ಅಮ್ಮನ ಆಸೆಗೆ ಹೆಗಲಾದ ಮಗ; ಸ್ಕೂಟರ್ ನಲ್ಲೇ ದೇಶ ಸುತ್ತಿಸಿದ ಆಧುನಿಕ ಶ್ರವಣಕುಮಾರ
ಮೈಸೂರು, ಸೆಪ್ಟೆಂಬರ್ 17: ಇಳಿ ವಯಸ್ಸಿನಲ್ಲಿ ತಂದೆ ತಾಯಿಯರನ್ನು ಬೀದಿಗೆ ತಳ್ಳುವ ಎಷ್ಟೋ ಮಕ್ಕಳು ಇದ್ದಾರೆ. ಕೈಲಾಗದ ಕಾಲದಲ್ಲಿ ದೂರ ಹಾಕುವ ಮಕ್ಕಳ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಸಿಗುತ್ತವೆ. ತಮ್ಮನ್ನು ಹೆತ್ತು ಸಾಕಿ ಈ ಮಟ್ಟಕ್ಕೆ ಬೆಳೆಸಿದ ತಂದೆ ತಾಯಂದಿರ ಮೇಲೆ ಗೌರವ, ಮಾನವೀಯತೆಯೂ ಇಲ್ಲದೆ ಬೀದಿಗೆ ಬಿಡುವ ಮಂದಿ ಕಡಿಮೆಯೇನಿಲ್ಲ.
ಅಂಥ ಜನರ ನಡುವೆ ಮೈಸೂರಿನ ಕೃಷ್ಣ ಕುಮಾರ್ ಭಿನ್ನವಾಗಿ ನಿಂತು ಯುವ ಜನಾಂಗಕ್ಕೆ ಮಾದರಿ ಆಗಿದ್ದಾರೆ. ಪೋಷಕರು ಕಾಯಿಲೆ ಬಿದ್ದರೆ, ಹಾಸಿಗೆ ಹಿಡಿದರೆ ಕೂಡಲೇ ವ್ರದ್ಧಾಶ್ರಮಕ್ಕೆ ತಳ್ಳುವ ಜನರ ನಡುವೆ ಕೃಷ್ಣಕುಮಾರ್ ಆದರ್ಶ ಎನಿಸಿಕೊಳ್ಳುತ್ತಾರೆ. ತಮ್ಮ ತಾಯಿಯ ಆಸೆಯಂತೆ, ತಾಯಿಯನ್ನು ಸ್ಕೂಟರ್ ನಲ್ಲೇ ಇಡೀ ಭಾರತದ ತೀರ್ಥಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದಾರೆ.
ವಿಶ್ವ ಶಾಂತಿಗೆ ಸೈಕಲ್ ನಲ್ಲಿ ಹಾಸನದ ನಾಗರಾಜ ಗೌಡ ಭಾರತ ಯಾತ್ರೆ
ಸ್ಕೂಟರ್ ನಲ್ಲೇ ತಾಯಿ ಜೊತೆ ಭಾರತ ತೀರ್ಥಯಾತ್ರೆ
ಕೃಷ್ಣಕುಮಾರ್ ತಮ್ಮ ತಾಯಿ ಚೂಡಾಮಣಿಯವರ ಅಪೇಕ್ಷೆಯಂತೆ ಅವರಿಗೆ ಇಡೀ ಭಾರತವನ್ನು ಸ್ಕೂಟರ್ ನಲ್ಲಿ ಸುತ್ತಿಸಿ, ತಾಯಿ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದರು. ನಿನ್ನೆಯಷ್ಟೆ ಮೈಸೂರಿಗೆ ಬಂದಿಳಿದ ಕೃಷ್ಣಕುಮಾರ್ ಹಾಗೂ ಅವರ ತಾಯಿ ಚೂಡಾಮಣಿ 55 ಸಾವಿರ ಕಿಲೋ ಮೀಟರ್ ತೀರ್ಥಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಮೂರು ನೆರೆ ರಾಷ್ಟ್ರ ಸೇರಿದಂತೆ ಭಾರತದ ಎಲ್ಲಾ ತೀರ್ಥ ಕ್ಷೇತ್ರಗಳನ್ನು ತಾಯಿಗೆ ತೋರಿಸಿರುವ ಮಗ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತಿ ಗಳಿಸಿದ್ದಾರೆ.
ಅಪ್ಪನ ಹಳೇ ಸ್ಕೂಟರ್ ನಲ್ಲಿ ಪಯಣ
ಮೈಸೂರಿನ ಬೋಗಾದಿ ಗ್ರಾಮದ ನಿವಾಸಿಯಾಗಿರುವ ಕೃಷ್ಣಕುಮಾರ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಕುಮಾರ್ ಅವರ ತಂದೆ ದಕ್ಷಿಣಾಮೂರ್ತಿ 5 ವರ್ಷಗಳ ಹಿಂದೆ ತೀರಿಕೊಂಡರು. ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಕೃಷ್ಣ ಕುಮಾರ್ ತಮ್ಮ ತಾಯಿಯ ಆಶಯದಂತೆ ತನ್ನ ತಂದೆ ಕೊಡಿಸಿದ ಎರಡು ದಶಕಗಳ ಹಳೆಯ ಬಜಾಜ್ ಚೇತಕ್ ಸ್ಕೂಟರ್ ನಲ್ಲೇ ತಾಯಿಯನ್ನು ಕೂರಿಸಿಕೊಂಡು, ಇಡೀ ಭಾರತ ಸುತ್ತಿ ವಾಪಸ್ ಆಗಿದ್ದಾರೆ.
ತನಗಾಗಿ ಬದುಕುವುದನ್ನೇ ಮರೆಯುವ ತ್ಯಾಗಮಯಿ 'ಅಮ್ಮ'
2 ವರ್ಷ 9 ತಿಂಗಳ ನಿರಂತರ ಪ್ರಯಾಣ
ತಮ್ಮ ತಾಯಿಗಾಗಿ, ಆಕೆಯ ಆಸೆಯನ್ನು ಪೂರೈಸಬೇಕೆಂದು ಬರೋಬ್ಬರಿ 2 ವರ್ಷ 9 ತಿಂಗಳ ನಿರಂತರ ಪ್ರಯಾಣ ಮಾಡಿದ್ದಾರೆ. ಭಾರತದ ನೂರಾರು ತೀರ್ಥ ಕ್ಷೇತ್ರಗಳ ದರ್ಶನವನ್ನು ಮಾಡಿಸಿದ್ದಾರೆ. ನಿನ್ನೆಯಷ್ಟೆ ಮೈಸೂರಿಗೆ ವಾಪಸ್ ಆಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಿಂದ ಆರಂಭವಾದ ಅಮ್ಮ ಮಗನ ಈ ಯಾತ್ರೆ ಮೊದಲು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ಕರ್ನಾಟಕ, ಅರುಣಾಚಲ ಪ್ರದೇಶ, ಛತ್ತಿಸ್ ಗಡ್, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಾಗೂ ನೆರೆ ರಾಷ್ಟ್ರಗಳಾದ ಮಯನ್ಮಾರ್, ನೇಪಾಳ ಹಾಗೂ ಭೂತಾನ್ನಲ್ಲಿ ಸಾಗಿ ಬಂದಿದೆ.
ಸಂಪಾದಿಸಿ ಉಳಿಸಿದ್ದ ಹಣದಲ್ಲೇ ಯಾತ್ರೆ
ನಿತ್ಯ ಎರಡು ಹೊತ್ತು ಊಟ, ಸರಾಸರಿ ಪ್ರಯಾಣ ಮಾಡುತ್ತಿದ್ದ ಅಮ್ಮ ಮಗ, ಆಶ್ರಮ, ಮಠ, ಕುಟೀರ ಅಥವಾ ವೃದ್ದಾಶ್ರಮ, ಸೇವಾಶ್ರಮಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಇಡೀ ಯಾತ್ರೆಯಲ್ಲಿ ಯಾರ ಬಳಿಯೂ ಯಾವ ಸಹಾಯವನ್ನು ಪಡೆಯದ ಕೃಷ್ಣಕುಮಾರ್ ತಾನು ಸಂಪಾದಿಸಿ ಉಳಿಸಿದ್ದ 6 ಲಕ್ಷದ 80 ಸಾವಿರ ಹಣವನ್ನು ಖರ್ಚು ಮಾಡಿದ್ದಾರೆ. 2 ವರ್ಷದ 9 ತಿಂಗಳ ಪ್ರಯಾಣದಲ್ಲಿ ಎಲ್ಲಿಯೂ ಆರೋಗ್ಯ ಹಾಳು ಮಾಡಿಕೊಳ್ಳದೇ ಹಿತಮಿತ ಜೀವನ ನಡೆಸಿ ಸುರಕ್ಷಿತವಾಗಿ ಮೈಸೂರಿಗೆ ವಾಪಸ್ಸಾಗಿದ್ದಾರೆ.
ಕೃಷ್ಣಕುಮಾರ್ ಅವರ ಹಾಗೂ ತಾಯಿ ಚೂಡಾಮಣಿಯವರ ಈ ತೀರ್ಥಯಾತ್ರೆಯ ಮಾಹಿತಿ ಪಡೆದ ಮಹೇಂದ್ರ ಕಂಪನಿ ಮಾಲೀಕ ಆನಂದ್ ಮಹೇಂದ್ರ ಇವರಿಗೆ ಹೊಸ ಮಹೇಂದ್ರ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಕಾರನ್ನು ಇವರು ಪಡೆದು ಸಮಾಜ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.