ಮಾವು ಮೇಳಕ್ಕೂ ಕಂಟಕ ತಂದೊಡ್ಡಿತು ನಿಪಾಹ್ ವೈರಸ್
ಮೈಸೂರು, ಮೇ 25 : ನೆರೆ ರಾಜ್ಯ ಕೇರಳದಲ್ಲಿ ಕಾಣಿಸಿಕೊಂಡಿರುವ ನಿಪಾಹ್ ವೈರಸ್, ರಾಜ್ಯದಲ್ಲೂ ಆತಂಕಕ್ಕೆ ಕಾರಣವಾಗಿದೆ. ನಿಪಾಹ್ ಸೋಂಕಿಗೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದರ ಭೀತಿ ಈಗ ಮಾವಿನ ಮೇಳದ ಮೇಲೂ ಪ್ರಭಾವ ಬೀರಿದೆ.
ಬಾವಲಿ ತಿಂದ ಹಣ್ಣುಗಳಿಂದ ಹಾಗೂ ಹಂದಿಗಳಿಂದ ನಿಪಾಹ್ ವೈರಸ್ ಹರಡುತ್ತಿದೆ ಎಂಬ ಮಾಹಿತಿ ತಿಳಿದು ಬಂದಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ಮಾವು ಸೇರಿದಂತೆ ಇತರೆ ಹಣ್ಣುಗಳನ್ನು ಕೊಳ್ಳುವವರಿಲ್ಲದಂತಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಿ.ಮಂಜುನಾಥ್ ತಿಳಿಸಿದರು.
ಕೇರಳಕ್ಕೆ ಹೋಗದಂತೆ ಮೈಸೂರಿನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೂಚನೆ
ಈ ಬಾರಿ ಜಿಲ್ಲೆಯ ವಿವಿಧೆಡೆಗಳಲ್ಲಿ ಇನ್ನು ಮಾವು ಕೂಡ ಮಾಗದ ಕಾರಣ ಮಾವು ಮೇಳವನ್ನು ಜೂನ್ ಮೊದಲ ವಾರ ಆಯೋಜಿಸಲು ತೀರ್ಮಾನಿಸಲಾಗಿದೆ.
ನಿಪಾಹ್ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಹಣ್ಣುಗಳ ಬೆಲೆಯು ಕಡಿಮೆಯಾಗುತ್ತಿದೆ. ಇದು ಬೆಳೆಗಾರರಿಗೆ ದೊಡ್ಡ ಹೊಡೆತ ನೀಡಿದೆ. ಹಾಗಾಗಿ ನಿಪಾಹ್ ವೈರಸ್ ನಂತಹ ಯಾವುದೇ ರೀತಿಯ ಪ್ರಕರಣಗಳು ರಾಜ್ಯದಲ್ಲಿ ಕಂಡುಬರದಿರುವುದನ್ನು ಖಚಿತಪಡಿಸಿಕೊಂಡು, ಜೂನ್ ಮೊದಲ ವಾರದಿಂದ ಮಾವಿನ ಮೇಳವನ್ನು ಆಯೋಜಿಸಲಾಗುವುದು ಎಂದು ಮಂಜುನಾಥ್ ತಿಳಿಸಿದ್ದಾರೆ.