ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಚಿರತೆ ಪರಾರಿ
ಮೈಸೂರು, ಮಾರ್ಚ್ 08: ತೆಂಗಿನ ಮರವೇರಿ ಕುಳಿತಿದ್ದ ಚಿರತೆಯ ಸೆರೆಗಾಗಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಅರಣ್ಯಾಧಿಕಾರಿಗಳಿಗೆ ಸಿಗದೆ ಪರಾರಿಯಾದ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಾಥಪುರ ಗ್ರಾಮದ ತೋಟದಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಸೋಮನಾಥಪುರ ಗ್ರಾಮದ ರೈತ ಯೋಗೇಶ್ ಎಂಬುವವರ ಜಮೀನಿನಲ್ಲಿದ್ದ ಚಿರತೆಯೊಂದು ನೇರವಾಗಿ ಅಲ್ಲಿಯೇ ಇದ್ದ ತೆಂಗಿನ ಮರವೇರಿ ಕುಳಿತು ಬಿಟ್ಟಿದೆ. ಚಿರತೆ ತೆಂಗಿನ ಮರದ ಮೇಲೆ ಕುಳಿತಿರುವ ವಿಷಯ ತಿಳಿದು ಜನ ಜಮಾಯಿಸಲಾರಂಭಿಸಿದರು.
ಎಚ್ ಡಿ ಕೋಟೆಯಲ್ಲಿ ಹಾಡಹಗಲೇ ಯುವಕನ ಮೇಲೆ ಚಿರತೆ ದಾಳಿ
ಚಿರತೆಯು ಸುಮಾರು 12.30 ಗಂಟೆಯಾದರೂ ಕೆಳಕ್ಕೂ ಇಳಿಯಲೇ ಇಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ಬಸವರಾಜು, ದಫೇದಾರ್ ಕೇಶವಮೂರ್ತಿ ಸ್ಥಳಕ್ಕೆ ದೌಡಾಯಿಸಿ ಚಿರತೆ ನೋಡಲು ಮುಗಿಬಿದ್ದ ಜನರನ್ನು ಮುಂಜಾಗ್ರತಾ ಕ್ರಮವಾಗಿ ನಿಯಂತ್ರಿಸಿದರು.
ಚಿರತೆಯು ಮರವೇರಿ ಕುಳಿತಿರುವ ವಿಚಾರವನ್ನು ಪೊಲೀಸರಿಂದ ಮಾಹಿತಿ ಪಡೆದ ತಾಲೂಕು ಅರಣ್ಯಾಧಿಕಾರಿ ಮಧುಸೂಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ನೇತೃತ್ವದ ಅಧಿಕಾರಿಗಳ ತಂಡವು ಅರವಳಿಕೆ ತಜ್ಞರನ್ನು ಕರೆಸಿ ಚಿರತೆಯನ್ನು ಯಾವುದೇ ಪ್ರಾಣಾಪಾಯವಿಲ್ಲದಂತೆ ಕಾರ್ಯಾಚರಣೆ ನಡೆಸಿ ಸರೆ ಹಿಡಿಯಲು ಮುಂದಾಗಿದ್ದಾರೆ.
ಒಂದು ಕಡೆ ಕಾರ್ಯಾಚರಣೆ ನಡೆಸಲು ಮುಂದಾಗುತ್ತಿದ್ದಂತೆಯೇ ಇನ್ನೊಂದೆಡೆ ಅರಣ್ಯಾಧಿಕಾರಿಗಳ ಕಣ್ಣು ತಪ್ಪಿಸಿ ಮರದಿಂದ ಜಿಗಿದು ಓಡಿ ಕಾಡು ಸೇರಿಕೊಂಡಿದೆ. ಇದರಿಂದ ಜನರೇನೋ ನಿಟ್ಟುಸಿರು ಬಿಟ್ಟರಾದರೂ ಚಿರತೆಯನ್ನು ಸೆರೆ ಹಿಡಿದಿದ್ದರೆ ನೆಮ್ಮದಿಯಾಗುತ್ತಿತ್ತು.
ಜಪ್ತಿ ಬಳಿ ಮಹಿಳೆಯ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಈಗಾಗಲೇ ಈ ಚಿರತೆ ಹಲವು ಸಾಕುಪ್ರಾಣಿಗಳನ್ನು ತಿಂದು ಹಾಕಿ ಭಯ ಹುಟ್ಟಿಸಿತ್ತು. ಮತ್ತೆ ಗ್ರಾಮಕ್ಕೆ ಬರುವ ಸಾಧ್ಯತೆಯಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಚಿರತೆಯನ್ನು ಸೆರೆ ಹಿಡಿಯುವ ತವಕದಲ್ಲಿದ್ದ ಅರಣ್ಯಾಧಿಕಾರಿಗಳು ಚಿರತೆ ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಗಿದ್ದಾರೆ.
ಸಾಕುನಾಯಿಗಳನ್ನು ಕೊಂದು ಜನರಲ್ಲಿ ಭಯ ಹುಟ್ಟಿಸಿದ ಚಿರತೆ ಸಾವು!
ಇದೀಗ ಸೋಮನಾಥಪುರ ಗ್ರಾಮಸ್ಥರು ಅರಣ್ಯಾಧಿಕಾರಿಗಳು ಕೂಡಲೇ ಬೋನಿಟ್ಟು ಚಿರತೆಯನ್ನು ಹಿಡಿಯಬೇಕೆಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.