ಮೈಸೂರು : 2 ಗಂಟೆಗಳ ಬಳಿಕ ಕೊನೆಗೂ ಬಲೆಗೆ ಬಿದ್ದ ಚಿರತೆ
ಮೈಸೂರು, ಅಕ್ಟೋಬರ್ 26 : ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಗುರುವಾರ ಮುಂಜಾನೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೃಗಾಲಯದ ಆವರಣದಲ್ಲಿನ ಮರದ ಮೇಲೆ ಚಿರತೆ ಕಂಡು ಸ್ವತಃ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದರು. ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಗುರುವಾರ ಬೆಳಗ್ಗೆ ಮೃಗಾಲಯದ ಸಿಬ್ಬಂದಿಯೊಬ್ಬರು ಮೃಗಾಲಯ ಸುತ್ತ ಗಸ್ತು ತಿರುಗುತ್ತಿದ್ದಾಗ ಮರದ ಮೇಲೆ ಚಿರತೆಯನ್ನು ನೋಡಿದರು. ಕೂಡಲೇ ಅವರು ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು. ಆದರೆ, ಚಿರತೆ ಮೃಗಾಯದಿಂದ ತಪ್ಪಿಸಿಕೊಂಡಿದ್ದೋ?, ಹೊರಗಿನಿಂದ ಬಂದಿದ್ದೋ? ಎಂಬ ಗೊಂದಲ ಉಂಟಾಯಿತು.
ಮೈಸೂರು ಮೃಗಾಲಯಕ್ಕೆ ನುಗ್ಗಿದ ಚಿರತೆ, ಆತಂಕದ ವಾತಾವರಣ
ತಕ್ಷಣ ಸಿಬ್ಬಂದಿಗಳು ಮೃಗಾಲಯದಲ್ಲಿರುವ ಚಿರತೆಗಳ ಬೋನುಗಳನ್ನು ಪರಿಶೀಲನೆ ನಡೆಸಿದರು. ಆಗ ಚಿರತೆ ಮೃಗಾಲಯದಿಂದ ತಪ್ಪಿಸಿಕೊಂಡಿಲ್ಲ. ಹೊರಗಿನಿಂದ ಬಂದು ಮೃಗಾಲಯಕ್ಕೆ ನುಗ್ಗಿದೆ ಎಂಬುದು ಖಚಿತವಾಯಿತು. ನಂತರ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಯಿತು.
ಸುಮಾರು ಎರಡು ಗಂಟೆಗಳ ಕಾಲ ಮೃಗಾಲಯದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದರು. ಕಾರ್ಯಾಚರಣೆ ಮುಗಿಯುವ ತನಕ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು...
ಎಲ್ಲಿಂದ ಬಂತು ಚಿರತೆ?
ಕಾರಂಜಿ ಕೆರೆ ಬಳಿಯ ದ್ವಾರದಿಂದ ಮುಂಜಾನೆ ಚಿರತೆ ಮೃಗಾಯದೊಳಗೆ ನುಗ್ಗಿರಬೇಕು ಎಂದು ಶಂಕಿಸಲಾಗಿದೆ. ಬೆಳಗ್ಗೆ ಮರವೇರಿ ಕುಳಿತ ಚಿರತೆಯನ್ನು ಸಿಬ್ಬಂದಿಗಳು ನೋಡಿದ್ದು, ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಪ್ರವಾಸಿಗರಿಗೆ ಆತಂಕ
ಚಿರತೆ ಮೃಗಾಲಯದ ಆವರಣದಲ್ಲಿನ ಮರವೇರಿ ಕುಳಿತಿದೆ ಎಂಬುದು ತಿಳಿಯುವಾಗ ಹಲವು ಪ್ರವಾಸಿಗರು ಒಳಗಿದ್ದರು. ಇದರಿಂದಾಗಿ ಸಿಬ್ಬಂದಿ ಮತ್ತು ಪ್ರವಾಸಿಗರು ಆತಂಕಗೊಂಡರು.
ಪ್ರವಾಸಿಗರಿಗೆ ನಿಷೇಧ
ಚಿರತೆ ಪತ್ತೆಯಾದ ತಕ್ಷಣ ಎಲ್ಲಾ ಪ್ರವಾಸಿಗರನ್ನು ಮೃಗಾಲಯದಿಂದ ಹೊರಗೆ ಕಳಿಸಲಾಯಿತು. ಎರಡು ಗಂಟೆಗಳ ಕಾಲ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಆಗಮನ
ಮೃಗಾಲಯಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿದರು. ನಂತರ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚಿಸಿ ಚಿರತೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದರು.
ಅರವಳಿಕೆ ಚುಚ್ಚುಮದ್ದು
ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ಎರಡು ಗಂಟೆಗಳ ಬಳಿಕ ಕಾರ್ಯಾಚರಣೆ ಪೂರ್ಣಗೊಂಡಿತು. ಚಿರತೆ ಯಶಸ್ವಿಯಾಗಿ ಬೋನಿಗೆ ಬಿದ್ದಿತು.
ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ
ಚಿರತೆ ಯಾವ ಕಡೆಯಿಂದ ಬಂದಿದೆ ಎಂಬುದನ್ನು ಪರಿಶೀಲಿಸಿ, ಮತ್ತೆ ಹೊರಗಿನ ಪ್ರಾಣಿಗಳು ಒಳಗೆ ಪ್ರವೇಶಿಸದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.