ಕೇರಳದಿಂದ ನುಸುಳಿ ಬರುತ್ತಿದೆ ಲಾಟರಿ ಟಿಕೆಟ್; ಕೇರಳದ ಬೊಕ್ಕಸಕ್ಕೆ ಇಲ್ಲಿನ ಹಣ?
ಮೈಸೂರು, ಫೆಬ್ರವರಿ 08: ರಾಜ್ಯದಲ್ಲಿ ಲಾಟರಿಯಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಅಂದಿನ ಸರ್ಕಾರ ಲಾಟರಿ ಮಾರಾಟಕ್ಕೆ ಬ್ರೇಕ್ ಹಾಕಿ ನಿಷೇಧ ಮಾಡಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಹಲವು ಕುಟುಂಬಗಳು ನೆಮ್ಮದಿಯುಸಿರು ಬಿಟ್ಟಿದ್ದವು.
ಲಾಟರಿ ಚಟ ಹತ್ತಿಸಿಕೊಂಡಿದ್ದ ಹಲವು ಗಂಡಸರು ಸಾಲ ಮಾಡಿ, ಮನೆ, ಆಸ್ತಿಗಳನ್ನು ಮಾರಾಟ ಮಾಡಿಕೊಂಡು ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆದುಕೊಳ್ಳುವಂತೆ ಮಾಡಿಕೊಂಡಿದ್ದರು. ಲಾಟರಿಯಿಂದ ಬೆರಳಣಿಕೆಯಷ್ಟು ಮಂದಿ ಉನ್ನತಿ ಕಂಡಿದ್ದರೆ, ಉಳಿದಂತೆ ಹೆಚ್ಚಿನವರು ಬೀದಿಪಾಲಾಗಿದ್ದರು. ಆದರೆ ಈಗ ಏನಾಗುತ್ತಿದೆ?
ಕೇರಳದಿಂದ ಇಲ್ಲಿಗೆ ಬರುತ್ತಿವೆ ಲಾಟರಿಗಳು
ಲಾಟರಿಯಿಂದ ಮನೆ ಹಾಳಾಗುತ್ತಿರುವುದನ್ನು ಅರಿತ ಸರ್ಕಾರ ದೃಢ ನಿರ್ಧಾರ ಕೈಗೊಂಡು ಲಾಟರಿ ಮಾರಾಟ ನಿಷೇಧ ಮಾಡಿದ್ದು ಶ್ಲಾಘನೀಯ ಕಾರ್ಯವಾಗಿದೆ. ಜತೆಗೆ ರಾಜ್ಯದಲ್ಲಿ ಲಾಟರಿ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದ್ದರಿಂದ ಜನ ಬಹುಬೇಗ ಲಾಟರಿಯಿಂದ ದೂರ ಸರಿಯಲು ಸಾಧ್ಯವಾಗಿದೆ.
''ಲಾಟರಿ ನಿಷೇಧದಿಂದ ಬೀದಿಗೆ ಬಿದ್ದ 19 ಲಕ್ಷ ಮಂದಿಗೆ ನೆರವಾಗಿ"
ಕರ್ನಾಟಕದ ಹಣ ಕೇರಳದ ಬೊಕ್ಕಸಕ್ಕೆ
ಈಚೆಗೆ ಹೀಗೆ ಸದ್ದಿಲ್ಲದೆ ಕೇರಳದಿಂದ ಲಾಟರಿ ಟಿಕೆಟ್ ಗಳು ಕರ್ನಾಟಕದ ಕೆಲವರ ಕೈಗೆ ತಲುಪುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ಗಡಿ ಪ್ರದೇಶದ ವ್ಯಾಪ್ತಿಯ ಹಲವು ಭಾಗಗಳಲ್ಲಿ ಯಾರಿಗೂ ತಿಳಿಯದಂತೆ ಲಾಟರಿ ಟಿಕೆಟ್ ಗಳನ್ನು ತಂದು ಮಾರಾಟ ಮಾಡುವ ಜಾಲ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಕರ್ನಾಟಕದ ಹಣ ಕೇರಳದ ಬೊಕ್ಕಸ ಸೇರುವಂತಾಗಿದೆ. ಲಾಟರಿ ಮಾರಾಟದ ಮೇಲೆ ನಿಗಾ ವಹಿಸಿರುವ ಪೊಲೀಸರು ಅಕ್ರಮವಾಗಿ ತಂದು ಮಾರಾಟ ಮಾಡುವ ವ್ಯಕ್ತಿಗಳನ್ನು ಆಗಾಗ್ಗೆ ಬಂಧಿಸಿ ಕಾನೂನು ಕ್ರಮ ಕೈಗೊಂಡರೂ ಕೆಲವರು ಮಾತ್ರ ಕೃತ್ಯವನ್ನು ನಿಲ್ಲಿಸದೆ ಮುಂದುವರೆಸಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಇಲ್ಲಿದ್ದಾರೆ ಕಾಯಂ ಗ್ರಾಹಕರು
