ಕೆ.ಆರ್.ನಗರ ವ್ಯಾಪ್ತಿಯಲ್ಲಿ ಸಿಕ್ಕಿವೆ ಶಿಲಾಯುಗದ ದೊಡ್ಡ ನಿಲಸುಕಲ್ಲುಗಳು
ಮೈಸೂರು, ಮಾರ್ಚ್ 3: ಕೆ.ಆರ್.ನಗರ ತಾಲ್ಲೂಕಿನ ಮಿರ್ ಲೇ ಮತ್ತು ಚುಂಚನಕಟ್ಟೆ ಹೋಬಳಿಗಳ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ ಕಾವೇರಿ ನದಿ ತೀರದ ಭೂ ಭಾಗಗಳಲ್ಲಿ ಶಿಲಾಯುಗ ಸಂಸ್ಕೃತಿ ಜನ ಸಮುದಾಯದ ಸಮಾಧಿಗಳ ನಮೂನೆಗಳಲ್ಲಿ ಒಂದಾದ ಬೃಹತ್ ನಿಲಸುಕಲ್ಲುಗಳು ಪತ್ತೆಯಾಗಿವೆ.
ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಎಸ್.ಜಿ,ರಾಮದಾಸರೆಡ್ಡಿ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಂ.ಕೆ.ಮೃತ್ಯುಂಜಯ, ಉಪನ್ಯಾಸಕರಾದ ಚರಣ್ ಕುಮಾರ್ ಹಾಗೂ ಸ್ಥಳೀಯರಾದ ಮೈಮುಲ್ ನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಎ.ಟಿ.ಸೋಮಶೇಖರ್ ಅವರ ಸಹಕಾರದೊಂದಿಗೆ ನಿಲಸುಕಲ್ಲುಗಳ ಪತ್ತೆ ಕಾರ್ಯವನ್ನು ನಡೆಸಲಾಗಿದ್ದು, ಈ ವೇಳೆ ಬೈಲಾಪುರದಲ್ಲಿ 6, ಅಂಕನಹಳ್ಳಿ ಗ್ರಾಮದಲ್ಲಿ 6, ಮಾಳನಾಯಕನಹಳ್ಳಿಯಲ್ಲಿ 1 ಹೀಗೆ ಒಟ್ಟು 13 ನಿಲಸುಕಲ್ಲುಗಳು ದೊರೆತಿವೆ.
ಶಿವಮೊಗ್ಗದಲ್ಲಿ ಪತ್ತೆಯಾಯ್ತು ಇತಿಹಾಸದ ಕಥೆ ಹೇಳುವ ಮಹಿಳಾ ನಿಷಿಧಿ ಶಾಸನ
ವಿವಿಧೆಡೆ ದೊರೆತ 13 ನಿಲಸುಕಲ್ಲುಗಳು
ಶಿಲಾಯುಗ ಸಂಸ್ಕೃತಿಯ ಜನರು ಭೂ ಮಟ್ಟದಿಂದ ನೇರವಾಗಿ, ಓರೆಯಾಗಿ ಎತ್ತರವಾದ ಹೆಬ್ಬಂಡೆಗಳನ್ನು ನೆಟ್ಟು ನಿಲಸುಕಲ್ಲುಗಳನ್ನು ನಿರ್ಮಿಸುತ್ತಿದ್ದರು. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ನಡುಕಲ್ ಮತ್ತು ಪಾಂಡುಕ್ಕಲ್ ಅಥವಾ ಪಾಂಡಿಲ್ ವ್ಯಾಸನ ಟೋಲು ಕಲ್ಲು, ಕೊಡುಕಲ್ಲು, ಥೋಡಕೇನಕಲ್ಲು, ಹನುಮಂತಕಲ್ಲು ಇತರ ಹೆಸರುಗಳಿಂದ ಸಮಾಧಿಗಳ ನಿಲಸುಕಲ್ಲುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಕರೆಯಲಾಗುತ್ತಿದೆ.
