ಮೈಸೂರು ಜನತೆಯ ನಂಟು ಬಿಡದ ಮದಗಜಗಳ ಪೆರೇಡ್
ಮೈಸೂರು,ಜನವರಿ.05: ನಂಜನಗೂಡು ತಾಲೂಕಿನ ಹೆಡಿಯಾಲ ವ್ಯಾಪ್ತಿಯ ಗ್ರಾಮಗಳಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಿಂದ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಎಲ್ಲೆಂದರಲ್ಲಿ ಪೆರೇಡ್ ನಡೆಸುತ್ತಿವೆ. ಇದರಿಂದ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಬೆಳೆದ ಬೆಳೆಯನ್ನು ಸರ್ವನಾಶ ಮಾಡಿವೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಿಂದ ಭಾನುವಾರ ರಾತ್ರಿ ಬಂದ ಸುಮಾರು 45ಕ್ಕೂ ಹೆಚ್ಚು ಆನೆಗಳು ಸೋಮವಾರ ರಾತ್ರಿಯವರೆಗೂ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲೇ ಅಡ್ಡಾಡುತ್ತಿದ್ದವು. ಅರಣ್ಯದಲ್ಲಿ ಆಹಾರದ ಕೊರತೆ ಎದುರಿಸುತ್ತಿರುವ ಆನೆಗಳು ನಾಡಿನ ಕಡೆಗೆ ತಮ್ಮ ಪಯಣ ಶುರುವಿಟ್ಟಿದ್ದು, ಜನರನ್ನು ಬೆಚ್ಚಿ ಬೀಳಿಸಿವೆ.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]
ರೈತರ ಜಮೀನಿಗೆ ನುಗ್ಗಿ ಬಾಳೆ, ಕಬ್ಬು, ಇನ್ನಿತರ ತರಕಾರಿಗಳನ್ನು ನಾಶಮಾಡಿದ ಕಾಡಾನೆಗಳನ್ನು ಜನ ಕಿರುಚುತ್ತಾ, ಪಟಾಕಿ ಸಿಡಿಸುತ್ತಾ, ನಾಡಿನಿಂದ ಕಾಡಿನತ್ತ ಕಳುಹಿಸಿದ್ದಾರೆ. ಅವು ಸದ್ಯಕ್ಕೆ ಕಾಡಿಗೆ ಹೋಗುವ ಲಕ್ಷಣಗಳಂತೂ ಕಂಡು ಬರುತ್ತಿಲ್ಲ. ಯಾವಾಗ ಬೇಕಾದರೂ ರೈತರ ಜಮೀನಿಗೆ ಪುನಃ ಲಗ್ಗೆಯಿಡುವ ಸಾಧ್ಯತೆ ಹೆಚ್ಚಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆಗಳ ಸಂತಾನೋತ್ಪತ್ತಿ ಪ್ರತಿ ವರ್ಷವೂ ಹೆಚ್ಚಳವಾಗುತ್ತಿದೆ. ಇದು ದೇಶದ ಅತಿ ಹೆಚ್ಚು ಕಾಡಾನೆಗಳ ವಾಸಸ್ಥಾನವಾಗಿ ಮಾರ್ಪಾಟಾಗುತ್ತಿದೆ. ಕಾಡಿನಲ್ಲಿ ಸಮರ್ಪಕ ಆಹಾರ ಸಿಗದ ಕಾರಣ ಆನೆಗಳು ಈಗ ನಾಡಿನತ್ತ ಮುಖ ಮಾಡಿವೆ. ಒಟ್ಟಿನಲ್ಲಿ ಕೃಷಿ ಫಸಲನ್ನು ಕಳೆದುಕೊಂಡ ರೈತರು ಸಾಕಷ್ಟು ಪರಿತಪಿಸುತ್ತಿದ್ದಾರೆ.[ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?]
ಹೆಡಿಯಾಲ ಗ್ರಾಮದ ಸುತ್ತಮುತ್ತ ಆಗಾಗ್ಗೆ ಬರುವ ಕಾಡಾನೆಗಳು ರೈತರ ಜಮೀನಿನಲ್ಲೇ ವಾಸ್ತವ್ಯ ಹೂಡುತ್ತಿವೆ. ಅವುಗಳನ್ನು ಕಾಡಿಗೆ ಅಟ್ಟಿ ನೆಮ್ಮದಿಯಿಂದ ಇರುವ ವೇಳೆಗೆ ದೊಡ್ಡ ಹಿಂಡಿನೊಂದಿಗೆ ಬಂದಿದ್ದ ಕಾಡಾನೆಗಳು ಹೆಡಿಯಾಲ ಗ್ರಾಮದ ಸಾರ್ವಜನಿಕ ವಸತಿ ನಿಲಯದ ಮುಂಭಾಗದ ವಿ.ಎ. ಪ್ರಕಾಶ್ ಎಂಬುವವರ ಜಮೀನಿನಲ್ಲಿ ನಿಂತಿದ್ದವು.[ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ]