ಚಾಲಕರಿಗೆ ನಿದ್ದೆ ಬಂದಾಗ ಎಚ್ಚರಿಸುತ್ತದೆ ಈ ಅಲಾರಾಂ ತಂತ್ರಜ್ಞಾನ
ಮೈಸೂರು, ಆಗಸ್ಟ್ 9 : ರಾತ್ರಿಯ ವೇಳೆ ಚಾಲಕರಿಗೆ ನಿದ್ರೆಯನ್ನು ತಪ್ಪಿಸಿ ಅಪಘಾತಕ್ಕೆ ಕಡಿವಾಣ ಹಾಕಲು ಕೆ ಎಸ್ ಆರ್ ಟಿ ಸಿ ಮುಂದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ಉಪಕರಣದ ತಂತ್ರಜ್ಞಾನ ನೀಡಲು ಚಿಂತನೆ ನಡೆಸಿದೆ.
ಭಾರಿ ಮಳೆ: ಪ್ರಯಾಣಿಕರ ಅನುಕೂಲಕ್ಕೆ ಕೆಎಸ್ಆರ್ಟಿಸಿ ಕ್ರಮ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಳವಡಿಸುವ ಮೂಲಕ ರಾತ್ರಿ ವೇಳೆ ದೂರದ ಸ್ಥಳಗಳಿಗೆ ಸಂಚರಿಸುವ ಚಾಲಕರು ನಿದ್ರೆಗೆ ಜಾರದಂತೆ ಎಚ್ಚರಿಸಿ ಆಗಬಹುದಾದ ಅಪಘಾತಗಳನ್ನು ತಪ್ಪಿಸಲು ಮುಂದಾಗಿದೆ.
ಬೆಂ-ಹೈದರಾಬಾದ್ ನಡುವೆ ಹೊಸ ಬಸ್ ಘೋಷಿಸಿದ ಕೆಎಸ್ಆರ್ಟಿಸಿ
ಈ ಕುರಿತು ಕೆ ಎಸ್ ಆರ್ ಟಿ ಸಿ ಟ್ರಾಫಿಕ್ ಮ್ಯಾನೇಜರ್ ರೆಡ್ಡಿ ಮಾಹಿತಿ ನೀಡಿ, ಕೆಲ ಖಾಸಗಿ ಕಂಪನಿಗಳು ನಮ್ಮಲ್ಲಿಗೆ ಬಂದು ಈ ಉಪಕರಣದ ಕಾರ್ಯನಿರ್ವಹಣೆ, ಅನುಕೂಲಗಳ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ನೀಡಿದ್ದಾರೆ. ಅದು ವಿದೇಶಿ ತಂತ್ರಜ್ಞಾನ ಆಧರಿಸಿದ ಉಪಕರಣವಾಗಿದ್ದು, ಬಸ್ಸಿನ ಮುಂಭಾಗದ ಬಂಪರ್ ಬಳಿ ಅಳವಡಿಸಿದಲ್ಲಿ ಮುಂದೆ ಬರುವ ವಾಹನ ಅಥವಾ ದೂರದ 50 ಮೀಟರ್ ಅಂತರದಲ್ಲಿರುವಾಗಲೇ ಅಲಾರಂ ಮೊಳಗಿಸಿ ಚಾಲಕನನ್ನು ಎಚ್ಚರಿಸಲು ಅನುಕೂಲ ಮಾಡಿಕೊಡಲಿದೆ. ಒಂದು ವೇಳೆ ಬಸ್ ಚಾಲಕ ನಿದ್ರೆಗೆ ಜಾರಿದರೆ, ಮೈಮುರಿದು ಆಕಳಿಸಿದರೂ ಸಹ ಈ ಅತ್ಯಾಧುನಿಕ ಸಾಧನ ಶಬ್ದ ಮಾಡಲಾರಂಭಿಸುತ್ತದೆ. ಕೂಡಲೇ ಚಾಲಕ ಎಚ್ಚೆತ್ತು ಸಂಭವಿಸಬಹುದಾದ ಅಪಘಾತ-ಅನಾಹುತಗಳನ್ನು ತಪ್ಪಿಸಬಹುದಾಗಿದೆ ಸದ್ಯ ಚರ್ಚೆಯ ಹಂತದಲ್ಲಿದೆ ಎಂದರು.
ದೇಶದಲ್ಲಿ ಉತ್ತರ ಪ್ರದೇಶ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಮಾತ್ರ ಈ ಹೊಸ ತಂತ್ರಜ್ಞಾನವನ್ನು ಬಸ್ಸುಗಳಿಗೆ ಅಳವಡಿಸಲು ಚಿಂತನೆ ನಡೆಸಿವೆ. ವಿದೇಶದಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಂಡು ಈ ಉಪಕರಣವನ್ನು ಸಿದ್ಧಪಡಿಸಲಾಗಿದ್ದು, ಬಸ್ಸಿನ ಮುಂಭಾಗದ ಹೆಡ್ ಲೈಟ್ ಬಂಪರ್ ನಲ್ಲಿ ಹಾಗೂ ಡ್ರೈವರ್ ಸೀಟ್ ಬಳಿ ಅಳವಡಿಸಬಹುದು.
ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು ಮುಂತಾದ ದೂರದ ನಗರಗಳು ಹಾಗೂ ಬೇರೆ ರಾಜ್ಯಗಳಿಗೆ ರಾತ್ರಿ ವೇಳೆ ಸಂಚರಿಸುವ ಬಸ್ಸುಗಳಿಗೆ ಈ ತಂತ್ರಜ್ಞಾನ ಅಳವಡಿಸಬಹುದಾಗಿದೆ. ಈ ಸಾಧನದ ಅಳವಡಿಕೆಯಿಂದಾಗಿ ಸಂಭವನೀಯ ಅನಾಹುತವನ್ನು ಅಲ್ಪ ಪ್ರಮಾಣದಲ್ಲಾದರೂ ತಪ್ಪಿಸಬಹುದಾಗಿದೆ.