ಇ –ಕೆವೈಸಿ ಕಡ್ಡಾಯ ಹಿನ್ನೆಲೆ ರೇಶನ್ ಅಂಗಡಿ ಮುಂದೆ ಸರತಿ ಸಾಲು
ಮೈಸೂರು, ಜುಲೈ 3: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಹೋಗಿ, ಸದಸ್ಯರ ಇ-ಕೆವೈಸಿ ಅಪ್ಲೋಡ್ ಮಾಡಲು ಸೂಚನೆ ನೀಡಿರುವ ಕಾರಣ ಜನರು ಜಿಲ್ಲೆಯಲ್ಲಿ ಮತ್ತೊಮ್ಮೆ ರೇಶನ್ ಅಂಗಡಿ ಎದುರು ಸರದಿ ನಿಲ್ಲಬೇಕಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಯಮದಂತೆ ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ಮೂಲಕ ರೇಷನ್ ಅಂಗಡಿಯಲ್ಲಿ ಆಹಾರಧಾನ್ಯ ಪಡೆಯುತ್ತಿರುವವರು ಇ-ಕೆವೈಸಿ ಅನ್ನು ಜೂನ್ 1ರಿಂದ ಜುಲೈ 31ರ ಒಳಗಾಗಿ ಆನ್ಲೈನ್ನಲ್ಲಿ ಅಪಲೋಡ್ ಮಾಡಬೇಕಾಗಿದೆ. ಹೀಗಾಗಿ, ಮನೆಯ ಸದಸ್ಯರೆಲ್ಲ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾಗಿರುವುದು ಅನಿವಾರ್ಯವಾಗಿದೆ.
ಒನ್ ನೇಶನ್, ಒನ್ ರೇಶನ್: ದೇಶದಾದ್ಯಂತ ಒಂದೇ ಪಡಿತರ ಚೀಟಿ
ಪಡಿತರ ಚೀಟಿಗೆ ಆಧಾರ್ ಕಾರ್ಡ್ ಮಾತ್ರ ಲಿಂಕ್ ಆಗಿತ್ತು. ಕಾರ್ಡಿನಲ್ಲಿ ಇರುವವರ ಬೆರಳಚ್ಚು ದಾಖಲಾಗಿರಲಿಲ್ಲ. ಪಡಿತರ ಚೀಟಿಯಲ್ಲಿ ಹೆಸರಿದ್ದು, ಬೇರೆ ಊರಿನಲ್ಲಿ ವಾಸಿಸುತ್ತಿರುವವರ ಹೆಸರಿನಲ್ಲಿ ಕೆಲವರು ಪಡಿತರ ಪಡೆಯುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು ಬೆರಳಚ್ಚು ಪಡೆಯಲಾಗುತ್ತಿದೆ. ಕಾರ್ಡಿನಲ್ಲಿ ಹೆಸರಿರುವ ಎಲ್ಲರೂ ಬೆರಳಚ್ಚು ನೀಡುವುದು ಕಡ್ಡಾಯ ಎಂಬುದು ಅಧಿಕಾರಿಗಳು ನೀಡುವ ವಿವರಣೆ.
ರೇಶನ್ ಅಂಗಡಿ ನಡೆಸುತ್ತಿರುವವರಲ್ಲಿ ಬಹುತೇಕರು ಅರ್ಧ ವಯಸ್ಸು ದಾಟಿದವರು. ಅವರಿಗೆ ತಂತ್ರಜ್ಞಾನದ ಮಾಹಿತಿ ಅಷ್ಟಾಗಿ ಇಲ್ಲ. ಸರ್ಕಾರ ಹೊಸ ನಿಯಮವನ್ನು ಕಡ್ಡಾಯಗೊಳಿಸಿದ್ದರಿಂದ ಕಂಪ್ಯೂಟರ್ ಬಗ್ಗೆ ಅರಿವಿರುವ ಯುವಕರನ್ನು ಈ ಕಾರ್ಯಕ್ಕೆ ನೇಮಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ರೇಶನ್ ಅಂಗಡಿಯ ಮಾಲೀಕರೊಬ್ಬರು.
ಈ ಹೊಸ ತಂತ್ರಾಂಶದಲ್ಲಿ ಮಾಹಿತಿ ಸೇರಿಸುವಾಗ ರೇಶನ್ ಕಾರ್ಡ್ ಹೊಂದಿರುವ ಕುಟುಂಬದ ಹಿರಿಯ ಮಹಿಳೆ ಆ ಕಾರ್ಡಿನ ಮುಖ್ಯಸ್ಥೆಯಾಗುತ್ತಾಳೆ. ಹೊಸ ಕಾರ್ಡ್ನಲ್ಲಿ ಕುಟುಂಬದ ಹಿರಿಯ ಮಹಿಳೆಯನ್ನೇ ಮುಖ್ಯಸ್ಥರನ್ನಾಗಿಸಲಾಗಿದೆ. ಹಳೆಯ ಕಾರ್ಡ್ನಲ್ಲಿ ಕುಟುಂಬದ ಹಿರಿಯ ಪುರುಷ ಮುಖ್ಯಸ್ಥರಾಗಿದ್ದರು. ಅದನ್ನು ಬದಲಿಸಿ, ಈಗ ಮಹಿಳೆಯರ ಹೆಸರಿಗೆ ವರ್ಗಾಯಿಸಲಾಗುತ್ತಿದೆ.
ಪಡಿತರ ಚೀಟಿದಾರರ ಆನ್ಲೈನ್ ದಾಖಲಾತಿ ಸಂಗ್ರಹಕ್ಕೆ ತಾತ್ಕಾಲಿಕ ತಡೆ
ವೃದ್ಧರು, ಕಾಯಿಲೆ ಇದ್ದು ಬೆರಳಚ್ಚು ನೀಡಲಾಗದ ಸದಸ್ಯರ ವಿವರವನ್ನು ಅಪಲೋಡ್ ಮಾಡುವ ನಿರ್ಧಾರವನ್ನು ರೇಶನ್ ಅಂಗಡಿಗೆ ನೀಡಲಾಗಿದೆ. ಈ ತೊಂದರೆ ಇರುವವರಿಗೆ ವಿನಾಯಿತಿ ನೀಡಲು ಅವಕಾಶವಿದೆ. ನಿಗದಿತ ಅವಧಿಯೊಳಗೆ ಅಪ್ಲೋಡ್ ಮಾಡದಿದ್ದಲ್ಲಿ ಆಗಸ್ಟ್ ತಿಂಗಳಿನಿಂದ ಆ ವ್ಯಕ್ತಿಯ ಹೆಸರಿನಲ್ಲಿ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳ್ಳುತ್ತದೆ ಎನ್ನುತ್ತಾರೆ ಅಧಿಕಾರಿಗಳು.