ಮೈಸೂರಿನಲ್ಲಿ ಅಕ್ರಮ ಸಂಬಂಧಕ್ಕೆ ವಿವಾಹಿತ ಮಹಿಳೆ ಕೊಲೆ
ಮೈಸೂರು, ಮಾರ್ಚ್ 16: ಅಕ್ರಮ ಸಂಬಂಧಕ್ಕೆ ವಿವಾಹಿತ ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಅಕ್ಕೂರುದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರು ಘಟನೆಗೆ ಸಂಬಂಧಪಟ್ಟ ಎಲ್ಲ ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು. ಘಟನೆಯ ಪೂರ್ಣ ವಿವರ ಇಲ್ಲಿದೆ.
ಅಕ್ಕೂರುದೊಡ್ಡಿಯ ವೆಂಕಟರಂಗ ನಾಯಕ ಎಂಬುವವರ ಪತ್ನಿ ರಾಜಮ್ಮ ಕಳೆದ ಜನವರಿ 28 ರಂದು ಮನೆಯಿಂದಲೇ ಕಾಣೆಯಾಗಿದ್ದರು. ಈ ಕುರಿತು ಅವರ ಪತಿ ಹನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಬೆಂಗಳೂರಿನ ವಿವಾಹಿತ ಪ್ರೇಮಿಗಳಿಬ್ಬರು ಕುಂದಾಪುರದಲ್ಲಿ ಆತ್ಮಹತ್ಯೆಗೆ ಯತ್ನ
ಹನೂರು ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದಾಗ ರಾಜಮ್ಮನಿಗೆ ಆರೋಪಿ ಮಹೇಶ್ ಎಂಬಾತನೊಂದಿಗೆ ಕೆಲವು ವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎಂದು ತಿಳಿದು ಬಂದಿದೆ.
ರಾಜಮ್ಮನನ್ನು ಸಾಯಿಸಲು ತೀರ್ಮಾನ
ಇದೇ ಕಾರಣದಿಂದ ರಾಜಮ್ಮ ನೀನು ನನ್ನೊಂದಿಗೆ ಇರಬೇಕು, ಬೇರೆ ಮನೆ ಮಾಡಿ ನನ್ನನ್ನು ಕರೆದುಕೊಂಡು ಹೋಗು ಎಂದು ದಿನಾಲೂ ಮಹೇಶ್ನನ್ನು ಒತ್ತಾಯಿಸುತ್ತಿದ್ದಳು.
ಆದರೆ, ಮಹೇಶ್ನಿಗೆ ಮದುವೆ ಈಗಾಗಲೇ ಸಂಸಾರವಿದ್ದ ಕಾರಣಕ್ಕೆ ರಾಜಮ್ಮಳ ಕೋರಿಕೆಯನ್ನು ತಿರಸ್ಕರಿಸಿದ್ದ. ಆದರೆ, ರಾಜಮ್ಮನ ವಿಪರೀತ ಹಿಂಸೆಯಿಂದ ಜಿಗುಪ್ಸೆಗೊಂಡು ಈಕೆಯನ್ನೇ ಸಾಯಿಸಿದರೆ ತಾನು ನೆಮ್ಮದಿಯಾಗಿರಬಹುದೆಂದು ಯೋಚಿಸಿದ್ದ. ಅದರಂತೆ ರಾಜಮ್ಮನನ್ನು ಮುಗಿಸಿಬಿಡಲು ಸಂಚು ರೂಪಿಸಿದ್ದ .
ಶವವನ್ನು ತೋಟದಲ್ಲೇ ಹೂತರು
ಮೊದಲೇ ಪೂರ್ವ ಯೋಜನೆಯಂತೆ ಮಹೇಶನು, ಜ. 28 ರಂದು ತಿ.ನರಸೀಪುರ ತಾಲ್ಲೂಕಿನ ಅಕ್ಕೂರುದೊಡ್ಡಿ ಗ್ರಾಮದ ಬಳಿ ತನ್ನ ಸಹಚರ ಸೋಮ ಎಂಬಾತ ನೋಡಿಕೊಳ್ಳುತ್ತಿದ್ದ ತೋಟದ ಮನೆಗೆ ರಾಜಮ್ಮನನ್ನು ಕರೆದುಕೊಂಡು ಬಂದಿದ್ದಾನೆ.
ಅಲ್ಲಿ ಇತರ ಮೂವರು ಸಹಚರರೊಂದಿಗೆ ಸೇರಿಕೊಂಡು ಗುದ್ದಲಿಯಲ್ಲಿ ಹೊಡೆದು ರಾಜಮ್ಮನನ್ನು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಅಲ್ಲೇ ಬಿಟ್ಟು ಹೋಗಿದ್ದು, ಎರಡ್ಮೂರು ದಿನಗಳ ನಂತರ ಬಂದು ಸಾಕ್ಷ್ಯ ನಾಶಪಡಿಸಲು ಶವವನ್ನು ತೋಟದಲ್ಲೇ ಹೂತಿಟ್ಟಿದ್ದರು.
ನಾಲ್ಕು ಜನ ಸಹಚರರೊಂದಿಗೆ ಕೊಲೆ
ಇದಕ್ಕೆ ಚೌಡಯ್ಯ ಮತ್ತು ಮಹದೇವ ಸಹಕಾರ ನೀಡಿದ್ದಾರೆ ಎಂದು ಮಹೇಶ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದಾನೆ. ಕೊಲೆ ಮಾಡಿರುವ ವಿಷಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದರು.
ತಿ.ನರಸೀಪುರ ತಾಲೂಕಿನ ಅಲಗೂಡು ಗ್ರಾಮದ ಮಹೇಶ್ ಅಲಿಯಾಸ್ ದೇವರಗುಡ್ಡ (38), ಅಕ್ಕೂರು ದೊಡ್ಡಿ ಗ್ರಾಮದ ಸೋಮ (34), ಮಹದೇವ ಅಲಿಯಾಸ್ ಮಹದೇವ ನಾಯಕ(50), ಹೆಮ್ಮಿಗೆ ಗ್ರಾಮದ ಚೌಡಯ್ಯ (58) ಬಂಧಿತರಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೂತಿಟ್ಟ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ
ಈತನ ಬಂಧನ ವಿಷಯ ತಿಳಿಯುತ್ತಿದ್ದಂತೆ ತಲಕಾಡಿನ ಮರಳಿನ ಪುಟ್ಟ ದ್ವೀಪದಲ್ಲಿ ಅವಿತುಕೊಂಡಿದ್ದ ಸೋಮನನ್ನು ಸೆರೆಹಿಡಿದ ಪೊಲೀಸರು, ನಂತರ ಚೌಡಯ್ಯ ಮತ್ತು ಮಹದೇವನನ್ನು ಬಂಧಿಸಿದ್ದಾರೆ.
ಹೂತಿಟ್ಟ ಶವವನ್ನು ಹೊರತೆಗೆದು ಮೈಸೂರು ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ್ದ ಆಯುಧ(ಸಲಿಕೆ), ಮೊಬೈಲ್ಗಳು, ಮೃತರ ತಾಳಿ, ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.