ಎಚ್.ಡಿ.ಕೋಟೆ; 3 ದಿನಗಳ ನಂತರ ಬಾವಿಯಿಂದ ಚಿರತೆಗೆ ಸಿಕ್ಕಿತು ಮುಕ್ತಿ
ಮೈಸೂರು, ಜುಲೈ 20: ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದ ಬಳಿ ನೀರಿಲ್ಲದ ಬಾವಿಯೊಂದಕ್ಕೆ ಬಿದ್ದಿದ್ದ ಚಿರತೆಯನ್ನು ಸತತ ಕಾರ್ಯಾಚರಣೆ ನಂತರ ಮೇಲೆತ್ತುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಜುಲೈ 18ರಂದು ಬಾವಿಗೆ ಚಿರತೆ ಬಿದ್ದಿರುವುದಾಗಿ ಗ್ರಾಮಸ್ಥರು ನಾಗರಹೊಳೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ದಿನದಿಂದಲೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮೇಲೆತ್ತಲು ಕಾರ್ಯಾಚರಣೆ ನಡೆಸಿತ್ತು. ಅಂತರಸಂತೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಅವರೇ ಪಂಜರದೊಳಗೆ ಕುಳಿತು 100 ಅಡಿಯಿರುವ ಬಾವಿಯೊಳಗೆ ಇಳಿದು ಪರಿಶೀಲಿಸಿದ್ದರು. ಆದರೆ ಚಿರತೆ ಪತ್ತೆ ಆಗಿರಲಿಲ್ಲ. ಆದರೆ ಗ್ರಾಮಸ್ಥರು ತಾವು ಚಿರತೆ ಬಾವಿಯೊಳಗೆ ಬೀಳುವುದನ್ನು ನೋಡಿದ್ದೇವೆ ಎಂದು ಖಚಿತವಾಗಿ ಹೇಳಿದ ನಂತರ ಪುನಃ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮೆರಾವನ್ನು ಬಾವಿಯೊಳಗೆ ಬಿಟ್ಟು ಪರಿಶೀಲಿಸಿದರು. ಆಗ ಚಿರತೆ ಪತ್ತೆಯಾಗಿತ್ತು.
100 ಅಡಿ ಬಾವಿಯಲ್ಲಿ ಚಿರತೆ ಪತ್ತೆ: ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ
ಚಿರತೆ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಸತತ ಮೂರು ದಿನಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದರು. ಸುಮಾರು 40ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಚಿರತೆ ಮೇಲೆತ್ತಲು ಹರಸಾಹಸ ಪಡುತ್ತಿದ್ದರು. ಇದೀಗ ಚಿರತೆಯನ್ನು ಮೇಲೆತ್ತುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟಿದ್ದಾರೆ.