ರಾತ್ರೋ ರಾತ್ರಿ ಸ್ಟಾರ್ ಆದ ವೀಣಾ ವಾದಕ ಮಹೇಶ್ ಪ್ರಸಾದ್
ಮೈಸೂರು, ಜೂನ್ 29 : ವೀಣಾ ವಾದನವೆಂದರೆ ಸಾಮಾನ್ಯ ಕಲೆಯಲ್ಲ. ಆ ಕಲೆಯನ್ನು ಅರಗಿಸಿಕೊಳ್ಳಲು ಮಹಾನ್ ಶಕ್ತಿಯೇ ಬೇಕು. ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಸಾಧಕರ ಪಟ್ಟಿ ತುಸು ಕಡಿಮೆಯೇ. ಸಣ್ಣ ವಯಸ್ಸಿನಿಂದಲೂ ಈ ಕಲೆಯನ್ನು ಬಿಡದೇ ಕರಗತಮಾಡಿಕೊಂಡವರು ಮಾತ್ರ ಇಲ್ಲಿ ಗಟ್ಟಿಯಾಗಿ ಬೇರೂರಬಲ್ಲರು.
ವೀಣೆಯ ಸುಮಧುರ ನಾದದ ಹಿಂದಿದೆ ನೂರಾರು ದಲಿತರ ಬೆವರು..!
ಈಗಿನ ಮ್ಯಾಷ್ ಅಪ್ ಕರೋಕೆ ಯುಗದಲ್ಲಿ ವೀಣೆಯಾ.. ಎಂದು ಮೂದಲಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ಸಾಧಕ ಇದಕ್ಕೆ ತದ್ವಿರುದ್ದವೆಂಬಂತೆ ವೀಣೆ ನುಡಿಸುವ ಮೂಲಕವೇ ರಾಜ್ಯ ಮಾತ್ರವಲ್ಲದೇ, ಹೊರ ರಾಜ್ಯ, ದೇಶಗಳಲ್ಲೂ ಫೇಮಸ್ ಆಗಿದ್ದಾರೆ. ಹೇಗೆ ಅಂತೀರಾ? ಈ ಲೇಖನ ಓದಿ...
ತಂದೆಯೇ ಮೊದಲ ಗುರು
ಆತನ ಹೆಸರು ಮಹೇಶ್ ಪ್ರಸಾದ್. ವಯಸ್ಸು 23, ಹುಟ್ಟೂರು ತುಮಕೂರು, ಸದ್ಯ ಬೆಂಗಳೂರಿನ ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿರುವ ಈತ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್.
ತಮ್ಮ 8 ನೇ ವಯಸ್ಸಿನಲ್ಲಿಯೇ ತಂದೆ ಕೆ. ಎಂ ಲೋಕೇಶ್ವರ್ ಬಳಿ ವೀಣಾ ವಾದನ ಕಲಿಯಲು ಶುರುವಿಟ್ಟುಕೊಂಡ ಮಹೇಶ್, ವೀಣೆಯಲ್ಲಿ ಸೀನಿಯರ್ ಮುಗಿಸಿ ಮುಂದಿನ ವಿದ್ಯಾಭ್ಯಾಸವನ್ನು ತಂದೆಯ ಬಳಿಯೇ ಗಂಭೀರವಾಗಿ ಅಭ್ಯಸಿಸುತ್ತಿದ್ದಾರೆ.
ಸಾವಿರವಲ್ಲ, ಲಕ್ಷಾಂತರ ಅಭಿಮಾನಿಗಳು
ಮಹೇಶ್ ಒಂದು ವಿಡಿಯೋ ಫೇಸ್ ಬುಕ್, ಯೂ ಟ್ಯೂಬ್, ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟರೆ ಸಾಕು ಲಕ್ಷಗಟ್ಟಲೇ ಜನರು ವೀಕ್ಷಿಸಿ ಭೇಷ್ ಎಂದು ಉದ್ಘರಿಸುತ್ತಾರೆ. "ನಾನು ಈ ಕ್ಷೇತ್ರದಲ್ಲಿ ಸಾಧನೆ ಮಾಡಲೇಬೇಕೆಂದು ಈ ತೆರನಾದ ಹೊಸ ಪ್ರಯತ್ನ ಮಾಡಿದೆ. ವೀಣೆಯನ್ನು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿಲ್ಲ" ಎನ್ನುತ್ತಾರೆ ಮಹೇಶ್.
