ಜನಸಾಮಾನ್ಯರಿಗೆ ಚಾಲೆಂಜ್ ಹಾಕಿದ ಸಂಸದೆ ಸುಮಲತಾ
ಮಂಡ್ಯ, ಆಗಸ್ಟ್ 20: "ನನಗೆ ಹಾರ, ಶಾಲು ಹೊದಿಸಿ ಸನ್ಮಾನ ಮಾಡುವ ಬದಲು ಗಿಡ ನೆಟ್ಟು ಬೆಳೆಸಿ. ಅದರ ಫೋಟೊ ನನಗೆ ಕಳುಹಿಸಿ. ಇದು ನಾನು ಹಾಕುವ ಚಾಲೆಂಜ್" ಎಂದಿದ್ದಾರೆ ಸಂಸದೆ ಸುಮಲತಾ.
ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ ಸುಮಲತಾ: ಇಂದು ಮಂಡ್ಯದಲ್ಲಿ ಸಭೆ
ನೂತನ ಸಂಸದರಾಗಿ ಆಯ್ಕೆಯಾದ ಬಳಿಕ ಮಂಡ್ಯದ ಹಲವು ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಅವರಿಗೆ ಅಲ್ಲಿನ ಜನರು ಹಾರ, ಶಾಲು ಹಾಕಿ ಸನ್ಮಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, "ನನಗೆ ಇದ್ಯಾವ ಸನ್ಮಾನವು ಬೇಡ, ಇದರ ಬದಲಾಗಿ ಗಿಡ ನೆಡಿ" ಎಂದು ಕರೆ ನೀಡಿದ್ದಾರೆ.
"ನಾನು ಲೋಕಸಭಾ ಅಧಿವೇಶನದ ಮುಗಿದ ಬಳಿಕ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್ ನಗರ, ಮಂಡ್ಯ ಹೀಗೆ ಎಲ್ಲಾ ತಾಲೂಕುಗಳಿಗೂ ಹೋಗುತ್ತಿದ್ದೇನೆ. ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ. ಸನ್ಮಾನ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಅದು ನನಗೆ ಬೇಡ. ಈ ಪ್ರೀತಿಯನ್ನು ತೋರಿಸಿಕೊಳ್ಳುವುದಕ್ಕೆ ಅವರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿದರೆ ಅವರ ಹೆಸರು ಹಾಕಿ ನನ್ನ ಫೇಸ್ ಬುಕ್ ಪೇಜಿನಲ್ಲಿ ಪೋಸ್ಟ್ ಮಾಡುತ್ತೇನೆ" ಎಂದರು.
"ಸುಖಾಸುಮ್ಮನೆ ಹಣ ಪೋಲು ಮಾಡಬೇಡಿ. ನಾವು ಮಾಡುವ ಕೆಲಸದಿಂದ ಪರಿಸರಕ್ಕೆ ಒಳ್ಳೆಯದಾಗಬೇಕು. ಇಲ್ಲವಾದರೆ ಬಡವರಿಗೆ ಒಂದಷ್ಟು ಏನಾದರೂ ಕೊಡುವುದಾದರೆ ಕೊಡಲಿ" ಎಂದು ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದರು.