ನಾಗರಹೊಳೆ ಕಾಡಂಚಿನಲ್ಲೀಗ ಹುಲಿ ನಂತರ ಶುರುವಾಯ್ತು ಚಿರತೆ ಕಾಟ
ಮೈಸೂರು, ಜೂನ್ 01: ಇತ್ತೀಚೆಗೆ ವೃದ್ಧನನ್ನು ಕೊಂದು, ಜಾನುವಾರುಗಳನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿದಿದ್ದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಜನರು ತುಸು ನೆಮ್ಮದಿಯಾಗಿದ್ದರು. ಆದರೆ ಇದೀಗ ಚಿರತೆ ಕಾಟ ಶುರುವಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ಆಗಾಗ್ಗೆ ಯಾವುದಾದರೂ ವನ್ಯ ಪ್ರಾಣಿಗಳು ಕಾಟ ಕೊಡುತ್ತಲೇ ಇರುತ್ತವೆ. ಈ ಬಗ್ಗೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿ, ಹುಲಿ, ಚಿರತೆಗಳನ್ನು ಸೆರೆ ಹಿಡಿಯುತ್ತಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ.
ಮೈಸೂರಿನಲ್ಲಿ ಕುರಿಗಾಹಿ ಹತ್ಯೆ ಮಾಡಿದ್ದ ನರಭಕ್ಷಕ ಹುಲಿ ಸೆರೆ
ಈ ನಡುವೆ ಹಾಡಹಗಲೇ ಕೊಟ್ಟಿಗೆಗೆ ನುಗ್ಗಿದ ಚಿರತೆ ಮೇಕೆಯೊಂದನ್ನು ಹೊತ್ತೊಯ್ದು ಸಂಪೂರ್ಣ ತಿಂದು ಹಾಕಿರುವ ಘಟನೆ ನಾಗರಹೊಳೆ ಉದ್ಯಾನದ ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ರೈತರು, ಜನರು ಭಯಗೊಂಡಿದ್ದಾರೆ. ಗ್ರಾಮದ ಚಿಕ್ಕೇಗೌಡ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ ಮೇಕೆಯ ಮೇಲೆ ದಾಳಿ ನಡೆಸಿದ ಚಿರತೆ ಮೇಕೆಯನ್ನು ಕೊಂದು ಹೊತ್ತೊಯ್ದು ಸಮೀಪದ ಜಮೀನಿನಲ್ಲಿ ತಿಂದುಹಾಕಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಹುಣಸೂರು ವಲಯದ ಡಿ.ಆರ್.ಎಫ್.ಓ. ಸಿದ್ದರಾಜು ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಭಾಗದ ಗ್ರಾಮಸ್ಥರು ಹಾಡಹಗಲೇ ಕಾಣಿಸಿಕೊಂಡಿರುವ ಚಿರತೆಯನ್ನು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬೋನಿಟ್ಟು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.