ಇದೀಗ ದೊರೆತಿರುವ 13 ನಿಲಸುಕಲ್ಲುಗಳನ್ನು ಸ್ಥಳೀಯರು ಕೊಡಗಲ್ಲು, ಮುನೇಶ್ಪರನಕಲ್ಲು ಎಂದು ಕರೆಯುತ್ತಿದ್ದಾರೆ. ಈ ನಿಲಸುಕಲ್ಲುಗಳನ್ನು ಭೂಮಟ್ಟದಿಂದ ನೇರವಾಗಿ, ಓರೆಯಾಗಿ ಎತ್ತರವಾದ ಹೆಬ್ಬಂಡೆಗಳನ್ನು ಬಳಸಿ ನಿರ್ಮಿಸಲಾಗಿದೆ. ಒಂದೊಂದು ನಿಲಸುಕಲ್ಲು ಸುಮಾರು 10 ರಿಂದ 20 ಟನ್ನು ತೂಕವಿರುವ ಹೆಬ್ಬಂಡೆಗಳಾಗಿವೆ. ಸ್ಥಳೀಯವಾಗಿ ಇರುವ ಬೈಲಾಪುರ ಕುರುಚಲು ಗುಡ್ಡದಲ್ಲಿ ಈ ಹೆಬ್ಬಂಡೆಗಳನ್ನು ಕತ್ತರಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಮುನೇಶ್ವರನ ಕಲ್ಲು ಎಂದು ಕರೆಯುವ ಸ್ಥಳೀಯರು
ಮಿರ್ ಲೇ ಹೋಬಳಿಯ ಅಂಕನಹಳ್ಳಿ ಗ್ರಾಮದ ಹೊರ ಭಾಗದಲ್ಲಿ 4, ಗ್ರಾಮ ಮಧ್ಯದಲ್ಲಿ 2 ಇದ್ದು, ಈ ಪೈಕಿ ಒಂದನೆಯ ನಿಲಸುಕಲ್ಲು 12 ಅಡಿ ಎತ್ತರ, 24 ಅಡಿ ಸುತ್ತಳತೆ ಹೊಂದಿದ್ದರೆ, ಎರಡನೆಯದು 9 ಅಡಿ ಎತ್ತರ, 20 ಅಡಿ ಸುತ್ತಳತೆ, ಮೂರನೆಯದು 6.5 ಅಡಿ ಎತ್ತರವಿದೆ. ಮೇಲ್ಭಾಗ ಮುರಿದಿದೆ. (ಈ ಹಿಂದೆ ಕೃಷಿಕರು ವ್ಯವಸಾಯಕ್ಕೆ ಅಡ್ಡಿಯಾಗುತ್ತವೆಯೆಂದು ಕತ್ತರಿಸಿ ತೆಗೆದು ಹಾಕಿರಬಹುದೆಂದು ಜಮೀನಿನ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.) ನಾಲ್ಕನೆಯದು ಊರಿನ ಮಧ್ಯದಲ್ಲಿ ರಸ್ತೆ ಅಗಲ ಮಾಡಲು 10 ಅಡಿ ಎತ್ತರ, 20 ಅಡಿ ಸುತ್ತಳತೆ ಇರುವ ಎರಡು ನಿಲಸುಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಒಂದನ್ನು ರಸ್ತೆಯ ಪಕ್ಕದಲ್ಲಿ ಕಿತ್ತು ಮಲಗಿಸಿದ್ದರೆ, ಇನ್ನೊಂದನ್ನು ಚರಂಡಿ ಪಕ್ಕಕ್ಕೆ ಹಾಕಿ ಮುಚ್ಚಿದ್ದಾರೆ. ಇವುಗಳನ್ನು ಸ್ಥಳೀಯರು ಮುನೇಶ್ಪರನಕಲ್ಲು ಎಂದು ಕರೆಯುವುದನ್ನು ಕಾಣಬಹುದಾಗಿದೆ.
ಊರಿನಲ್ಲಿ ವರ್ಷಕ್ಕೊಮ್ಮೆ ಹಬ್ಬ, ಕಲ್ಲುಗಳಿಗೆ ಪೂಜೆ
