ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ: ಎಸ್ ಎಲ್ ಭೈರಪ್ಪ ಮಹತ್ವದ ಹೇಳಿಕೆ
ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿನ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ, ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಹುಟ್ಟಿಕೊಂಡಿರುವ ಗೊಂದಲವಿದು, ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ.
ಮೈಸೂರು, ಆ 5: ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿನ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ (ಆ 4) ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಭೈರಪ್ಪ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹುಟ್ಟಿಕೊಂಡಿರುವ ಗೊಂದಲವಿದು ಎನ್ನುವುದು ನನ್ನ ಅಭಿಪ್ರಾಯ.
ಲಿಂಗಾಯತ ಧರ್ಮ ವಿವಾದ, ಎಸ್ಎಲ್ ಭೈರಪ್ಪ ಸಂದರ್ಶನ
ಪ್ರಮುಖವಾಗಿ ಯಡಿಯೂರಪ್ಪನವರಿಗೆ ಈ ಸಮುದಾಯ ನೀಡುತ್ತಿರುವ ಬೆಂಬಲ ಕಮ್ಮಿಯಾಗಬೇಕು ಎನ್ನುವ ರಾಜಕೀಯದ ವಾಸನೆ ನನಗೆ ಈ ವಿಚಾರದಲ್ಲಿ ಕಾಣುತ್ತಿದೆ. ಪ್ರತ್ಯೇಕ ಧರ್ಮದ ಕೂಗು ನಾನು ಹುಟ್ಟುಹಾಕಿದಲ್ಲ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದರೂ, ಜನ ಅದನ್ನು ನಂಬುತ್ತಿಲ್ಲ ಎಂದು ಭೈರಪ್ಪ ಹೇಳಿದ್ದಾರೆ.
ಹಿಂದೂ ಸಮಾಜದಲ್ಲಿನ ಬೇರೆ ಬೇರೆ ಜಾತಿಗಳಲ್ಲಿ ಒಡಕು ಮೂಡಿಸುವ ಕೆಲಸವನ್ನು ಕ್ರೈಸ್ತ ಮಿಷನರಿಗಳು ಮಾಡುತ್ತಿದ್ದವು ಎನ್ನುವುದನ್ನು ನಾವು ಕೇಳಿದ್ದೇವೆ. ಯಾರೇ ಆಗಲಿ ಮಾತೃಧರ್ಮಕ್ಕೆ ವಿರುದ್ದವಾಗಿ ನಡೆದರೆ ಅದಕ್ಕೆ ನನ್ನ ವಿರೋಧವಿದೆ ಎಂದು ಭೈರಪ್ಪ ಹೇಳಿದ್ದಾರೆ.
ಅದೇ ರೀತಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯ ಬೇರೆ ಬೇರೆ ಎನ್ನುವ ಕೂಗನ್ನು ಯಾರು ಹುಟ್ಟಿಹಾಕಿದರೋ ಅವರ ಕೆಲಸ, ಮಿಷನರಿಗಳು ಮಾಡುವ ಕೆಲಸಕ್ಕೆ ಹೋಲಿಸಬಹುದು ಎಂದು ಭೈರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
ಬಸವಣ್ಣನವರ ತತ್ವವನ್ನು ವೀರಶೈವ, ಲಿಂಗಾಯತ ಸಮುದಾಯದವರು ಸೇರಿ ಎಲ್ಲಾ ಹಿಂದೂಗಳು ಪಾಲಿಸಬೇಕು ಎಂದು ಎಸ್ ಎಲ್ ಭೈರಪ್ಪ ಹೇಳಿದ್ದಾರೆ.