ಅಬ್ಬರದ ಪ್ರಚಾರಕ್ಕೆ ತೆರೆ:ಮತದಾರರ ಮನ ಗೆಲ್ಲಲು ಕೊನೆ ಕ್ಷಣದ ಕಸರತ್ತು
ಮೈಸೂರು, ಏಪ್ರಿಲ್ 17:ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಏ.16) ತೆರೆ ಬಿದ್ದಿದ್ದು, ಅಭ್ಯರ್ಥಿಗಳು ಕಾರ್ಯಕರ್ತರು ಹಾಗೂ ಬೆಂಬಲಿಗರ ಪಡೆ ಕಟ್ಟಿಕೊಂಡು ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ಮತದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ. ಶತಾಯಗತಾಯ ಮತದಾರರ ಮನ ಗೆಲ್ಲುವ ಹಟಕ್ಕೆ ಬಿದ್ದಿರುವ ನಾಯಕರು ತೆರೆಮರೆಯಲ್ಲೇ ಹಲವು ಆಮಿಷವೊಡ್ಡಲಾರಂಭಿಸಿದ್ದಾರೆ.
ಕರ್ನಾಟಕದ 14 ಕ್ಷೇತ್ರಗಳಿಗೆ ಬಹಿರಂಗ ಪ್ರಚಾರಕ್ಕೆ ತೆರೆ
ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರದ ಕರಪತ್ರ ಹಂಚಿ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ. ಬಡಾವಣೆಗಳಲ್ಲಿ ಕಾರ್ಯಕರ್ತರ ದೊಡ್ಡ ದಂಡೇ ಕಂಡುಬರುತ್ತಿದೆ. ಸಮಯ ಲೆಕ್ಕಿಸದೆ ತಡರಾತ್ರಿವರೆಗೂ ಪ್ರಚಾರ ಮಾಡಲಾರಂಭಿಸಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಹಿರಿಯ ರಾಜಕೀಯ ಮುಖಂಡರ ಪೈಕಿ ಕ್ಷೇತ್ರದ ಮತದಾರರಲ್ಲದವರು ಜಿಲ್ಲೆಯಿಂದ ಸಂಜೆ ಹೊರ ಹೋದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಪ್ರವಾಸಿ ಮಂದಿರ, ಹೋಟೆಲ್, ವಸತಿ ಗೃಹ, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಪೊಲೀಸರು ತಪಾಸಣೆ ಮಾಡಲಾರಂಭಿಸಿದ್ದಾರೆ. ಮಾದರಿ ನೀತಿಸಂಹಿತೆ ತಂಡದ ಹಾಗೂ ಚುನಾವಣಾಧಿಕಾರಿಗಳ ಗಸ್ತು ಹೆಚ್ಚಿಸಲಾಗಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಇತ್ತ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಡಳಿತವು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಹಾಗೂ ಅಂತರರಾಜ್ಯ ಗಡಿಯಲ್ಲಿನ ತನಿಖಾ ಠಾಣೆ (ಚೆಕ್ ಪೋಸ್ಟ್) ಕಟ್ಟೆಚ್ಚರ ವಹಿಸಲಾಗಿದೆ. ಚೆಕ್ಪೋಸ್ಟ್ಗಳಿಗೆ ನಿಯೋಜನೆಗೊಂಡಿರುವ ಕಂದಾಯ, ಅಬಕಾರಿ ಮತ್ತು ಪೊಲೀಸ್ ಸಿಬ್ಬಂದಿಯು ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ.
14 ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ, ಏಪ್ರಿಲ್ 18ರಂದು ಮತದಾನ
ಮುಖ್ಯವಾಗಿ ನಾಲ್ಕು ಚಕ್ರದ ವಾಹನಗಳ ನೋಂದಣಿ ಸಂಖ್ಯೆ, ವಾಹನದಲ್ಲಿ ಪ್ರಯಾಣಿಸುವವರ ವೈಯಕ್ತಿಕ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಅಂತರ ರಾಜ್ಯ ನೋಂದಣಿ ಸಂಖ್ಯೆಯುಳ್ಳ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ.