ಇದೇ ಹೋಬಳಿಯ ಮಾಳನಾಯಕನಹಳ್ಳಿ ಗ್ರಾಮದಲ್ಲಿ ವಿಶೇಷವಾದ, ಮೇಲ್ಭಾಗದಲ್ಲಿ ದೊಡ್ಡ ಕುಳಿಯಿರುವ ನಿಲಸುಕಲ್ಲು ಇದೆ. ಚುಂಚನಕಟ್ಟೆ ಹೋಬಳಿಯ ಬೈಲಾಪುರದ ಹಾಳೂರು ಎಂಬ ನೆಲೆಯಲ್ಲಿ 6 ನಿಲಸುಕಲ್ಲುಗಳಿವೆ. ಇವುಗಳೆಲ್ಲವೂ ವಿವಿಧ ಅಳತೆಗಳನ್ನು ಹೊಂದಿವೆ. ಈ ಎಲ್ಲ ನಿಲಸುಕಲ್ಲುಗಳು ಸಾಲಾಗಿದ್ದು, ಬಹುತೇಕ ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ. ಕಲ್ಲಿನ ಕೆಳಭಾಗ ವಿಶಾಲವಾಗಿದ್ದು, ಮೇಲೆ ಹೋಗುತ್ತಾ ಚಿಕ್ಕದಾಗಿ ಕೊಡುಗಲ್ಲಿನಂತೆ ಭಾಸವಾಗುತ್ತದೆ. ಕೆಲವು ಕೆಳಭಾಗದಿಂದ ಮೇಲ್ಭಾಗದವರೆಗೆ ಒಂದೇ ರೀತಿ ಇವೆ. ಈ ಎಲ್ಲಾ ಕಲ್ಲುಗಳನ್ನು ಒಂದೊಂದು ಊರಿನಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಿದ್ದಾರೆ. ಪ್ರತಿ ಊರಿನಲ್ಲಿಯೂ ವರ್ಷಕ್ಕೊಮ್ಮೆ ಹಬ್ಬವನ್ನು ಆಚರಿಸಲಾಗುತ್ತಿದೆ. ಜತೆಗೆ ನಿತ್ಯಪೂಜೆ ಮಾಡುತ್ತಿದ್ದಾರೆ. ಇವನ್ನು ಆದಿಕಬ್ಬಿಣ ಶಿಲಾಯುಗದ ಬೃಹತ್ ಶಿಲಾಯುಗ ಸಂಸ್ಕೃತಿ ಜನ ಸಮುದಾಯದ ಸಮಾಧಿಯ ಗುರುತೆಂದು ಕೇರಳದಲ್ಲಿ ನಡೆಸಲಾದ ಉತ್ಖನನಗಳಿಂದ ಖಚಿತ ಪಟ್ಟಿದೆ. ಇಂತಹ ನಿಲಸುಕಲ್ಲುಗಳು ಸುಮಾರು 3000 ವರ್ಷಗಳ ಹಿಂದಿನವುಗಳಾಗಿರಬಹುದೆಂದು ಹೇಳಲಾಗಿದೆ.
ಕರ್ನಾಟಕದಲ್ಲೇ ಅಪರೂಪದ ಸಮಾಧಿ
"ಕೆ.ಆರ್.ನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನನ್ನ ಕ್ಷೇತ್ರ ಕಾರ್ಯದಲ್ಲಿ ಇಲ್ಲಿಯವರೆಗೆ ದೊರಕಿರುವ 30 ನಿಲಸುಕಲ್ಲುಗಳು ಸುಸ್ಥಿತಿಯಲ್ಲಿವೆ. ಈ ನಿಲಸುಕಲ್ಲುಗಳ ಬಗ್ಗೆ ಕರ್ನಾಟಕದ ಬೇರೆಲ್ಲೂ ಶೋಧನೆ ನಡೆದಿಲ್ಲ ಎನ್ನಬಹುದು. ಕೆ.ಆರ್.ನಗರ ತಾಲ್ಲೂಕಿನಲ್ಲಿ ದೊರಕಿರುವ ನಿಲಸುಕಲ್ಲು ಸಮಾಧಿಗಳು ಮೊದಲ ಶೋಧವಾಗಿದ್ದು ಕೇರಳ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ಮಧ್ಯೆ ಕೊಂಡಿ ಬೆಳೆಸಿದಂತಾಗಿದೆ ಹಾಗೂ ಜಿಲ್ಲೆಯಲ್ಲಿ ದೊರಕಿರುವ ಇಪ್ಪತ್ತೆರಡು ಅಡಿ ಎತ್ತರದ ನಿಲಸುಕಲ್ಲು ಸಮಾಧಿ ಕರ್ನಾಟಕದಲ್ಲೇ ಅಪರೂಪದ ಸಮಾಧಿ ಕಲ್ಲಾಗಿದೆ. ಇಷ್ಟು ದೊಡ್ಡಮಟ್ಟದ ನಿಲಸುಕಲ್ಲುಗಳು ಒಂದೇ ತಾಲ್ಲೂಕಿನಲ್ಲಿ ಶೋಧವಾಗುತ್ತಿರುವುದು ಕರ್ನಾಟಕದಲ್ಲಿ ಇದೇ ಪ್ರಥಮವಾಗಿದ್ದು, ಇವುಗಳನ್ನು ರಕ್ಷಿಸುವ ಕಾರ್ಯವೂ ಅಗತ್ಯವಾಗಿ ಆಗಬೇಕಾಗಿದೆ. ಆ ಮೂಲಕ ಮುಂದಿನ ಪೀಳಿಗೆಗೆ ಗತ ಇತಿಹಾಸವನ್ನು ಸಾರುವ ಕಾರ್ಯಕ್ಕೆ ಮುಂದಾಗುವ ಅಗತ್ಯವಿದೆ.