ಎಟಿಎಂನಲ್ಲಿ ಹಣ ಲಪಟಾಯಿಸಲು ಯತ್ನಿಸಿದವ 15 ದಿನಗಳ ನಂತರ ಸಿಕ್ಕಿಬಿದ್ದ
ಮೈಸೂರು, ನವೆಂಬರ್ 2: ಎಟಿಎಂನಲ್ಲಿ ಹಣ ದೋಚಲು ವಿಫಲ ಯತ್ನ ನಡೆಸಿದ ಐನಾತಿಯೊಬ್ಬನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 15 ದಿನಗಳ ಹಿಂದೆ ಇಲ್ಲಿನ ಅಶೋಕ ರಸ್ತೆಯಲ್ಲಿರುವ ಎಸ್ ಬಿಐ ಬ್ಯಾಂಕ್ ಪಕ್ಕದ ಎಟಿಎಂ ಯಂತ್ರವನ್ನು ಯಾರೋ ಕಳ್ಳರು ದೋಚಲು ಯತ್ನಿಸಿರುವ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಶೋಕ ರಸ್ತೆಯ ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದು, ಹಣ ನೀಡುವ ಯಂತ್ರವನ್ನು ಯಾರೋ ಕಳ್ಳರು ಬಲವಂತವಾಗಿ ತೆರೆಯಲು ಪ್ರಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಕುರಿತು ಪೊಲೀಸರು ತನಿಖೆ ಶುರುವಿಟ್ಟುಕೊಂಡಿದ್ದರು.
99 ಲಕ್ಷ ಹಣದೊಂದಿಗೆ ಎಟಿಎಂಗೆ ವಾಹನದ ಚಾಲಕ ಪರಾರಿ
ಕಳೆದ ಅಕ್ಟೋಬರ್ 31ರಂದು ರಾತ್ರಿ 1 ಗಂಟೆಗೆ ಅಶೋಕ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದಾರೆ. ನಂತರ ಬ್ಯಾಂಕ್ ನೀಡಿರುವ ಸಿಸಿಟಿವಿಯ ದೃಶ್ಯಾವಳಿಯನ್ನು ವೀಕ್ಷಿಸಿದಾಗ ಎಟಿಎಂನಿಂದ ಹಣ ದೋಚಲು ಯತ್ನಿಸಿದ ವ್ಯಕ್ತಿ ಈತನೇ ಎಂದು ಕಂಡುಬಂದಿದೆ. ಬಂಧಿತನನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನೆನ್ನೆಕಟ್ಟೆ ಗ್ರಾಮದ ನಾಗೇಶ್ ಅಲಿಯಾಸ್ ಮೂಗ, ಬಿನ್ ಮಹದೇವಪ್ಪ ಎಂದು ಗುರುತಿಸಲಾಗಿದೆ.
ಆರೋಪಿಯು ತಾನೊಬ್ಬ ಮೂಗನೆಂದು ಅಮಾಯಕನಂತೆ ನಟಿಸುತ್ತಾನೆ, ಈ ಹಿಂದೆಯೂ ಗುಂಡ್ಲುಪೇಟೆ ಠಾಣಾ ಸರಹದ್ದಿನಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.