ಪಿರಿಯಾಪಟ್ಟಣ; ಮದುವೆಯಾದ ದಿನವೇ ಹೆಂಡತಿ ಕೊಂದು ಮಣ್ಣು ಮಾಡಿದ
ಮೈಸೂರು, ಅಕ್ಟೋಬರ್ 18: ಮದುವೆಯಾದ ದಿನವೇ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕು ಲಕ್ಷ್ಮೀಪುರ ಗಿರಿಜನ ಹಾಡಿಯಲ್ಲಿ ನಡೆದಿದೆ.
ಇದೇ ಹಾಡಿಯ ನಿವಾಸಿ ನಾಗರಾಜ (19) ಎಂಬಾತನು ಇದೇ ಹಾಡಿಯ ನಾಗಮ್ಮ (18) ಎಂಬಾಕೆಯನ್ನು ಐದು ವರ್ಷಗಳಿಂದ ಪ್ರೀತಿಸುತಿದ್ದ ಎನ್ನಲಾಗಿದೆ. ಇವರಿಬ್ಬರೂ ಚಿಕ್ಕ ಹುಣಸೂರಿನ ಗಿರಿಜನ ಆಶ್ರಮ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಒಟ್ಟಿಗೇ ವ್ಯಾಸಂಗ ಮಾಡಿದ್ದು ನಂತರ ಹಾಡಿಗೆ ಹಿಂತಿರುಗಿದ್ದರು. ಇತ್ತೀಚೆಗೆ ನಾಗಮ್ಮ ಗರ್ಭಿಣಿಯಯಾಗಿದ್ದು ನಾಗಮ್ಮ್ಮನ ತಾಯಿ ಬೈರಮ್ಮ ತನ್ನ ಮಗಳನ್ನು ಮದುವೆಯಾಗುವಂತೆ ನಾಗರಾಜನನ್ನು ಕೇಳಿದ್ದಾರೆ. ಆದರೆ ನಾಗರಾಜನು ಮದುವೆಗೆ ನಿರಾಕರಿಸಿದ್ದೇ ಅಲ್ಲದೆ ಆಕೆಯ ಹೊಟೆಯಲ್ಲಿರುವ ಮಗುವಿಗೆ ತಂದೆ ತಾನಲ್ಲ ಎಂದು ಆರೋಪಿಸಿದ್ದಾನೆ.
ಗಂಡನ ಕೊಂದು ಆತ್ಮಹತ್ಯೆ ಬಣ್ಣ ಕಟ್ಟಿದ್ದ ಹೆಂಡತಿ, ಆಕೆಯ ಪ್ರಿಯಕರನಿಗೆ ಬಿತ್ತು ಕೋಳ
ಬೈರಮ್ಮನ ದೂರಿನ ಮೇರೆಗೆ ಹಾಡಿಯ ಮುಖಂಡರು ಪಂಚಾಯ್ತಿ ನಡೆಸಿ ಮದುವೆ ಆಗುವಂತೆ ನಾಗರಾಜನಿಗೆ ತಾಕೀತು ಮಾಡಿದ್ದಾರೆ. ಅದರಂತೆ ನಾಗರಾಜ ಅಕ್ಟೋಬರ್ 10ರಂದು ನಾಗಮ್ಮನನ್ನು ಮದುವೆ ಆಗಿದ್ದಾನೆ. ಆದರೆ ಅದೇ ದಿನವೇ ಹತ್ತಿರದ ಕಲ್ಲುಗುಡ್ಡ ಎಂಬಲ್ಲಿಗೆ ನಾಗಮ್ಮಳನ್ನು ಕರೆದೊಯ್ದ ನಾಗರಾಜ ಬಡಿಗೆಯಿಂದ ತಲೆಗೆ ಹೊಡೆದು, ಕುತ್ತಿಗೆಗೆ ಬಳ್ಳಿ ಬಿಗಿದು ಹತ್ಯೆ ಮಾಡಿ ಗುಂಡಿ ತೋಡಿ ಮಣ್ಣು ಮುಚ್ಚಿ ಏನೂ ಅರಿಯದವನಂತೆ ಹಾಡಿಗೆ ವಾಪಸ್ ಆಗಿದ್ದಾನೆ.
ಮಗಳು ಕಾಣದ್ದರಿಂದ ಆತಂಕಗೊಂಡ ಬೈರಮ್ಮ ನಾಗರಾಜನನ್ನು ಪ್ರಶ್ನಿಸಿದಾಗ ಅವಳು ಎಲ್ಲಿಗೆ ಹೋದಳು ಎಂದು ಗೊತ್ತಾಗುತಿಲ್ಲ ಎಂದಿದ್ದಾನೆ. ಬೈರಮ್ಮ ಬೆಟ್ಟದ ಪುರ ಪೋಲೀಸ್ ಠಾಣೆಗೆ ದೂರು ನೀಡಿದ ನಂತರ ಗುರುವಾರ ನಾಗರಾಜನನ್ನು ಠಾಣೆಗೆ ಕರೆತಂದಾಗ ಅಪರಾಧ ಒಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಪಿರಿಯಾಪಟ್ಟಣ ತಹಸೀಲ್ದಾರ್ ಶ್ವೇತಾ, ಹುಣಸೂರು ಡಿವೈಎಸ್ ಪಿ ಸುಂದರ ರಾಜ್ ಭೇಟಿ ನೀಡಿದ್ದರು. ನಾಗರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.