ಪಾರಿಜಾತ ಹೂವಿನ ಎಲೆಗಳು ನಿಪಾಹ್ ವೈರಸ್ ಗೆ ಮದ್ದಲ್ಲ
ಮೈಸೂರು, ಮೇ 26 : ನಿಪಾಹ್ ವೈರಸ್ ಹೆಸರು ಕೇಳಿದರೆ ಹೆದರದಿರುವ ಮಂದಿಯೇ ಇಲ್ಲವೇನೋ ಎಂಬತಾಗಿದೆ ಇಂದಿನ ಪರಿಸ್ಥಿತಿ. ಮಂಗಳೂರು, ಕೇರಳ ಗಡಿಯಾದ ಮೈಸೂರು, ಚಾಮರಾಜನಗರ ಜನರಂತೂ ಈ ಹೆಸರು ಕೇಳಿದರೇನೇ ಭಯಭೀತರಾಗುತ್ತಾರೆ.
ಇದರೊಟ್ಟಿಗೆ ಹೊಸ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಈ ಜ್ವರಕ್ಕೆ ಪಾರಿಜಾತ ಹೂವಿನ ಎಲೆಗಳು ರಾಮಬಾಣ ಎಂಬ ಸಂದೇಶ ಹರಿದಾಡುತ್ತಿದ್ದು, ಇದು ನಿಜವೇ ಎಂದು ಆಯುರ್ವೇದ ತಜ್ಞರನ್ನು ಸಂಪರ್ಕಿಸಿದರೆ ಇದೊಂದು ಸುಳ್ಳು ವದಂತಿ ಎನ್ನುತ್ತಾರೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ಶೀಘ್ರ ಜನೌಷಧ ಕೇಂದ್ರ ಆರಂಭ
ಪಾರಿಜಾತ ಹೂವಿನ ಎಲೆ ಕೇವಲ ವೈರಾಣು ಜ್ವರವನ್ನು ಗುಣಪಡಿಸಬಲ್ಲ ಶಕ್ತಿ ಹೊಂದಿದೆಯಷ್ಟೇ. ಅದರಿಂದ ಯಾವ ನಿಪಾಹ್ ವೈರಸ್ ಗುಣವಾಗುವುದಿಲ್ಲ ಎನ್ನುತ್ತಾರೆ. ಅಲ್ಲದೇ ಎಲ್ಲಿಯೂ ಪಾರಿಜಾತ ಎಲೆಯಿಂದ ರೋಗವನ್ನು ಗುಣಮಾಡಲಾಗುತ್ತದೆಂದು ಸಂಶೋಧಿಸಲಾಗಿಲ್ಲ. ನಿಪಾಹ್ ವೈರಸ್ ಗೆ ಔಷಧಿಯೂ ಇಲ್ಲ ಎನ್ನುತ್ತಾರೆ ತಜ್ಞರು.
ಈ ಹಿಂದೆ ಡೆಂಗೆ ಜ್ವರ ಬಂದಾಗ ಪಪ್ಪಾಯಿ ಎಲೆಗೆ ಎಲ್ಲಿಲ್ಲದ ಡಿಮಾಂಡ್ ಬಂದಿತ್ತು. ಆದರೆ ಪಪ್ಪಾಯಿ ಎಲೆಯೂ ಡೆಂಗೆಯನ್ನು ಸಂಪೂರ್ಣವಾಗಿ ವಾಸಿ ಮಾಡಬಲ್ಲದು ಎಂಬುದನ್ನು ಆಯುರ್ವೇದ ತಜ್ಞರು ಒಪ್ಪುವುದಿಲ್ಲ.
ಇದರಲ್ಲಿ ವಿಟಮಿನ್ ಕೆ. ಇರುವುದರಿಂದ ಡೆಂಗೆಯಿಂದ ಸಂಭವಿಸಬಹುದಾದ ರಕ್ತಸ್ರಾವ ಹಾಗೂ ಇನ್ನಿತರ ಅಡ್ಡ ಪರಿಣಾಮಗಳನ್ನು ತಡೆಯಬಲ್ಲದು ಅಷ್ಟೇ.
ಆಯುರ್ವೇದದಲ್ಲಿ ನಿಪಾಹ್ ವೈರಸ್ಗೆ ಇಂಥದ್ದೇ ಎಂಬ ಸರಿಯಾದ ಔಷಧಗಳಿಲ್ಲ. ಹಾಗಾಗಿ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ಜ್ವರ, ನೆಗಡಿ, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಅದರದ್ದೇ ಆದ ಔಷಧಗಳನ್ನು ನೀಡಿ ರೋಗ ಗುಣಪಡಿಸಬಹುದಷ್ಟೇ.
ವೈರಾಣು ಜ್ವರ ವಾಸಿಯಾಗಬೇಕೆಂದರೆ ಮೊದಲು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ವೈರಾಣು ತಂತಾನೆ ಕಡಿಮೆಯಾಗುತ್ತದೆ. ಎಂಟರಿಂದ ಹತ್ತು ದಿನಗಳಲ್ಲಿ ಜ್ವರ ವಾಸಿಯಾಗುತ್ತದೆ ಎಂಬುದು ಅವರ ಅಭಿಮತ.
ಪಾರಿಜಾತ ಎಲೆ ಅಷ್ಟೆ ಅಲ್ಲ, ಅಮೃತಬಳ್ಳಿ, ನೆಲ ನೆಲ್ಲಿ, ಸುದರ್ಶನ ಮೊದಲಾದ ಔಷಧೀಯ ಸಸ್ಯಗಳು ಮನುಷ್ಯದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಪಾರಿಜಾತ ಎಲೆಯ ಕಷಾಯ ಸೇವನೆ ಈಗಾಗಲೇ ರೂಢಿಯಲ್ಲಿರುವ ಚಿಕಿತ್ಸಾ ವಿಧಾನವಾಗಿದೆ.
ಅದು ಈಗ ವೈರಲ್ ಆಗಿರುವುದಕ್ಕೆ ಕಾರಣ ಏನೆಂಬುದು ತಮಗೆ ಗೊತ್ತಿಲ್ಲ ಎನ್ನುತ್ತಾರೆ ಆಯುರ್ವೇದ ವೈದ್ಯರು.
ಪಾರಿಜಾತ ಎಲೆಯಲ್ಲಿ ಔಷಧೀಯ ಗುಣವಿರುವುದು ಸತ್ಯ. ಇದು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು. ಒಂದು ಹಿಡಿಯಷ್ಟು ಪಾರಿಜಾತ ಎಲೆಗಳನ್ನು ಕತ್ತರಿಸಿ ಮೂರು ಲೋಟ ನೀರಿನಲ್ಲಿ ಕುದಿಸಿ, ಅದು ಒಂದು ಗ್ಲಾಸ್ ಆಗುವ ಸಮಯದಲ್ಲಿ ಬಸಿದು ಕುಡಿದರೆ ಕೀಲುಗಳ ನೋವು ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಆದರೆ ಮೈಸೂರು ಭಾಗದಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವ ಸಂದೇಶ ನೋಡಿ ಪಾರಿಜಾತ ಮರವಿರುವವರ ಮನೆಗೆ ತೆರಳಿ ಎಲೆಯನ್ನು ಸಂಗ್ರಹಿಸುತ್ತಿದ್ದಾರೆ. ಇನ್ನಾದರೂ ನಮ್ಮ ಜನರು ಸುಳ್ಳು ಸಂದೇಶಗಳನ್ನು ರವಾನಿಸುವ ಮುಂಚೆ ಒಮ್ಮೆ ಯೋಚಿಸುವುದು ಒಳಿತು.