ವಿಡಿಯೋ; ಸಂಸ್ಕೃತ ಸತ್ತ ಭಾಷೆ; ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು!
ಮೈಸೂರು, ಜನವರಿ 24; ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆ ವಿಚಾರವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ನಡುವೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಪಿ. ಮಹೇಶ್ ಚಂದ್ರಗುರು, "ಸಂಸ್ಕೃತ ಸತ್ತ ಭಾಷೆಯಾಗಿದ್ದು, ಇದಕ್ಕೆ ಮಹತ್ವ ನೀಡಿರುವುದು ಖಂಡನೀಯ" ಎಂದಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂಸ್ಕೃತಕ್ಕೆ ಹೆಚ್ಚು ಅನುದಾನ ನೀಡಿ ಆರ್ಎಸ್ಎಸ್ ಮತ್ತು ವೈದಿಕರನ್ನು ಬೆಳೆಸಲು ಕೇಂದ್ರ ಮತ್ತು ರಾಜ್ಯ ಸರಕಾರ ಹೊರಟಿದೆ. ಈ ರೀತಿ ಸರ್ಕಾರ ಕೆಟ್ಟ ತೀರ್ಮಾನ ಮತ್ತು ಜನರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅನ್ನದ ಭಾಷೆಯಲ್ಲದ ಸಂಸ್ಕೃತ ಮತ್ತು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಅನುದಾನ ಹಾಗೂ ಜಾಗ ನೀಡುತ್ತಿರುವುದು ಖಂಡನೀಯ. ಇದರ ವಿರುದ್ಧ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು" ಎಂದು ತಿಳಿಸಿದರು.
ಹೋರಾಟದ ಸ್ವರೂಪ ಪಡೆಯುತ್ತಿರುವ ಉದ್ದೇಶಿತ ಸಂಸ್ಕೃತ ವಿಶ್ವವಿದ್ಯಾಲಯ ಯೋಜನೆ
"ಭಾಷೆ ಇರುವುದು ಜನರನ್ನು ಒಗ್ಗೂಡಿಸಲು ಅನ್ನ ಮತ್ತು ಉದ್ಯೋಗ ನೀಡಲು, ಸಂಸ್ಕೃತಿ ಬೆಳೆಸಲು ಮತ್ತು ಜನರ ಬದುಕು ಸುಧಾರಿಸಲು. ಆದರೆ 2011ರ ಜನಗಣತಿ ಪ್ರಕಾರ ಇಡೀ ದೇಶದಲ್ಲಿ 4,631 ಜನ ಮಾತ್ರ ಸಂಸ್ಕೃತ ಮಾತನಾಡುತ್ತಾರೆ. ಅನ್ನ, ವಿದ್ಯೆ, ಉದ್ಯೋಗ ಹಾಗೂ ಬದುಕಿಗಾಗಿ ಎಷ್ಟು ಜನ ಸಂಸ್ಕೃತ ನಂಬಿದ್ದಾರೆ? ಇಂಥ ಸಾಯುತ್ತಿರುವ ಭಾಷೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಏಕೆ ಮಹತ್ವ ಕೊಡುತ್ತಿದೆ?" ಎಂದು ಪ್ರಶ್ನಿಸಿದರು.
Explained: ಏನಿದು ಸಂಸ್ಕೃತ ವಿಶ್ವವಿದ್ಯಾಲಯ ವಿವಾದ?
"ದೇಶದ ವಿಶ್ವ ವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳೇ ಇಲ್ಲ. ಈ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ವಿಭಾಗಕ್ಕೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಬಹಳಷ್ಟು ಸಂಸ್ಕೃತ ಅಧ್ಯಯನ ಪೀಠಗಳು ಸಾಯುತ್ತಿವೆ. ಕೇರಳದ ರಾಜೀವ್ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಲಿಯಲು ವಿದ್ಯಾರ್ಥಿಗಳೇ ಇಲ್ಲ" ಎಂದು ಕಿಡಿಕಾರಿದರು.
"ಇನ್ನು ರಾಜ್ಯದಲ್ಲಿ ಶೇ 64 ಮಂದಿ ಕನ್ನಡ, ಶೇ 11 ಉರ್ದು, ಶೇ 4 ತಮಿಳು, ಶೇ 2ರಷ್ಟು ಜನ ಮಲಯಾಳಂ ಮಾತನಾಡುತ್ತಾರೆ. ಆದರೆ ಸಂಸ್ಕೃತ ಮಾತನಾಡುವವರು ನಗಣ್ಯ. ಹೀಗೆ ಯಾರಿಗೂ ಬೇಡವಾದ ಬದುಕು ಕಟ್ಟಿಕೊಡದ ಈ ಭಾಷೆಗೆ ಯಾಕೆ ಮಾನ್ಯತೆ ಕೊಡಬೇಕೆಂದು ಪ್ರಶ್ನಿಸಿದ ಅವರು, ಇದಕ್ಕೆ ಕೊಡುವ ಅನುದಾನವನ್ನು ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳಿಗೆ ನೀಡಿ ಅಭಿವೃದ್ಧಿ ಮಾಡುವ ಮೂಲಕ ಮಕ್ಕಳ ಮತ್ತು ಮಹಿಳಾ ಸಬಲೀಕರಣಕ್ಕೆ ವಿನಿಯೋಗಿಸಲಿ" ಎಂದರು.
ಸಂಸ್ಕೃತ ಅಧಿಕೃತ ಭಾಷೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಅಂಬೇಡ್ಕರ್: ಸಿಜೆಐ ಬೋಬ್ಡೆ
"ಅಲ್ಲದೇ ಕೇಂದ್ರ ಸರ್ಕಾರ ಸಂಸ್ಕೃತ ಅಭಿವೃದ್ದಿಗೆ 1,200 ಕೋಟಿ, ತೆಲುಗಿಗೆ 75 ಕೋಟಿ, ತಮಿಳಿಗೆ 60 ಕೋಟಿ, ಮಲಯಾಳಂಗೆ 20 ಕೋಟಿ ರೂ. ನೀಡಿದೆ. ಆದರೆ ಕನ್ನಡಕ್ಕೆ ಕೇವಲ 6 ಕೋಟಿ ನೀಡಲಾಗಿದ್ದು, ರಾಜ್ಯದ 25 ಸಂಸದರು ಎಲ್ಲಿ ಹೋಗಿದ್ದಾರೆಂದು ಪ್ರಶ್ನೆ ಮಾಡಿದ ಅವರು, ಕನ್ನಡ ವಿಶ್ವವಿದ್ಯಾಲಯ ಸಾಯುತ್ತಿದ್ದರೆ, ಸಂಸ್ಕೃತಕ್ಕೆ 300 ಕೋಟಿ ರೂ. ಅನುದಾನ, ಮಾಗಡಿಯಲ್ಲಿ ಫಲವತ್ತಾದ ಭೂಮಿ ನೀಡಲಾಗುತ್ತಿದೆ" ಎಂದು ಅಕ್ರೋಶ ವ್ಯಕ್ತಪಡಿಸಿದರು.