ಈ ಸಮಯದಲ್ಲಿ ಕೇಳೋರಿಲ್ಲ ಅತಿಥಿ ಶಿಕ್ಷಕ, ಉಪನ್ಯಾಸಕರ ಗೋಳು
ಮೈಸೂರು, ಜುಲೈ 13: ರಾಜ್ಯದಾದ್ಯಂತ ಶಾಲಾ, ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸ್ಥಿತಿ ಶೋಚನೀಯವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವ ಕಾರಣದಿಂದ ಕೆಲಸವೂ ಇಲ್ಲದೆ ಸಂಬಳವೂ ಇಲ್ಲದೆ ಗೋಳಾಡುವ ಪರಿಸ್ಥಿತಿ ಇವರದ್ದಾಗಿದೆ.
Recommended Video
ರಾಜ್ಯದಾದ್ಯಂತ ಸಾವಿರಾರು ಮಂದಿ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಸರ್ಕಾರ ಗೌರವಧನದಂತೆ ತಿಂಗಳಿಗೆ ವೇತನವನ್ನು ನೀಡುತ್ತಿದೆ. ಸರ್ಕಾರ ನೀಡಬೇಕಾದ ಸಂಬಳವನ್ನು ಮಾರ್ಚ್ 24 ರಿಂದ ಇಲ್ಲಿಯವರೆಗೂ ನೀಡಿಲ್ಲ. ತಮ್ಮ ಕಷ್ಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇವರಿದ್ದಾರೆ. ಇದೀಗ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಅತಿಥಿ ಉಪನ್ಯಾಸಕರು, ಶಿಕ್ಷಕರು ಮಾಡಿದ್ದಾರೆ. ಈಗಾಗಲೇ ಆನ್ ಲೈನ್ ಚಳವಳಿ ನಡೆಸಿರುವ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ತಮ್ಮ ಬೇಡಿಕೆಗಳಿರುವ ಪೋಸ್ಟರ್ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಾಕುವುದರ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ
ಆನ್ ಲೈನ್ ಚಳವಳಿಯಲ್ಲಿ ಸಮಸ್ಯೆ ಬಹಿರಂಗ
ಅತಿಥಿ ಶಿಕ್ಷಕರು, ಉಪನ್ಯಾಸಕರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ ಉಮಾದೇವಿ ಅವರ ಮುಂದಾಳತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರು ಈ ಚಳವಳಿಯಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಆನ್ ಲೈನ್ ಮೂಲಕ ಪ್ರತಿಭಟನೆ ನಡೆಸುತ್ತಿರುವುದು ಏಕೆ ಎಂಬುದನ್ನು ಹೊರ ಹಾಕಿರುವ ಅವರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆರೆದಿಟ್ಟಿದ್ದಾರೆ.
ಪುಡಿಗಾಸಿನ ಸಂಬಳಕ್ಕೂ ಕಾಯೋದು ತಪ್ಪಿಲ್ಲ
ಕೊರೊನಾದಿಂದಾಗಿ ಉಂಟಾಗಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿಯೂ ಅತಿಥಿ ಉಪನ್ಯಾಸಕರು, ಶಿಕ್ಷಕರ ಸಮಸ್ಯೆ ಹೆಚ್ಚಾಗಿದೆ. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅವರಿಗೆ ನೀಡಲಾಗುತ್ತಿರುವ ಸಂಬಳವು ಯಾವ ಮೂಲೆಗೂ ಸಾಕಾಗುವುದಿಲ್ಲ. ಪುಡಿಗಾಸು ಸಂಬಳಕ್ಕೂ ಅವರು ತಿಂಗಳಾನುಗಟ್ಟಲೆ ಕಾಯುವ ದುಸ್ಥಿತಿ ಇದೆ. ಹಿಂದಿನಿಂದಲೂ ಸರ್ಕಾರ ಇವರಿಗೆ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಕೊಡುತ್ತಿದ್ದ ಸಂಬಳವೂ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ.
ಕರ್ನಾಟಕ ವಿವಿಯಲ್ಲಿ 504 ಅತಿಥಿ ಉಪನ್ಯಾಸಕ ಹುದ್ದೆಗಳಿವೆ
ಸರ್ಕಾರದಿಂದ ನಿರುದ್ಯೋಗಿ ಯುವಜನರ ಶೋಷಣೆ
ಸರ್ಕಾರ ಮಾಧ್ಯಮಗಳ ಮುಂದೆ ಯಾವುದೇ ಕಾರಣಕ್ಕೂ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಂಬಳ ನಿಲ್ಲಿಸಬಾರದು ಎಂದು ಹೇಳಿದೆ. ಆದರೆ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಮಾರ್ಚ್ ನಿಂದ ಇಲ್ಲಿಯವರೆಗೂ ಸಂಬಳ ನೀಡಿಲ್ಲ. ಜೊತೆಗೆ ಸರ್ಕಾರಗಳು ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳುವ ಬದಲು 'ಅತಿಥಿ' ಎಂಬ ಪದದ ಮೂಲಕ ಕಡಿಮೆ ಸಂಬಳ ನೀಡಿ ನಿರುದ್ಯೋಗಿ ಯುವಜನರನ್ನು ಶೋಷಣೆ ಮಾಡುತ್ತಿವೆ. ಹಲವು ಶಿಕ್ಷಕರು 20-25 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಅತಿಥಿ ಶಿಕ್ಷಕ, ಉಪನ್ಯಾಸಕರಾಗಿಯೇ ಯಾವುದೇ ಜೀವನ ಭದ್ರತೆ ಇಲ್ಲದೆ ಮುಂದಿನ ಭವಿಷ್ಯದ ಬಗ್ಗೆ ಆತಂಕದಲ್ಲಿಯೇ ಜೀವನ ಸಾಗಿಸಬೇಕಾಗಿದೆ.
ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಾ?
ಇದೀಗ ನೊಂದಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರು ತಮಗೆ ನೀಡಲು ಬಾಕಿ ಇರುವ ಸಂಬಳವನ್ನು ಈ ಕೂಡಲೇ ವಿತರಿಸಿ. ಜತೆಗೆ ಕೂಡಲೇ ಲಾಕ್ ಡೌನ್ ಸಂದರ್ಭದ ಮೂರು ತಿಂಗಳ ಸಂಬಳವನ್ನು ಬಿಡುಗಡೆ ಮಾಡಿ. ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ ಎಂಬ ಬೇಡಿಕೆಯನ್ನಿಟ್ಟು ಸರ್ಕಾರದ ಮುಂದೆ ಮಂಡಿಯೂರಿ ಕುಳಿತಿದ್ದಾರೆ. ಇವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಾ ಎಂಬುದನ್ನು ಕಾಲವೇ ಹೇಳಬೇಕಾಗಿದೆ.