ನಂಜನಗೂಡು ಬಳಿ ಚಿರತೆಯ ಅಟ್ಟಹಾಸ, ಕರುವನ್ನು ತಿಂದುತೇಗಿದ ವನ್ಯಮೃಗ!
ನಂಜನಗೂಡು, ನವೆಂಬರ್ 09 : ಚಿರತೆಯೊಂದು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಮನೆಯ ಮುಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ತಿಂದು ಹಾಕಿರುವ ಘಟನೆ ನಂಜನಗೂಡು ತಾಲೂಕಿನ ಕೆಂಪಿಸಿದ್ದನ ಹುಂಡಿ ಗ್ರಾಮದಲ್ಲಿ ನಡೆದಿದ್ದು ಗ್ರಾಮಸ್ಥರು ಭಯದಲ್ಲಿ ದಿನವನ್ನು ಕಳೆಯುವಂತಾಗಿದೆ.
ನರಭಕ್ಷಕ ಹುಲಿ 'ಅವನಿ' ಹತ್ಯೆ ಕಟ್ಟುಕಥೆಯೇ? ತಜ್ಞರ ಅನುಮಾನ
ಕೆಂಪಿಸಿದ್ದನ ಹುಂಡಿ ಗ್ರಾಮದ ನಿವಾಸಿ ರಾಚಯ್ಯ ಎಂಬುವರು ತಮ್ಮ ಮನೆ ಮುಂಭಾಗವಿರುವ ಕೊಟ್ಟಿಗೆಯಲ್ಲಿ ಕರುವನ್ನು ಇತರೆ ದನಗಳ ನಡುವೆ ಕಟ್ಟಿ ಹಾಕಿದ್ದರು. ಆದರೆ ರಾತ್ರಿ ವೇಳೆ ಕೊಟ್ಟಿಗೆಗೆ ನುಗ್ಗಿದ ಚಿರತೆ ಕರುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಅರ್ಧ ದೇಹವನ್ನು ತಿಂದು ಹಾಕಿ ಪರಾರಿಯಾಗಿದೆ.
ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು, ಭಯದಲ್ಲಿ ಜನರು!
ಈ ಘಟನೆಯಿಂದ ಭಯ ಭೀತರಾಗಿರುವ ಗ್ರಾಮಸ್ಥರು ತಮ್ಮ ಜಾನುವಾರುಗಳು ಮತ್ತು ಮೇಕೆ, ಕುರಿಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಗ್ರಾಮದಲ್ಲಿ ಚಿರತೆ ಅಡಗಿಕೊಂಡಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಜಮೀನಿಗೆ ತೆರಳಲು ಭಯಪಡುವಂತಾಗಿದೆ. ಜತೆಗೆ ಜಾನುವಾರುಗಳನ್ನು ಮೇಯಿಸುವುದು ಹೇಗೆ ಎಂಬ ಚಿಂತೆ ಕಾಡತೊಡಗಿದೆ.
ಮೈಸೂರು ಜಿಲ್ಲೆಯಲ್ಲಿ ಕಾಡಿಗೆ ಬಿಟ್ಟರೂ ನಾಡಿಗೆ ಬರುತ್ತಿರುವ ಚಿರತೆಗಳು
ಗ್ರಾಮದಲ್ಲಿ ಬೀಡು ಬಿಟ್ಟಿರುವ ಚಿರತೆ ಯಾವಾಗ ಬೇಕಾದರೂ ದಾಳಿ ಮಾಡುವ ಸಾಧ್ಯತೆ ಇರುವ ಕಾರಣ ಅರಣ್ಯ ಇಲಾಖೆ ಕೂಡಲೇ ಬೋನಿರಿಸಿ ಚಿರತೆಯನ್ನು ಸೆರೆ ಹಿಡಿಯಬೇಕು, ಜತೆಗೆ ಕರುವನ್ನು ಕಳೆದುಕೊಂಡಿರುವ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