ಮೈಸೂರಿನಲ್ಲಿ ಮ್ಯಾನ್ ಹೋಲ್ ಗೆ ಇಳಿದ ವ್ಯಕ್ತಿ : ವಿಡಿಯೋ ವೈರಲ್
ಮೈಸೂರು, ಜುಲೈ 22: ವ್ಯಕ್ತಿಯೊಬ್ಬರು ಮ್ಯಾನ್ ಹೋಲ್ ಒಳಗೆ ಇಳಿದಿದ್ದು, ತ್ಯಾಜ್ಯ ತೆಗೆಯುವಾಗ ಆತನಿಗೆ ಇಬ್ಬರು ಸಹಾಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ತಾನು ಸ್ವಚ್ಛ ಮಾಡುವ ಕೆಲಸಕ್ಕೆ ಇಳಿದಿರಲಿಲ್ಲ, ಚಿಲ್ಲರೆ ಕಾಸು ಅಥವಾ ಚಿನ್ನ ಸಿಗುತ್ತದೆ ಎಂದು ಇಳಿದಿದ್ದೆ ಎಂಬುದಾಗಿ ಆ ವ್ಯಕ್ತಿ ಹೇಳಿದ್ದಾನೆ.
ಮುಂಜಾಗ್ರತೆ ಇಲ್ಲದೆ ಪೌರಕಾರ್ಮಿಕನಿಂದ ಚರಂಡಿ ಸ್ವಚ್ಛತೆ: ಅಧಿಕಾರಿಗಳಿಗೆ ಛೀಮಾರಿ
ಮೈಸೂರಿನ ಅಗ್ರಹಾರದ ಬಸವೇಶ್ವರ ರಸ್ತೆ ಬಳಿ ಇರುವ ಮ್ಯಾನ್ ಹೋಲ್ ಗೆ ಭಾನುವಾರ ವ್ಯಕ್ತಿಯೊಬ್ಬರು ಇಳಿದಿದ್ದರು. ಇಬ್ಬರು ಅಕ್ಕಪಕ್ಕ ನಿಂತು ಆತನ ಕೆಲಸವನ್ನು ಗಮನಿಸುತ್ತಿದ್ದರು. ತ್ಯಾಜ್ಯವನ್ನು ತೆಗೆದು ರಸ್ತೆಗೆ ಹಾಕಿದ್ದ ಕೆಲವೇ ನಿಮಿಷಗಳಲ್ಲಿ ಆ ವ್ಯಕ್ತಿಯನ್ನು ಮೇಲೆ ಇದ್ದ ಇಬ್ಬರು ಕೈ ಹಿಡಿದು ಎಳೆದುಕೊಂಡಿದ್ದಾರೆ. ಇದಿಷ್ಟೂ ವಿಡಿಯೋದಲ್ಲಿ ದಾಖಲಾಗಿದೆ.
ಈ ದೃಶ್ಯವನ್ನು ಕಾನೂನು ವಿದ್ಯಾರ್ಥಿ ಪುನೀತ್ ಸೆರೆಹಿಡಿದಿದ್ದು, ಆ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಆತ ಹಣ, ಚಿನ್ನ ಸಿಗಬಹುದೆಂದು ನಾನೇ ಇಳಿದಿದ್ದೆ ಎಂದು ಹೇಳಿದ್ದಾನೆ.
ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ: ಎಸಿಬಿ ತನಿಖೆಗೆ ನಿರ್ಧಾರ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ವಿದ್ಯಾರ್ಥಿ ಹರಿಬಿಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ಇದಕ್ಕೆ ಆಕ್ರೋಶ ವ್ಯಕ್ತಗೊಂಡಿದೆ. ತ್ಯಾಜ್ಯ ಶೇಖರಣೆಗೊಂಡಿರುವ ಬಗ್ಗೆ ದೂರು ನೀಡಿರುವ ಹಿನ್ನೆಲೆ, ಈ ವ್ಯಕ್ತಿ ಮ್ಯಾನ್ ಹೋಲ್ ಗೆ ಇಳಿದಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದ್ದು, ಇಂತಹ ಅನಾಗರಿಕ ಘಟನೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕಿದೆ. ಅಲ್ಲದೆ ಮ್ಯಾನ್ ಹೋಲ್ ಗೆ ಇಳಿದಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಬೇಕಿದೆ ಎಂದು ಕೆಲವರು ಒತ್ತಾಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನಗರ ಪಾಲಿಕೆ ಒಳಚರಂಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಹೇಶ್ ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ವಿಚಾರಿಸಿದ್ದಾರೆ. ಜೊತೆಗೆ ಇಲ್ಲಿದ್ದ ವ್ಯಕ್ತಿ ನಗರ ಪಾಲಿಕೆಯಲ್ಲಿ ಯಾವುದೇ ವಿಭಾಗದ ನೌಕರನಾಗಿಲ್ಲ ಎಂಬುದು ಖಚಿತವಾಗಿದೆ. ನಂತರ ಅವರು ಕೆ ಆರ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.