ಕೇರಳಕ್ಕೆ ಹೊಂದಿಕೊಂಡಂತಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರದ ಗಡಿಭಾಗಗಳಿಂದ ನೇರವಾಗಿ ರಾಜ್ಯದೊಳಕ್ಕೆ ಲಾಟರಿ ಟಿಕೆಟ್ ಗಳು ಬರುತ್ತಿದ್ದು ಕೆಲವರು ಅದನ್ನು ಕಾಯಂ ಗ್ರಾಹಕರಿಗೆ ತಲುಪಿಸುವ ಮೂಲಕ ವ್ಯವಹಾರವನ್ನು ಗೌಪ್ಯವಾಗಿ ಮಾಡುತ್ತಿರುವುದು ಕಂಡುಬರುತ್ತಿದೆ.
ಕಳೆದ ತಿಂಗಳಿನಲ್ಲಿ ಮೈಸೂರಿನಿಂದ ಚಾಮರಾಜನಗರದ ಹನೂರು ಭಾಗಕ್ಕೆ ತೆರಳಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದ. ಆತನನ್ನು ವಿಚಾರಣೆಗೊಳಪಡಿಸಿದಾಗ ಒಂದಷ್ಟು ಮಾಹಿತಿಗಳು ಲಭ್ಯವಾಗಿದ್ದವು.
30 ರೂ. ಮುಖಬೆಲೆಯ 2870 ಲಾಟರಿ ಟಿಕೆಟ್ ಗಳು ವಶಕ್ಕೆ
ಇದೀಗ ಇದೇ ವ್ಯಾಪ್ತಿಯ ನಾಲಾರೋಡಿನಲ್ಲಿ ರಾಮಾಪುರ ಪೊಲೀಸರು ಮಾರ್ಟಳ್ಳಿ ಗ್ರಾಮದ ಮೊದಲೈಮುತ್ತು ಎಂಬಾತನನ್ನು ಬಂಧಿಸಿದ್ದಾರೆ. ಈತ ಕೇರಳದ ಪಾಲಕ್ಕಾಡ್ ನಿಂದ ಲಾಟರಿಗಳನ್ನು ತಂದು ಅಕ್ರಮವಾಗಿ ಕಾಯಂ ಗ್ರಾಹಕರಿಗಷ್ಟೇ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಸದ್ಯ ಆತನಿಂದ 30 ರೂ. ಮುಖಬೆಲೆಯ 2870 ಲಾಟರಿ ಟಿಕೆಟ್ ಗಳನ್ನು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ 86 ಸಾವಿರ ರೂ ಎಂದು ಹೇಳಲಾಗಿದೆ.
ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಲಾಟರಿ ಮಾರಾಟಗಾರರು ರಂಗೋಲಿ ಕೆಳಗೆ ನುಸುಳುವ ಚಾಣಕ್ಷತೆ ಹೊಂದಿರುವುದರಿಂದ ಆಗೊಮ್ಮೆ ಈಗೊಮ್ಮೆ ಸಿಕ್ಕಿ ಬೀಳುತ್ತಾರೆ ವಿನಃ ಉಳಿದಂತೆ ಗೊತ್ತೇ ಆಗುವುದಿಲ್ಲ. ಸಂಬಂಧಿಸಿದವರು ಇತ್ತ ಗಮನಹರಿಸಬೇಕಿದೆ. ಇದಕ್ಕೆ ಸಾರ್ವಜನಿಕರು ಕೂಡ ಸಹಕರಿಸಿ ಲಾಟರಿ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಸಹಕಾರ ನೀಡುವುದು ಅಗತ್ಯವಾಗಿದೆ.