ಬಾಲಕನ ಕೊಂದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಸ್ಥಳೀಯರ ಆತಂಕ ಹೆಚ್ಚಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಕೊನೆಗೂ ಸೆರೆ ಹಿಡಿದಿದ್ದಾರೆ. ಈ ಚಿರತೆಯು ಓರ್ವ ಬಾಲಕನನ್ನು ಬಲಿ ಪಡೆದಿತ್ತು.
ಮೈಸೂರು ಜನವರಿ 27: ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಬಾಲಕನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಕಳೆದ ಭಾನುವಾರ ಹೊರಳಹಳ್ಳಿಯಲ್ಲಿ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಎಳೆದೊಯ್ದು ಮೃತದೇಹವನ್ನು ತಿಂದು, ಜಮೀನೊಂದರ ಬಳಿ ಅರ್ಧ ದೇಹವನ್ನು ಬಿಟ್ಟು ಹೋಗಿತ್ತು. ಬಾಲಕನ ಮೃತದೇಹವನ್ನು ಕಂಡು ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದರು. ಸ್ಥಳೀಯರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಹೀಗಾಗಿ ಬಾಲಕನನ್ನು ಕೊಂದ ಜಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದೊಡ್ಡ ಬೋನಿಟ್ಟಿದ್ದರು.
ಕಳೆದ ಎರಡು ದಿನಗಳ ಹಿಂದೆ ಮುಂಜಾನೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಚಿರತೆ ಕೂಗುವ ಶಬ್ಧ ಕೇಳಿದೆ. ಕೂಡಲೇ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಚಿರತೆ ಸೆರೆಯಾಗಿರುವುದು ತಿಳಿದು ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದು, ಚಿರತೆ ಸೆರೆಯಾಗಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಸೆರೆಯಾದ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು, ಮಹೇಶ್ ಕುಮಾರ್, ಎಸಿಎ್ ಲಕ್ಷ್ಮೀಕಾಂತ್, ಆರ್ಎ್ಒ ಸಲೀಂ ನದೀಮ್, ಡಿಆರ್ಎಒ ಮಂಜುನಾಥ್, ಅರಣ್ಯ ಸಿಬ್ಬಂದಿ ಹಾಜರಿದ್ದರು.
ತಿ.ನರಸೀಪುರ ತಾಲೂಕಿನಲ್ಲಿ ಬಾಲಕ ಸೇರಿದಂತೆ ನಾಲ್ವರ ಸಾವಿಗೆ ಕಾರಣವಾದ ಚಿರತೆಗೆ ಗುಂಡು ಹಾರಿಸಬೇಕು ಎಂದು ಸಾರ್ವಜನಿಕರು ಚಿರತೆ ಸಾಗಿಸುತ್ತಿದ್ದ ವಾಹನ ತಡೆದು ಆಕ್ರೋಶ ಹೊರಹಾಕಿದರು.
ನೆರಗ್ಯಾತನಹಳ್ಳಿ ಜಮೀನಿನಲ್ಲಿ ಇರಿಸಿದ ಬೋನಿಗೆ ಚಿರತೆ ಸೆರೆಯಾಗಿದೆ ಎಂದು ತಿಳಿದ ಕನ್ನಾಯಕನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ನೆರಗ್ಯಾತನಹಳ್ಳಿ ಸೇರಿದಂತೆ ನೂರಾರು ಸಾರ್ವಜನಿಕರು ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸ್ಥಳಾಂತರಿಸದಂತೆ ವಾಹನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಆಗಮಿಸಿ, "ಈ ಚಿರತೆಯನ್ನು ಬನ್ನಿರುಘಟ್ಟದ ಅರಣ್ಯದ ಪುನರ್ವಸತಿ ಕೇಂದ್ರಕ್ಕೆ ಹಾಕಲಾಗುವುದು ಯಾವುದೇ ಕಾರಣಕ್ಕೂ ಕಾಡಿಗೆ ಬಿಡುವುದಿಲ್ಲ ಎಂದು ಹೇಳಿದರು" ಇದಕ್ಕೆ ಒಪ್ಪದ ಸಾರ್ವಜನಿಕರು ಅದನ್ನು ಕೊಲ್ಲಲು ಒತ್ತಾಯಿಸಿದರು. ಬಳಿಕ ಸಾರ್ವಜನಿಕರನ್ನು ಸಮಾಧಾನಪಡಿಸಿ ಚಿರತೆಯನ್ನು ಸ್ಥಳಾಂತರಿಸಲಾಯಿತು.