ಮೈಸೂರಿನ ದೊಡ್ಡಾಸ್ಪತ್ರೆಯಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ
ಮೈಸೂರು, ಜೂನ್ 29: ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಭಾಗದ ದೊಡ್ಡಾಸ್ಪತ್ರೆ ಎಂದೇ ಹೆಸರಾಗಿರುವುದು ಮೈಸೂರಿನ ಕೆ.ಆರ್. ಆಸ್ಪತ್ರೆ. ಆದರೆ ಈ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರು ಹಾಗೂ ನರ್ಸ್ ಗಳ ಕೊರತೆ ಎದ್ದು ಕಾಣುತ್ತಿದೆ.
ಐಸಿಯು, ಎಕ್ಸ್ ರೇ, ವೆಂಟಿಲೇಟರ್, ಸ್ಕ್ಯಾನಿಂಗ್, ಲ್ಯಾಬ್ ಹಾಗೂ ಮತ್ತಿತರ ಕಡೆ ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸ್ಥಳಾಂತರ, ಊಟ ವಿತರಣೆ, ವಾರ್ಡ್ ಹಾಗೂ ಶೌಚಾಲಯಗಳ ಸ್ವಚ್ಛತೆಗೂ ಸಮಸ್ಯೆ ಕಂಡುಬರುತ್ತಿದೆ. ಅಕ್ಕ ಪಕ್ಕದ ನಾಲ್ಕು ಜಿಲ್ಲೆಯಿಂದಲೂ ದಿನಂಪತ್ರಿ ನೂರಾರು ರೋಗಿಗಳು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಬರುತ್ತಾರೆ. ಆದರೆ, ಚಿಕಿತ್ಸೆ ಪಡೆಯಲು, ತಪಾಸಣೆ ಮಾಡಿಸಿಕೊಳ್ಳಲು ಇಡೀ ದಿನ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಗಾಯಾಳು ಜೀವ ಉಳಿಸಿದ ಮೈಸೂರು ಪೊಲೀಸ್
ಎಂಸಿಐ ನಿಯಮಾವಳಿಗಳ ಪ್ರಕಾರ ಮೂರು ಆಸ್ಪತ್ರೆಗಳಿಂದ ಸೇರಿ 1,200 ಸಿಬ್ಬಂದಿ ಅಗತ್ಯವಿದೆ. ಸಿಬ್ಬಂದಿ ಭರ್ತಿಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಸದ್ಯ ಕೆ.ಆರ್.ಆಸ್ಪತ್ರೆಯಲ್ಲಿ 245 ಸಿಬ್ಬಂದಿ ಇದ್ದರು. ಇವರಲ್ಲಿ ಈಗಾಗಲೇ 65 ಮಂದಿ ನಿವೃತ್ತರಾಗಿದ್ದಾರೆ. ಆ ಸ್ಥಾನಗಳನ್ನು ಭರ್ತಿ ಮಾಡಿಲ್ಲ. ಮಕ್ಕಳ ಆಸ್ಪತ್ರೆ ಚೆಲುವಾಂಬ ಆಸ್ಪತ್ರೆಯಲ್ಲಿ 60 ಹಾಗೂ ಪಿಕೆಟಿ ಬಿ ಆಸ್ಪತ್ರೆಯಲ್ಲಿ 60 ಸಿಬ್ಬಂದಿ ಇದ್ದಾರೆ. ಇನ್ನು ಐಸಿಯುನಲ್ಲಿ ಶೇ 50ರಷ್ಟು ನರ್ಸ್ ಗಳ ಕೊರತೆಯಿದೆ. ಚೆಲುವಾಂಬ ಆಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಬೆಡ್ ಗಳ ಕೊರತೆ ಇದೆ. ಹೀಗಾಗಿ, ಹೆಚ್ಚು ರೋಗಿಗಳು ಬಂದಾಗ ನೆಲದ ಮೇಲೆ ಹಾಸಿಗೆ ಹಾಕಿ ಮಲಗಿಸಲಾಗುತ್ತದೆ. ಸ್ಥಳಾವಕಾಶದ ಕೊರತೆ ಎದುರಾಗಿದೆ.
ಯಾವ ಅಧಿಕಾರಿಗಳು, ಸಚಿವರು ಆಸ್ಪತ್ರೆಗೆ ಭೇಟಿ ನೀಡಿದರೂ ಸಮಸ್ಯೆ ಕೇಳಿಕೊಂಡು ಹೋಗುತ್ತಾರೆಯೇ ವಿನಃ ಸಿಬ್ಬಂದಿ ನೇಮಕವಾಗಿಲ್ಲ ಎಂಬುದು ರೋಗಿಗಳ ಅಳಲು.