ವಿಧವೆ ಮದುವೆಯಾಗುವೆನೆಂದು ಬಂದ, ಸರ ದೋಚಿ ಎಸ್ಕೇಪ್ ಆದ
ಮೈಸೂರು, ನವೆಂಬರ್ 22: ವಿಧವೆಯೊಬ್ಬರಿಗೆ ಆನ್ ಲೈನ್ ಮ್ಯಾಟ್ರಿಮೊನಿಯೊಂದರ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ವಿವಾಹವಾಗುವುದಾಗಿ ನಂಬಿಸಿ ಮಹಿಳೆ ಬಳಿ ಇದ್ದ 80 ಸಾವಿರ ರೂ.ಮೌಲ್ಯದ ಮಾಂಗಲ್ಯ ಸರ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಮರು ಮದುವೆಯಾಗಲು ಇಚ್ಛಿಸಿದ್ದು, ಮ್ಯಾಟ್ರಿಮೊನಿ ಮೂಲಕ ವರಾನ್ವೇಷಣೆಗೆ ಹೆಸರು ನೋಂದಾಯಿಸಿದ್ದಾರೆ. ಇದನ್ನು ಕಂಡ ವಿನೀತ್ ರಾಜ್ ಎಂಬಾತ ಮಹಿಳೆಯನ್ನು ಮೊಬೈಲ್ ಮೂಲಕ ಪರಿಚಯ ಮಾಡಿಕೊಂಡು ತಾನು ಚೆನ್ನೈನಲ್ಲಿ ವ್ಯಾಪಾರ ಮಾಡುತ್ತಿದ್ದು, ತನ್ನ ಹೆಂಡತಿ ತೀರಿ ಹೋಗಿ 5 ವರ್ಷವಾಗಿದೆ. ನಿಮ್ಮನ್ನು ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ.
ಸಾಲ ವಾಪಸ್ ಕೇಳಿದ್ದಕ್ಕೆ ಮತ್ತು ಬೆರೆಸಿದ ಜೂಸ್ ಕುಡಿಸಿ ವೀಡಿಯೋ ಮಾಡಿದ ಪೇದೆ
ನ.18ಕ್ಕೆ ಚಾಮುಂಡಿಬೆಟ್ಟಕ್ಕೆ ಬರುತ್ತಿದ್ದೇನೆ. ನೀವು ಕೂಡ ಬನ್ನಿ ಎಂದು ಫೋನ್ ಮೂಲಕ ಆಹ್ವಾನಿಸಿದ್ದು, ಮಹಿಳೆ ಆತ ಸೂಚಿಸಿದ್ದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿಂದ ಇಬ್ಬರೂ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದಾರೆ. ಮಾರ್ಗಮಧ್ಯೆ ಕಾರನ್ನು ನಿಲ್ಲಿಸಿದ ಆತ ನಮ್ಮಿಬ್ಬರ ವಿವಾಹಕ್ಕೂ ಮುನ್ನ ದೋಷಮುಕ್ತವಾಗಬೇಕು. ಅದಕ್ಕಾಗಿ ನಮ್ಮಿಬ್ಬರ ಸರವನ್ನು ಅದಲು ಬದಲಾಯಿಸಿಕೊಳ್ಳಬೇಕು ಎಂದಿದ್ದು, ಆತನ ಮಾತು ನಂಬಿದ ಮಹಿಳೆ ತನ್ನ ಕತ್ತಿನಲ್ಲಿದ್ದ ಎರಡು ಸರಗಳನ್ನು ನೀಡಿದ್ದಾರೆ. ಆತ ಕೂಡ ತನ್ನ ಕತ್ತಿನಲ್ಲಿದ್ದ ಸರವನ್ನು ತೆಗೆದು ಬದಲಾಯಿಸಿಕೊಂಡಿದ್ದಾನೆ.
ಕೆಲ ಸಮಯದ ಬಳಿಕ ನಿಮ್ಮ ಸರವನ್ನು ವಾಪಸ್ ಕೊಡುತ್ತೇನೆಂದು ತಿಳಿಸಿ ಬೆಟ್ಟದಿಂದ ಇಳಿದು ಹೋಟೆಲೊಂದಕ್ಕೆ ಮಹಿಳೆಯನ್ನು ಕರೆದೊಯ್ದು ಜ್ಯೂಸ್ ಕೊಡಿಸಿದ್ದಾನೆ. ಈ ನಡುವೆ ಮಹಿಳೆ ಶೌಚಕ್ಕೆ ಹೋಗಿ ಬರುತ್ತೇನೆಂದು ತಿಳಿಸಿ ಹೋದಾಗ ಆಕೆ ವಾಪಸ್ ಬರುವಷ್ಟರಲ್ಲಿ ವಿನೀತ್ ರಾಜ್ ನಾಪತ್ತೆಯಾಗಿದ್ದಾನೆ. ವಂಚನೆಗೊಳಗಾದ ಮಹಿಳೆ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.