ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ!
ಮೈಸೂರು, ಜನವರಿ 17: "ಏಪ್ರಿಲ್ ಬಳಿಕ ಯಡಿಯೂರಪ್ಪ ನನ್ನು ತೆಗೆಯುತ್ತಾರೆ. ನನಗೆ ಆರ್. ಎಸ್. ಎಸ್ ಮೂಲಗಳಿಂದ ಮಾಹಿತಿ ಇದೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಬಗ್ಗೆ ಅವರು ಪುನರುಚ್ಚಾರ ಮಾಡಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಮಾತನಾಡಿದರು. "ಯಡಿಯೂರಪ್ಪ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಇನ್ನೇನು ಬಂದು ತೆಗೆಯುತ್ತೇನೆ ಎಂದು ಹೇಳುವುದಕ್ಕೆ ಆಗುತ್ತದೆಯೇ?" ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಎದುರು ಮಣಿದ ಹೈಕಮಾಂಡ್: ನಾಯಕತ್ವ ಬದಲಾವಣೆ ಇಲ್ಲ!
"ಯಾವುದೇ ಪಾರ್ಟಿಯ ಹೈಕಮಾಂಡ್ ಆದರೂ ತೆಗೆಯುತ್ತೇನೆಂದು ಹೇಳುವುದಿಲ್ಲ. ಹಾಗೆ ಹೇಳಿದರೆ ಸರ್ಕಾರ ನಡೆಯುತ್ತಾ?, ಕೆಲಸ ಮಾಡೋದಕ್ಕೆ ಆಗುತ್ತದೆಯೇ?" ಎಂದು ಸಿದ್ದರಾಮಯ್ಯ ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಸಿಎಂ
"ನನಗಿರುವ ಮಾಹಿತಿಯೇ ಬೇರೆ. ನನಗೆ ಆರ್. ಎಸ್. ಎಸ್ ಮೂಲಗಳಿಂದ ಮಾಹಿತಿ ಇದೆ. ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ಆದ ಮೇಲೆ ತೆಗೆಯುತ್ತಾರೆ" ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಎಸ್ವೈ ಸಂಪುಟ ವಿಸ್ತರಣೆ: ಪ್ರಾತಿನಿಧ್ಯವೇ ಇಲ್ಲದಂತಾದ 12 ಜಿಲ್ಲೆಗಳು
ಸಿಡಿ ಬಹಿರಂಗವಾಗಲಿ; ಸಿದ್ದರಾಮಯ್ಯ
ಸಿಎಂ ವಿರುದ್ಧ ಸಿಡಿ ಬ್ಲಾಕ್ ಮೇಲ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಯಡಿಯೂರಪ್ಪ ಈ ವಯಸ್ಸಲ್ಲಿ ಏನೇನ್ ಮಾಡಿದ್ದಾನೋ ಯಾರಿಗ್ ಗೊತ್ತು?. ಅದು ಅಸಯ್ಯವಾಗಿ ಬೇರೆ ಇದೆಯಂತಲ್ಲಪ್ಪ. ಈ ಬಗ್ಗೆ ತನಿಖೆಯಾಗಬೇಕು, ಸಿಡಿಲಿ ಇರುವುದು ಬಹಿರಂಗವಾಗಬೇಕು. ಎಲ್ಲವೂ ಗೊತ್ತಾಗಬೇಕು ಅಂದರೆ ತನಿಖೆಯಾಗಬೇಕು" ಎಂದರು.
ಸರ್ಕಾರ ಇಲ್ಲ ಅಂತ ಆಯ್ತಲ್ಲ
"ಸಿದ್ದರಾಮಯ್ಯ ಬೆಂಬಲಿಗರಿಂದ ಸರ್ಕಾರ ನಡೆಯುತ್ತಿದೆ" ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಯತ್ನಾಳ್ ಅವರು ಆಡಳಿತ ಪಕ್ಷದ ಶಾಸಕರು. ವಿರೋಧಪಕ್ಷದವರು ಸರ್ಕಾರ ನಡೆಸುತ್ತಾರೆ ಅಂತ ಹೇಳಿಕೆ ಕೊಟ್ಟ ಮೇಲೆ ಸರ್ಕಾರ ಇಲ್ಲ ಅಂತ ಆಯ್ತಲ್ಲ. ಯಡಿಯೂರಪ್ಪ ನಾಮಕಾವಸ್ಥೆ ಸಿಎಂ ಎಂದು ಆಯ್ತಲ್ವಾ?" ಎಂದರು.
9 ಕೋಟಿ ಹಣ ಎಲ್ಲಿಂದ ಬಂತು
"ಯಡಿಯೂರಪ್ಪ ಅವರ ಸಂಪುಟದ ಸಚಿವರೆ 9 ಕೋಟಿ ಖರ್ಚು ಮಾಡಿದ್ದಾರೆ ಅಂತ ಹೇಳಿದ್ದಾರೆ. ಯೋಗೇಶ್ವರ್ಗೆ ದುಡ್ಡು ಎಲ್ಲಿಂದ ತಂದರು, ಯಾರ ಬಳಿ ಸಾಲ ಮಾಡಿದರು. ಯಾರು, ಯಾರಿಗೆ ಖರ್ಚು ಮಾಡಿದರು? ಎಂದು ತನಿಖೆಯಾಗಲಿ" ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಒಟ್ಟಿಗೆ ಚುನಾವಣೆ ನಡೆಸಿದ್ದರು
ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಭೇಟಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಶರತ್ ಸೇರಿ ಚುನಾವಣೆ ನಡೆಸಿದ್ದರು. ಹೋಸಕೋಟೆ ಕ್ಷೇತ್ರದಲ್ಲಿ ಶೇ 70 ರಷ್ಟು ಬೆಂಬಲಿತರು ಗೆದ್ದಿದ್ದಾರೆ. ಈ ಹಿನ್ನಲೆಯಲ್ಲಿ ಧನ್ಯವಾದ ಹೇಳುವುದಕ್ಕೆ ಬಂದಿದ್ದರು. ಅವರು ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆಯುತ್ತಿದೆ" ಎಂದರು.