ದೇವರ ನಾಮ, ಕಚೇರಿಗಳಿಗಷ್ಟೇ ಸೀಮಿತವಲ್ಲ
ಬಹುತೇಕರು ವೀಣಾ ವಾದನವೆಂದರೆ ಕೇವಲ ದೇವರ ನಾಮ, ಕಚೇರಿಗಳಿಗಷ್ಟೇ ಸೀಮಿತ ಎನ್ನುತ್ತಾರೆ. ವೀಣೆಗೆ ಹೊಸ ಟಚ್ ಕೊಡುವ ಮೂಲಕ, ತಾವು ಫುಲ್ ಡಿಫರೆಂಟ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಹೇಶ್.
ವೀಣೆಯಲ್ಲಿ ರಾಪ್ ಸಾಂಗ್, ಬಾಲಿವುಡ್ , ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಹಿಟ್ ಸಾಂಗ್ ಗಳನ್ನು ನುಡಿಸುವ ಮೂಲಕ ಹೀಗೂ ಸಂಗೀತ ಬಳಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಆಫರ್ ಗಳ ಮೇಲೆ ಆಫರ್
ಮಹೇಶ್ ಒಮ್ಮೆ ತಮ್ಮ ವೀಣೆಯಲ್ಲಿ ಒಂದೇ ಒಂದು ರಾಪ್ ಸಾಂಗ್ ನುಡಿಸಿದ್ದಕ್ಕೆ ಈಗ ಅನೇಕ ಆಫರ್ ಕಾರ್ಯಕ್ರಮಗಳು ಅವರಿಗಾಗಿ ಹುಡುಕಿಕೊಂಡು ಬರುತ್ತಿದ್ದು, ಇದುವರೆಗೂ 80ಕ್ಕೂ ಅಧಿಕ ವೀಣಾ ವಾದನದ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಅದು ಸ್ನೇಹಿತರ ಒತ್ತಾಸೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ವಿಡಿಯೋಗಳು ಈಗ ಈ ರೀತಿ ವೈರಲ್ ಆಗುತ್ತದೆ ಎಂದು ಅವರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲವಂತೆ.
ಕ್ಲಾಸಿಕಲ್ ನಲ್ಲಿ ಸಾಧಿಸಬೇಕೆಂಬ ಗುರಿ
ಮಹೇಶ್ ವೀಣೆಯ ಮೂಲಕ ನುಡಿಸಿದ ಟಗರು ಚಿತ್ರದ ಟೈಟಲ್ ಟ್ರ್ಯಾಕ್, ಚಂದನ್ ಶೆಟ್ಟಿಯ ಗೊಂಬೆ..., ಟಕಿಲಾ..., ಬೊಂಬೆ ಹೇಳುತೈತೆ... ಹಾಡುಗಳು ಸಿಕ್ಕಾಪಟ್ಟೆ ವೈರಲ್ ಆಗಿ ಜನ ಮೆಚ್ಚುಗೆ ಪಡೆದಿದ್ದು, ತಮ್ಮ ವಿಧ್ಯಾಭ್ಯಾಸದ ಬಳಿಕ ವೃತ್ತಿ ಜೀವನದಲ್ಲಿ ಕ್ಲಾಸಿಕಲ್ ವೀಣಾ ವಾದನದಲ್ಲಿ ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದಾರೆ.
ಎಲ್ಲಾ ಯುವಕರಿಗೂ ಸ್ಫೂರ್ತಿದಾಯಕ
ತಮಗೆ ಸ್ಫೂರ್ತಿಯ ಸೆಲೆಯಾಗಿರುವ ತಂದೆ ಕೆ. ಎಂ ಲೋಕೇಶ್ವರ್, ಜಯಂತಿ ಕುಮಾರೇಶ್ , ರಾಜೇಶ್ ವೈದ್ಯ ಅವರನ್ನು ನೆನಪಿಸಿಕೊಳ್ಳುವ ಮಹೇಶ್, ಎಲ್ಲಾ ಯುವಕರಿಗೂ ಸ್ಫೂರ್ತಿದಾಯಕ.
ಡಬ್ ಸ್ಮ್ಯಾಶ್, ಬೇಡದ ವಿಡಿಯೋಗಳನ್ನು ಹಾಕಿ ಟೈಂ ಪಾಸ್ ಮಾಡುವ ಅನೇಕರು ಒಮ್ಮೆ ಮಹೇಶ್ ಪೇಜ್ ಗೆ ಬಂದು ಕಣ್ಣಾಯಿಸಿ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಅವಕಾಶಕ್ಕಾಗಿ ಕಾಯದೇ, ಸಿಕ್ಕ ಸಮಯದಲ್ಲಿ ತನ್ನ ಪ್ರತಿಭೆಯನ್ನು ಎಲೆಮರೆ ಕಾಯಿಯಂತೆ ಪ್ರದರ್ಶಿಸುತ್ತಿದ್ದಾರೆ.