ಭೂ ಒತ್ತುವರಿ ಆರೋಪ: ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಹೋರಾಟ
ಮೈಸೂರು, ಜೂನ್ 17: "ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುವುದಾಗಿ,'' ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಶಾಸಕ ಸಾ.ರಾ ಮಹೇಶ್ ಹಾಗೂ ನನಗೂ ಒಂದು ರುಪಾಯಿ ವ್ಯವಹಾರವಿಲ್ಲ. ಅವರೊಂದಿಗೆ ಯಾವುದೇ ವ್ಯವಹಾರವನ್ನು ನಡೆಸಿಲ್ಲ. ಹೀಗಾಗಿ ನನ್ನ ಹೆಸರು ಪ್ರಸ್ತಾಪದ ಬಗ್ಗೆ ನನ್ನ ಆಪ್ತರ ಹಾಗೂ ಪಕ್ಷದ ಹಿರಿಯರ ಜೊತೆ ಮಾತುಕತೆ ನಡೆಸಿ ಬಳಿಕ ಕಾನೂನಿನ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇನೆ.''
ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ತಿದ್ದಿಕೊಳ್ಳಲಿ: ಮಾಜಿ ಸಚಿವ ಎ.ಮಂಜು
"ಲಿಂಗಾಂಬುದಿಪಾಳ್ಯದಲ್ಲಿ ನನ್ನದು 3 ಎಕರೆ ಜಮೀನಿದೆ, ಅದರಲ್ಲಿ ಯಾವುದೇ ಲೋಪವಿಲ್ಲ. ಅದು ನನ್ನ ತಂದೆಯ ಆಸ್ತಿಯಾಗಿದ್ದು, ನನ್ನ ಹೆಸರು ಪ್ರಸ್ತಾಪಿಸಿರುವ ಬಗ್ಗೆ ನೀವು ಅವರನ್ನೇ ಪ್ರಶ್ನಿಸುವುದು ಸೂಕ್ತ,'' ಎಂದು ರೋಹಿಣಿ ಸಿಂಧೂರಿ ಆಡಿಯೋದಲ್ಲಿ ಸಾ.ರಾ ಹಾಗೂ ರಾಜೀವ್ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
"ಅಲ್ಲದೇ, ನಾನು ಯಾವೊಂದು ತೀರ್ಮಾನವನ್ನೂ ಏಕಪಕ್ಷೀಯವಾಗಿ ತೆಗೆದುಕೊಂಡಿಲ್ಲ. ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಸೇರಿ 26 ಸದಸ್ಯರು ಮುಡಾದಲ್ಲಿ ಇದ್ದಾರೆ. ಕಾನೂನು ಉಲ್ಲಂಘಿಸಿ ಯಾವೊಂದು ಕೆಲಸವನ್ನೂ ಮಾಡಿಲ್ಲ. ಮಾಧ್ಯಮಗಳಲ್ಲೂ ಏನೇನೋ ಅಪಪ್ರಚಾರ ಆಗಿದೆ. ನಾನು ಜೀವಮಾನದಲ್ಲಿ ಅಧಿಕಾರ ದುರುಪಯೋಗ ಮಾಡಿಲ್ಲ,'' ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆರೋಪಕ್ಕೆ ಎಚ್.ವಿ. ರಾಜೀವ್ ತಿರುಗೇಟು ನೀಡಿದರು.
"10 ವರ್ಷಗಳಲ್ಲಿ ಹೇಗಿದ್ದವರು ಹೇಗಾಗಿದ್ದಾರೆ ಎಂಬ ರೋಹಿಣಿ ಸಿಂಧೂರಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜೀವ್, ನಾನು ಸರ್ಕಾರದ ಯಾವುದೇ ಒಂದು ಜಾಗವನ್ನು ಇಲ್ಲಿಯವರೆಗೆ ಖರೀದಿಸಿಲ್ಲ. ಸಾವಿರಾರು ಮನೆಗಳನ್ನು ನಿರ್ಮಿಸಿ ಸರ್ಕಾರದ ದರಕ್ಕಿಂತ ಕಡಿಮೆ ದರದಲ್ಲೇ ಜನರಿಗೆ ವಸತಿ ನೀಡಿರುವ ತೃಪ್ತಿ ನನಗಿದೆ. ಮೈಸೂರು ಹಸಿರೀಕರಣಕ್ಕೆ 75 ಲಕ್ಷ ಸ್ವಂತ ಹಣದಿಂದ ಗಿಡಗಳನ್ನು ನೆಡುವ ಕೆಲಸವಾಗುತ್ತಿದೆ. ಮೌಢ್ಯ, ಜಾತಿ ಧರ್ಮದ ಎಲ್ಲೇ ಮೀರಿ ಕೆಲಸ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕರೆಗೆ ನೂರಾರು ಅಭಿಯಾನ ಮಾಡಿದ್ದೇನೆ.''
Recommended Video
"ನನಗೇನು ಪ್ರಚಾರದ ಹುಚ್ಚೆನಿಲ್ಲ, ನನ್ನ ಎಲ್ಲ ವ್ಯವಹಾರಗಳು ಕಾನೂನಿನ ಮೂಲಕವೇ ನಡೆಯುತ್ತಿದೆ. ನನ್ನ ವ್ಯವಹಾರಗಳಿಗೆ ತೆರಿಗೆ ಕಟ್ಟುತ್ತಾ, ನನ್ನ ವ್ಯವಹಾರ ನಾನು ಮಾಡುತ್ತಿದ್ದೇನೆ. ಆದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳು ಬಂದಿದೆ. ಮೈಸೂರಿನ ಜನ ಯಾರೋ ಹೇಳಿದ್ದನ್ನು ನಂಬಿಕೊಳ್ಳುವ ಬದಲು ವಾಸ್ತವವಾಗಿ ನಾನೇನು ಕೆಲಸ ಮಾಡಿದ್ದೇನೆ ಅನ್ನುವುದನ್ನು ಗಮನಿಸಬೇಕು,'' ಎಂದರು.