ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಮದ್ಯದ ಹೊಳೆ
ಮಂಡ್ಯ, ನವೆಂಬರ್ 29: ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಮದ್ಯದ ಹೊಳೆಯೇ ಹರಿಯುತ್ತಿದೆ ಎಂಬುದು ಇದುವರೆಗೆ ವಶಪಡಿಸಿಕೊಳ್ಳಲಾದ ಮದ್ಯ ಮತ್ತು ಬಂಧಿಸಲಾದ ಆರೋಪಿಗಳ ಸಂಖ್ಯೆಯನ್ನು ಗಮನಿಸಿದರೆ ಅರ್ಥವಾಗಿ ಬಿಡುತ್ತದೆ.
ಈ ಕುರಿತಂತೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾಹಿತಿ ನೀಡಿ, ಕೆ.ಆರ್. ಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಮಾರಾಟ, ಸಾಗಾಣಿಕೆ ಮಾಡುತ್ತಿದ್ದ ಮದ್ಯ ಸೇರಿದಂತೆ 14.43 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 153 ಮಂದಿಯನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
394 ದಾಳಿ, 153 ಮಂದಿ ಬಂಧನ
ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಮುಕ್ತ, ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಜಿಲ್ಲಾದ್ಯಂತ ಕಳೆದ ನ.11ರಿಂದ ಈವರೆಗೆ 394 ದಾಳಿಗಳನ್ನು ನಡೆಸಿ 153 ಮಂದಿಯನ್ನು ಬಂಧಿಸಿ, 1.79,559 ರೂ. ಮದ್ಯ, 12.55 ಲಕ್ಷ ಮೌಲ್ಯದ ವಾಹನಗಳು ಸೇರಿ 14,34, 559 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಸದರಿ ಪ್ರಕರಣಗಳ ಪೈಕಿ 23 ಘೋರ (ಹೆಚ್ಚಿನ ಮಟ್ಟದ ಮದ್ಯ ಸಂಗ್ರಹ, ಸಾಗಾಣಿಕೆ), 47 ಸಾಮಾನ್ಯ (ಷರತ್ತು ಉಲ್ಲಂಘನೆ), ಕಲಂ 15 (ಎ)ರನ್ವಯ (ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ) 146 ಪ್ರಕರಣಗಳನ್ನು ದಾಖಲಿಸಿದ್ದು, ಎಲ್ಲಾ ಪ್ರಕರಣಗಳಲ್ಲೂ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪಚುನಾವಣೆ: ಬೆಂಗಳೂರಿನಲ್ಲಿ 4 ದಿನ ಮದ್ಯಮಾರಾಟ ನಿಷೇಧ
ಕೆ.ಆರ್.ಪೇಟೆಯಲ್ಲಿ ಸುಮಾರು 69 ಪ್ರಕರಣ ದಾಖಲು
ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 169 ದಾಳಿಗಳನ್ನು ನಡೆಸಿ, 47 ಮಂದಿಯನ್ನು ಬಂಧಿಸಲಾಗಿದೆ. ಒಟ್ಟಾರೆ 182 ಲೀಟರ್ ಮದ್ಯ, 9,870 ಲೀಟರ್ ಬಿಯರ್, 6,000 ಲೀಟರ್ ಸೇಂದಿ, 5 ದ್ವಿಚಕ್ರ ವಾಹನಗಳು ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳುವ ಮೂಲಕ 69 ಪ್ರಕರಣಗಳನ್ನು ದಾಖಲಿಸಿಲಾಗಿದೆ ಎಂದು ಹೇಳಿದರು.
ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಘೋರ, 15 ಸಾಮಾನ್ಯ, ಕಲಂ 15 (ಎ) ರನ್ವಯ 44 ಸೇರಿದಂತೆ 69 ಪ್ರಕರಣಗಳನ್ನು ದಾಖಲಿಸಿದ್ದು, 58,739 ರೂ. ಮೌಲ್ಯದ ಅಬಕಾರಿ ವಸ್ತುಗಳು, 9.35 ಲಕ್ಷ ರೂ. ಮೌಲ್ಯದ ವಾಹನಗಳು, 9,93,739 ರೂ. ಮೌಲ್ಯದ ಮುದ್ದೇ ಮಾಲಿನ ಅಂದಾಜು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಹಿನ್ನಲೆಯಲ್ಲಿ ಅಕ್ರಮ ಮದ್ಯ, ಮದ್ಯಸಾರ, ಕಳ್ಳಭಟ್ಟಿ ಸಾರಾಯಿ, ಸೇಂದಿ ಇತ್ಯಾದಿ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ ಮತ್ತು ಮಾರಾಟ ಮುಂತಾದ ಅಬಕಾರಿ ಅಕ್ರಮ ಚಟುವಟಿಕೆಗಳು ಹಾಗೂ ಮದ್ಯದ ವಿತರಣೆ ಕಂಡು ಬಂದಲ್ಲಿ ಜಿಲ್ಲಾ, ಉಪ ವಿಭಾಗ, ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆದು ದೂರವಾಣಿ ಅಥವಾ ಸಂಬಂಧಿಸಿದ ನಿಯಂತ್ರಣಾಧಿಕಾರಿಗಳ ಮೊಬೈಲ್ಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಗೆ ಪೊಲೀಸರ ನಿಯೋಜನೆ
ಚುನಾವಣಾ ಕರ್ತವ್ಯದ ನಿಮಿತ್ತ ಅಬಕಾರಿ ಆಯುಕ್ತರ ಆದೇಶದ ಮೇರೆಗೆ ಬೆಂಗಳೂರು ಜಿಲ್ಲೆಯಿಂದ ಐದು ಮಂದಿ ಅಬಕಾರಿ ಉಪ ನಿರೀಕ್ಷಕರು ಮತ್ತು ರಾಮನಗರ ಜಿಲ್ಲೆಯಿಂದ 8 ಮಂದಿ ಅಬಕಾರಿ ರಕ್ಷಕರನ್ನು ಮಂಡ್ಯ ಜಿಲ್ಲೆಗೆ ನಿಯೋಜಿಸಲಾಗಿದೆ. 30 ಮಂದಿ ಗೃಹ ರಕ್ಷಕರನ್ನು ಇಲಾಖಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇವರೆಲ್ಲರೂ ತಂಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್ ಗಳು, ವೈನ್ಶಾಪ್ ಗಳಿಗೆ ಇಲಾಖೆ ನಿಗದಿಪಡಿಸಿರುವ ಸಮಯದಲ್ಲೇ ಮಾರಾಟ ಮಾಡಬೇಕು. ಅವಧಿಗಿಂತ ಹೆಚ್ಚಿನ ಸಮಯದಲ್ಲಿ ಮದ್ಯ ಮಾರಾಟ, ಸರಬರಾಜು ಮಾಡಿದಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಇಲಾಖೆ ನಿಗಾ ವಹಿಸಿದ್ದು, ಜಿಲ್ಲಾದ್ಯಂತ ಗಸ್ತು ನಡೆಯುತ್ತಿದೆ ಎಂದು ತಿಳಿಸಿದರು.
ಮದ್ದೂರಿನ ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ ಸಿಕ್ತು 52 ಲಕ್ಷ ರೂ
ಕಿರಾಣಿ ಅಂಗಡಿಗಳ ಮೇಲೆ ದಾಳಿ
ಸಾರ್ವಜನಿಕರು, ಸಂಘ-ಸಂಸ್ಥೆಗಳ ಮಾಹಿತಿ ಮೇರೆಗೆ ಜಿಲ್ಲಾದ್ಯಂತ ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದು, ಅಬಕಾರಿ ನಿಯಮ ಉಲ್ಲಂಘಿಸಿ, ಮದ್ಯ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಸ್ಥಳದಲ್ಲೇ ದಂಡ ವಸೂಲಿ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ. ಇದು ನಿರಂತರವಾಗಿ ನಡೆಯುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು. ವೈನ್ಶಾಪ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಪಬ್ ಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 262 ವಿವಿಧ ವರ್ಗಗಳ ಸನ್ನದುಗಳಿಗೆ ಪರವಾನಗಿ ನೀಡಲಾಗಿದೆ ಎಂದು ತಿಳಿಸಿದರು.