ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ: ಮೈಸೂರಿನಲ್ಲಿ ದಂಡ
ಮೈಸೂರು, ಮಾರ್ಚ್ 16: ಒಂದೆಡೆ ಕೊರೊನಾ ಸೋಂಕಿಗೆ ಜನರು ಭೀತಿಗೊಂಡಿದ್ದು, ಹೆಚ್ಚು ಹೆಚ್ಚು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಖರೀದಿಸುತಿದ್ದಾರೆ. ಆದರೆ ಮತ್ತೊಂದೆಡೆ ದುರಾಸೆಯಿಂದ ಔಷಧ ವರ್ತಕರು ಈ ಭೀತಿಯನ್ನೇ ಹಣ ಮಾಡುವ ದಂಧೆಗೆ ಬಳಸಿಕೊಂಡು ಜನರನ್ನು ಸುಲಿಗೆ ಮಾಡುತಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಇಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಪಿ.ಶಿವಣ್ಣ ನೇತೃತ್ವದಲ್ಲಿ ಹಲವು ಔಷಧಿ ಅಂಗಡಿಗಳಿಗೆ ಭೇಟಿ ನೀಡಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳ ಲಭ್ಯತೆ, ಮಾರಾಟ ದರಗಳನ್ನು ಪರಿಶೀಲಿಸಿದರು.
ಮೈಸೂರಿನಲ್ಲಿ ಬರೋಬ್ಬರಿ 107 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ
ಸೋಮವಾರ ಒಟ್ಟು 18 ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ತಪಾಸಣೆ ಮಾಡಿದಾಗ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಗರಿಷ್ಠ ಚಿಲ್ಲರೆ ಬೆಲೆಗಿಂತಲೂ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತಿದ್ದ ವರ್ತಕರಿಗೆ ದಂಡ ವಿಧಿಸಲಾಯಿತು.
ಮಾಸ್ಕ್ ಮತ್ತು ಸ್ಯಾನಿಟೈಸರ್ ಅತೀ ಅಗತ್ಯ ವಸ್ತುಗಳಾಗಿರುವುದರಿಂದ ಕೇಂದ್ರ ಸರ್ಕಾರವು ದಿನಾಂಕ ಮಾರ್ಚ್ ೧೨, ೨೦೨೦ ರಂದು ಪತ್ರ ಸಂಖ್ಯೆ 1-19/16/2020 ಮೂಲಕ ಅಗತ್ಯ ವಸ್ತುಗಳ ಕಾಯ್ದೆಯಡಿ ಸೇರಿಸಲಾಗಿದೆ.
ಆದ್ದರಿಂದ ಚಿಲ್ಲರೆ ಮಾರಾಟಗಾರರಲ್ಲಿ, ಸಗಟು ಮಾರಾಟಗಾರರಲ್ಲಿ ಮತ್ತು ಉತ್ಪಾದಕರಲ್ಲಿ ಈ ಬಗ್ಗೆ ತಿಳುವಳಿಕೆ ನೀಡುತ್ತ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಹಾಗೂ ದರಗಳನ್ನು ಸರ್ಕಾರದ ರೀತಿ ನೀತಿ ಕಾನೂನಾತ್ಮಕ ನಿಯಮಗಳನ್ವಯ ಮಾಡಬೇಕು. ಜಿಲ್ಲೆಯ ಎಲ್ಲ ಉತ್ಪಾದಕರು, ಸಗಟು ಉತ್ಪಾದಕರು, ಚಿಲ್ಲರೆ ಮಾರಾಟಗಾರರು ಅಗತ್ಯವಸ್ತುಗಳ ಕಾಯ್ದೆಯನ್ವಯ ಕೆಲಸ ನಿರ್ವಹಿಸಿ ಎಂದು ಆಹಾರ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ
ಧನ್ವಂತರಿ ರಸ್ತೆಯ ಔಷಧ್ ಕೆಮೆಸ್ಟ್ರಿ ಮೆಡಿಕಲ್ ಸ್ಟೋರ್ ಪರಿಶೀಲಿಸಿ ಮಾಸ್ಕ್ ನ್ನು 30 ರೂ.ಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಬಿಲ್ ಪರಿಶೀಲಿಸಿಲಿಸಿದಾಗ ರೂ. 27.50ಕ್ಕೆ ಖರೀದಿಸುವುದು ಕಂಡು ಬಂದಿದೆ.
ಕೊತ್ವಾಲ್ ರಾಮಯ್ಯ ರಸ್ತೆಯಲ್ಲಿರುವ ಶ್ರೀನಿವಾಸ ಇಮೇಜ್ ಪ್ರಾಡಕ್ಟ್ ಸಗಟು ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿ, ಕಾನೂನು ಮಾಪನ ಶಾಸ್ತ್ರ ಮತ್ತು ಪಟ್ಟಣ ಸಾಮಾಗ್ರಿಯಡಿ ರಿಟೈಲ್ ಶಾಪ್ ಗಳಿಗೆ ಹೆಚ್ಚಿನ ಎಂಆರ್ ಪಿ ನಮೂದಿಸಿದ್ದು, ನಿಯಮ ಉಲ್ಲಂಘನೆಯಾಗಿದೆ. ಅದಕ್ಕಾಗಿ 5,000 ರೂ.ದಂಡ ವಿಧಿಸಲಾಗಿದೆ ಎಂದರು.
ಶ್ರೀ ಬಾಲಾಜಿ ಮೆಡಿಕಲ್ಸ್, ಪಾರ್ವತಿ ಮೆಡಿಕಲ್ಸ್, ಪ್ರೀತಿ ಮೆಡಿಕಲ್ಸ್, ಶ್ರೀ ಮೆಡಿಕಲ್ಸ್, ಮೆಡ್ ಪಾಯಿಂಟ್, ಲಕ್ಷ್ಮಿನಾರಾಯಣ ಸ್ಟೋರ್ಸ್ ಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ. ಕೆಲವು ಕಡೆ ನೋ ಸ್ಟಾಕ್ ಎಂದು ತಿಳಿಸಿದ್ದಾರೆ ಎಂದ ಅವರು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳಿಗೆ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.