ಬೆಂಗಳೂರು ಬಿಡುತ್ತಿರುವ ಜನರಿಗೆ ವಿಶ್ವಾಸ ತುಂಬಬೇಕಿತ್ತು. ಆದರೆ...
ಮೈಸೂರು, ಜುಲೈ 8: "ರಾಜ್ಯದಲ್ಲಿ ಲಾಕ್ಡೌನ್ ಅವಶ್ಯಕತೆ ಈಗ ಹೆಚ್ಚಿತ್ತು. ಆದರೆ ಕಾಲ ಮಿಂಚಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿದೆ. ಜನ ಭಯಗೊಂಡು ಬೆಂಗಳೂರು ಬಿಡುತ್ತಿದ್ದಾರೆ" ಎಂದು ಹೇಳಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಇಂದು ಮೈಸೂರಿನಲ್ಲಿ ಹಲವು ವಿಷಯಗಳ ಕುರಿತು ಸಿದ್ದರಾಮಯ್ಯ ಮಾತನಾಡಿದರು. ಏಕಾಏಕಿ ಬೆಂಗಳೂರು ಬಿಟ್ಟು ಊರಿನ ಕಡೆ ಮುಖ ಮಾಡುತ್ತಿರುವ ಜನರ ಕುರಿತು ಮಾತನಾಡಿ, ಸರ್ಕಾರ ಅವರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಸರ್ಕಾರ ಮಾಡಲಿಲ್ಲ. ಹೀಗಾಗೇ ಜನ ಬೆಂಗಳೂರು ಬಿಡುತ್ತಿದ್ದಾರೆ ಎಂದು ದೂರಿದರು.
ಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯ
"ಸರ್ಕಾರ ಈ ಕೆಲಸ ಮಾಡಲಿಲ್ಲ"
"ಜನರು ಕೊರೊನಾ ಸೋಂಕಿನ ಭಯದಿಂದ ಊರುಗಳ ಕಡೆ ತೆರಳುತ್ತಿದ್ದಾರೆ. ಅವರಿಗೆ ಸರ್ಕಾರ ವಿಶ್ವಾಸವನ್ನು ತುಂಬಬೇಕಿತ್ತು. ಅವರಿಗೆ ಊಟ, ಕೆಲಸ ಮತ್ತು ಹಣ ನೀಡುವ ಮೂಲಕ ಧೈರ್ಯ ಹೇಳಬೇಕಿತ್ತು. ಆದರೆ ಇದಾವುದೇ ಕೆಲಸವನ್ನು ಸರ್ಕಾರ ಮಾಡಲಿಲ್ಲ. ಹೀಗಾಗೇ ಜನ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ" ಎಂದು ಹೇಳಿದರು.
"ಕೊರೊನಾ ನಿಯಂತ್ರಣಕ್ಕೆ ವೆಚ್ಚ ಮಾಡಿರುವ ಲೆಕ್ಕ ಕೊಡಲಿ"
ಮೊದಲು ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಲಿ. ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳಿಸಿ. ನಾನೇ ಲೆಕ್ಕ ಪರಿಶೀಲಿಸುತ್ತೇನೆ. ಸರ್ಕಾರ ಪಾರದರ್ಶಕವಾಗಿದ್ದರೆ ಈ ಕೆಲಸ ಮಾಡಲಿ. ಇದನ್ನು ನಾನು ಇಲ್ಲಿಗೇ ಬಿಡುವುದಿಲ್ಲ. ಲಾಜಿಕಲ್ ಎಂಡ್ಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಗುಡುಗಿದರು.
"ಜೆಡಿಎಸ್ ಜತೆ ಮತ್ತೆ ಮೈತ್ರಿ"ಗೆ ಸಿದ್ದು ಪ್ರತಿಕ್ರಿಯೆ
ಜೆಡಿಎಸ್ ಜತೆ ಮತ್ತೆ ಯಾವತ್ತೂ ಮೈತ್ರಿ ಇಲ್ಲ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೇಡ ಅಂತ ನಾನೇ ಹೇಳಿದ್ದೆ. ಅವತ್ತು ಯಾರೂ ನನ್ನ ಮಾತು ಕೇಳಲಿಲ್ಲ. ನನ್ನದು ಆಗ ಸಿಂಗಲ್ ವಾಯ್ಸ್ ಆಗಿಬಿಡ್ತು ಎಂದು ಪ್ರತಿಕ್ರಿಯಿಸಿದ್ದಾರೆ.
"ಮೈಸೂರಿಗೆ ರೆಸ್ಟ್ ಮಾಡಲು ಬಂದಿದ್ದೆ"
ನಾನು ರೆಸ್ಟ್ ಮಾಡೋಣ ಅಂತ ಮೈಸೂರಿಗೆ ಬಂದಿದ್ದೆ. ಅದನ್ನೇ ಕೆಲವರು ಸೆಲ್ಫ್ ಕ್ವಾರಂಟೈನ್, ಅದು ಇದು ಭಯ ಅಂತ ಸುದ್ದಿ ಹಬ್ಬಿಸಿದ್ದರು. ಹೀಗಾಗಿ ಇವತ್ತೇ ವಾಪಾಸ್ ಬೆಂಗಳೂರಿಗೆ ಹೋಗ್ತಿದ್ದೀನಿ ಎಂದು ತಿಳಿಸಿದರು. ರೆಸ್ಟ್ ಅಂದ್ರೆ ಪರವಾಗಿಲ್ಲ. ಕ್ವಾರಂಟೈನ್ ಅಂದ್ರೆ ಬೇರೆ ಅರ್ಥ ಬರುತ್ತೆ ಅಲ್ವಾ? ಅದಕ್ಕೆ ವಾಪಸ್ ಹೋಗ್ತಿದ್ದೀನಿ ಎಂದಿದ್ದಾರೆ.
ಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