ಧ್ವನಿವರ್ಧಕ ಬಳಸಬಾರದು
ಬಹಿರಂಗ ಪ್ರಚಾರದ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾವೇಶ, ಮೆರವಣಿಗೆ ನಡೆಸದಂತೆ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಆದೇಶ ಹೊರಡಿಸಿದ್ದಾರೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಸೆಕ್ಷನ್ 144ರ ಪ್ರಕಾರ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಗುಂಪಾಗಿ ಮತ ಯಾಚಿಸುವಂತಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 126ಎ ಅನ್ವಯ ಟಿ.ವಿ. ರೇಡಿಯೊ, ಮಾಧ್ಯಮದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಜಾಹೀರಾತು ನೀಡುವಂತಿಲ್ಲ. ಧ್ವನಿವರ್ಧಕ ಬಳಸಿ ಪ್ರಚಾರ ಮಾಡಬಾರದೆಂದು ಆದೇಶಿಸಿದ್ದಾರೆ.
ಮತಗಟ್ಟೆಯತ್ತ ಚುನಾವಣಾ ಸಿಬ್ಬಂದಿಗಳು
ಮತಗಟ್ಟೆಗೆ ಅನುಗುಣವಾದ ವಿದ್ಯುನ್ಮಾನ ಮತಯಂತ್ರ, ಮತಖಾತರಿ ಯಂತ್ರಗಳನ್ನು ತಾಲೂಕು ಕೇಂದ್ರಗಳ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ನಿಗದಿಪಡಿಸಿದ ಮಸ್ಟರಿಂಗ್ ಕ್ಷೇತ್ರಗಳಿಂದ ಚುನಾವಣಾ ಸಿಬ್ಬಂದಿ ಇಂದು ಮತಗಟ್ಟೆಯತ್ತ ಹೊರಡಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 2,187 ಮತಗಟ್ಟೆಗಳಿವೆ. 2,406 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,406 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 4,812 ಮತದಾನ ಅಧಿಕಾರಿಗಳನ್ನು ಚುನಾವಣಾ ಪ್ರಕ್ರಿಯೆಗೆ ನೇಮಕ ಮಾಡಲಾಗಿದೆ. 5,084 ಬ್ಯಾಲೆಟ್ ಯೂನಿಟ್, 2,671 ಕಂಟ್ರೋಲ್ ಯೂನಿಟ್ ಹಾಗೂ 2,717 ವಿವಿ ಪ್ಯಾಟ್ ಗಳನ್ನು ಬಳಸುತ್ತಿದ್ದು, ಬಿಇಎಲ್ ಸಂಸ್ಥೆಯ ಇಂಜಿನಿಯರ್ ಗಳಿಂದ ಯಂತ್ರಗಳನ್ನು ಪರಿಶೀಲಿಸಿದ್ದಾರೆ.
ಅಗತ್ಯ ಸಲಕರಣೆಗಳ ವ್ಯವಸ್ಥೆ
ಮತಗಟ್ಟೆಗೆ ಅಧಿಕಾರಿಗಳು, ಸಿಬ್ಬಂದಿಗಳನ್ನು ಕರೆದೊಯ್ಯಲು 405 ಕೆಎಸ್ ಆರ್ಟಿಸಿ ಬಸ್ಸುಗಳು, 114 ಜೀಪುಗಳು ಹಾಗೂ 95 ಮಿನಿ ಬಸ್ಗಳನ್ನು ಬಳಸಲಾಗುತ್ತಿದೆ. ಸಿಬ್ಬಂದಿ ವಾಸ್ತವ್ಯ ಹೂಡಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮತಗಟ್ಟೆಯಲ್ಲಿ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಪೀಠೋಪಕರಣಗಳನ್ನು ಒದಗಿಸಲಾಗಿದೆ. ಅಂಗವಿಕಲರು, ವೃದ್ಧರನ್ನು ಮತಗಟ್ಟೆಗೆ ಕರೆತರಲು ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ.
ಎರಡು ಹಂತಗಳಲ್ಲಿ ತರಬೇತಿ
ಗುರುವಾರ (ಏ.17) ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಭಾವಚಿತ್ರವಿರುವ ಚೀಟಿಗಳನ್ನು ಮನೆಗೆ ತಲುಪಿಸುತ್ತಿದ್ದಾರೆ. ಮತ ಚಲಾಯಿಸಲು ಈ ಚೀಟಿಯ ಅಗತ್ಯವಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ವಿಚಕ್ಷಣಾ ದಳ, ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಸಿಬ್ಬಂದಿಗಳಿಗೆ ಈ ಬಾರಿ ಚುನಾವಣಾ ಭತ್ಯೆಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ.