ಮುಕ್ತ ವಿವಿ ನಕಲಿ ಅಂಕಪಟ್ಟಿ ಪ್ರಕರಣ : ನಾಲ್ವರಿಗೆ ಜಾಮೀನು
ಮೈಸೂರು, ಆಗಸ್ಟ್ 4 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಕಲಿ ಅಂಕಪಟ್ಟಿ ಹಗರಣದ ನಾಲ್ವರು ಪ್ರಮುಖ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮೊದಲನೇ ಆರೋಪಿ ಯಶಸ್ವಿನಿ, ಮೂರನೇ ಆರೋಪಿ ಕೃಷ್ಣಮೂರ್ತಿ, ನಾಲ್ಕನೇ ಆರೋಪಿ ಕಾಂತಿ ಸಾಗರ್ ಹಾಗೂ ಆರನೇ ಆರೋಪಿ ಪ್ರಜ್ವಲ್ ಅವರುಗಳಿಗೆ ನ್ಯಾಯಾಲಯ ನಿನ್ನೆ ಜಾಮೀನು ಮಂಜೂರು ಮಾಡಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಕಲಿ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲ ಪ್ರಮುಖ ಆರೋಪಿಗಳನ್ನ ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದರು. ಈ ವೇಳೆ ನಕಲಿ ಅಂಕಪಟ್ಟಿ ಹಗರಣದ ಬೃಹತ್ ಜಾಲ ಬೆಳಕಿಗೆ ಬಂದಿತ್ತು.
ನಂತರದ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿನಿ, ಕೃಷ್ಣಮೂರ್ತಿ, ಕಾಂತಿಸಾಗರ್, ಪ್ರಜ್ವಲ್ ಮಲ್ಲಣ್ಣ, ಸಿದ್ದರಾಜು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆಪಡೆದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನಗರದ 2ನೇ ಮುನ್ಸಿಪಲ್ ನ್ಯಾಯಾಲಯದ ನ್ಯಾಯಮೂರ್ತಿ ಶಂಕರ್ ಅವರು, ಪ್ರಕರಣದ ಮೊದಲನೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಒಂದು ವಾರಕ್ಕೂ ಹೆಚ್ಚು ಕಾಲ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಜತೆಗೆ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು. ಈ ವೇಳೆ ಅವರಿಂದ ಸಾಕಷ್ಟು ಮಾಹಿತಿಯನ್ನು ಪಡೆಯಲಾಗಿದೆ. ಹಾಗಾಗಿ ಇನ್ನು ಅವರ ಬಂಧನದ ಅವಶ್ಯಕತೆ ಇಲ್ಲಎಂದು ನ್ಯಾಯಾಲಯ ಜಾಮೀನು ನೀಡುವ ವೇಳೆ ಅಭಿಪ್ರಾಯಪಟ್ಟಿದೆ.