಾವುತರು ಶಿಬಿರದಲ್ಲಿ ಆನೆಗಳು ಕಾಯಿಲೆಗಳಾದ ಸಂದರ್ಭ ವೈದ್ಯರಿಗೆ ಕೂಡಲೇ ದೂರವಾಣಿ ಮೂಲಕ ವಿಚಾರ ತಿಳಿಸುತ್ತಾರೆ. ಆದರೆ ವೈದ್ಯರು ನಿಗದಿತ ಸ್ಥಳ ತಲುಪಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ ಎಂಬುದು ಮಾವುತರ ಮಾತು. ಅದು ಕೂಡ ಯಾವುದೇ ಬೇರೆ ಕೆಲಸವಿಲ್ಲದಿದ್ದಲ್ಲಿ ಮಾತ್ರ.
ದಸರಾ ಆನೆ ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು
ವೈದ್ಯರಿಗೂ ಬೇಕು ಸೌಲಭ್ಯ
ಇದೇ ವೇಳೆ ಇತರ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದಲ್ಲಿ ಶಿಬಿರದ ಬಳಿಗೆ ಬರಲು ಮತ್ತಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.ಅಧಿಕಾರಿಗಳಿಗೆ ನೀಡುವ ಸೌಲಭ್ಯದಂತೆ ವೈದ್ಯರಿಗೂ ವಾಹನ ಸೌಕರ್ಯ ನೀಡಿದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮಾವುತರು ಹಾಗೂ ಕಾವಾಡಿಗಳು ಹೇಳುತ್ತಾರೆ.
ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು
ವೈದ್ಯರಿಗೆ ಬೇಡಿಕೆ ಹೆಚ್ಚು
ಬಂಡೀಪುರ, ಮಡಿಕೇರಿ ಹಾಗೂ ಬಿಳಿಗಿರಿರಂಗನಬೆಟ್ಟದ ವಲಯಕ್ಕೆ ಸಂಬಂಧಿಸಿದಂತೆ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಡಾ.ನಾಗರಾಜು, ಡಾ. ಮುಜೀಬ್ ಹಾಗೂ ಡಾ. ಪುನೀತ್ ಎಂಬ ಮೂವರು ವೈದ್ಯರು ಮಾತ್ರ ಇದ್ದಾರೆ. ಅರಣ್ಯದ ವ್ಯಾಪ್ತಿ ಹೆಚ್ಚಿದ್ದರಿಂದ ವೈದ್ಯರಿಗೆ ಬೇಡಿಕೆ ಕೂಡ ಹೆಚ್ಚು. ಯಾವುದೇ ಪ್ರಾಣಿಗಳು ಅರಣ್ಯದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಲ್ಲಿ ಆಯಾ ಭಾಗದ ಅರಣ್ಯ ರಕ್ಷಕರು ಇವರಿಗೆ ದೂರವಾಣಿ ಕರೆ ಮಾಡುತ್ತಾರೆ.
ಪ್ರಾಣಿಗಳ ಸಾವಿಗೆ ಇದು ಕೂಡ ಕಾರಣ
ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಇರುವುದು ಮೂವರು ವೈದ್ಯರು. ಅವರಿಗೆ ವಾಹನ ಸೌಲಭ್ಯವನ್ನು ಮಾತ್ರ ಇಲಾಖೆ ಒದಗಿಸಿಲ್ಲ. ಆನೆಗಳಿಗೆ ಚಿಕಿತ್ಸೆ ನೀಡುವ ಸಂಬಂಧ ವೈದ್ಯರಿಗೆ ದೂರವಾಣಿ ಕರೆ ಬಂದಲ್ಲಿ ಅವರ ಸ್ವಂತ ವಾಹನದಲ್ಲಿ ಸ್ಥಳಕ್ಕೆ ತೆರಳಬೇಕು. ಇಲ್ಲವಾದಲ್ಲಿ ಬಸ್ ಮೂಲಕ ತೆರಳುವ ಅನಿವಾರ್ಯತೆಯಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ವೈದ್ಯರು ಶಿಬಿರಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದು ಪ್ರಾಣಿಗಳ ಸಾವಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ.