ಮೈಸೂರು; ಚಿರತೆ ನೋಡುವ ಭರದಲ್ಲಿ ಕೊರೊನಾ ಮರೆತ ಜನ
ಮೈಸೂರು, ಮೇ 22: ಕಳೆದ ಎರಡು ಮೂರು ತಿಂಗಳಿಗಳಿಂದ ತಿ. ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದ ಜನರಿಗೆ ವಿಪರೀತ ಕಾಟ ಕೊಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಇದರಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಚಿರೆತ ಹಿಡಿಯುವ ಭರದಲ್ಲಿ ಕೊರೊನಾವನ್ನೂ ಮರೆತು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಕಂಡುಬಂದಿದೆ.
Recommended Video
ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸುತಿತ್ತು. ಅಷ್ಟೇ ಅಲ್ಲದೆ ರಾತ್ರಿ ನಾಯಿಗಳನ್ನೂ ಹೊತ್ತೊಯ್ಯುತಿತ್ತು. ಇದರಿಂದಾಗಿ ಗ್ರಾಮಸ್ಥರಲ್ಲಿ ಜೀವ ಭಯ ಹುಟ್ಟಿಕೊಂಡಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ದೂರು ನೀಡಿದ್ದರು.
ಮೈಸೂರಿನ ಕಬ್ಬಿನ ಗದ್ದೆಗಳಲ್ಲಿ ಆರು ಚಿರತೆ ಮರಿಗಳು ಪ್ರತ್ಯಕ್ಷ
ಈ ಹಿನ್ನೆಲೆಯಲ್ಲಿ ರೈತ ರಾಜು ಎಂಬುವವರ ಜಮೀನಿನಲ್ಲಿ ಬೋನು ಇರಿಸಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಶುಕ್ರವಾರ ರಾತ್ರಿ ಬೇಟೆಯಾಡಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಸೆರೆಯಾಗಿರುವ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ನಿರ್ಧರಿಸಿದ್ದಾರೆ. ಈ ಸಮಯ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದರು.