ಮೈಸೂರಿನಲ್ಲಿ ಚಿರತೆ ಕಾಟ: ಕೊನೆಗೂ ಬೋನಿಗೆ ಬಿತ್ತು
ಮೈಸೂರು, ಮೇ 12: ಹಲವಾರು ದಿನಗಳಿಂದ ಜಾನುವಾರುಗಳು, ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಮೈಸೂರು ಸಮೀಪದ ಗುಂಡ್ಲುಪೇಟೆ ತಾಲ್ಲೂಕಿನ ಹುಲ್ಲೇಪುರ ಗ್ರಾಮದ ಹೊರವಲಯದಲ್ಲಿರುವ ಶಾಸಕ ಸಿ.ಎಸ್ ನಿರಂಜನ್ ಕುಮಾರ್ ಅವರ ಜಮೀನಿನ ಬಳಿ ಚಿರತೆಯೊಂದು ನಿನ್ನೆ ರಾತ್ರಿ ಬೋನಿನೊಳಗೆ ಸೆರೆಯಾಗಿದೆ.
ಮಂಡ್ಯದ ಭವಾನಿಕೊಪ್ಪಲು ಜನರ ನಿದ್ದೆಗೆಡಿಸಿವೆ ಮೂರು ಚಿರತೆಗಳು
ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ 7 ರಿಂದ 8 ವರ್ಷದ ಗಂಡು ಚಿರತೆ ಸಿಕ್ಕಿಬಿದ್ದಿದ್ದು, ಹುಲ್ಲೇಪುರ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೋನಿಗೆ ಬಿದ್ದ ಚಿರತೆಯನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಂಡೀಪುರ ವಲಯದ ಅರಣ್ಯ ಸಿಬ್ಬಂದಿ ಚಿರತೆಯನ್ನು ಕೊಂಡೊಯ್ದು ಮೂಲೆಹೊಳೆ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಈ ಚಿರತೆ ಗ್ರಾಮಸ್ಥರಿಗೆ ಕೆಲವೊಮ್ಮೆ ಕಾಣಿಸಿಕೊಂಡಿದ್ದರೂ ರಾತ್ರಿ ವೇಳೆ ದಾಳಿ ನಡೆಸುತ್ತಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯು ಬೋನನ್ನು ಇರಿಸಿದ್ದರಿಂದ ಬಲೆಗೆ ಬಿದ್ದಿದೆ.