ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್
ಮೈಸೂರು, ಆಗಸ್ಟ್. 6 : ಸ್ವಾಮಿ ವಿವೇಕಾನಂದ ಹಾಗೂ ಸಂತ ಬಸವಣ್ಣರದ್ದು ಸಹಜ ಸಾವಲ್ಲ. ಅವರನ್ನು ವ್ಯವಸ್ಥಿತವಾಗಿ ಪಿತೂರಿ ಮಾಡಿ ಕೊಲೆ ಮಾಡಲಾಗಿದೆ ಎಂದು ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಿಷ ದಸರಾ ಪ್ರತಿಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಬೌದ್ಧ ಧರ್ಮದ ವಿಚಾರಧಾರೆಗಳ ಕುರಿತು ಮಾತನಾಡಲಾರಂಭಿಸಿದರು. ಆ ಬಳಿಕವೇ ಅವರನ್ನು ಕೊಂದಿರುವ ಅನುಮಾನವಿದೆ.
ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು : 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಯುವಕರಾಗಿದ್ದ ಸ್ವಾಮಿ ವಿವೇಕಾನಂದರು ಏಕಾಏಕಿ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲ. ಅದೇ ರೀತಿ ಬಸವಣ್ಣ ಅವರನ್ನು ಕೊಲೆ ಮಾಡಲಾಗಿದೆ. ಬಸವಣ್ಣನವರ ವಚನ ಚಳವಳಿಯನ್ನು ಸಹಿಸದವರು ಅವರನ್ನೇ ಕೊಂದಿದ್ದಾರೆ. ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರು ಎಂಬುದು ಶುದ್ಧ ಸುಳ್ಳು.
ಜಾತಿ ವ್ಯವಸ್ಥೆ ವಿರುದ್ಧ ಚಳವಳಿ ಹುಟ್ಟಿ ಹಾಕಿದವರು ಬಸವಣ್ಣನವರು. ಅಂತಹ ಬಸವಣ್ಣನವರು ಏಕೆ ಐಕ್ಯರಾಗಿ ಸಾಯುತ್ತಾರೆ ಹೇಳಿ ? ಕೈಲಾಸ, ಸ್ವರ್ಗ ಎಂಬುದು ಏನೂ ಇಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಹಾಗಾದರೇ ಅವರ ಸಾವು ಸಹಜವಲ್ಲ ಎಂದರು.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಬಸವಣ್ಣನವರ ಕೊಲೆ ಆಗಿದೆ ಎಂಬುವುದನ್ನು ಒಪ್ಪುವುದಿಲ್ಲ. ಬಸವಣ್ಣವರು ಯೋಗಪಟುವಾಗಿದ್ದರು. ಅಲ್ಲದೇ ಐಕ್ಯ ಹೊಂದುವ ಇಚ್ಛಾಶಕ್ತಿಯನ್ನು ಹೊಂದಿದ್ದರು.
ಬಸವಣ್ಣವರ ಕೊಲೆ ಆಗಿದೆ ಎಂಬುದರ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಇತಿಹಾಸವನ್ನು ಸರಿಯಾಗಿ ಓದಬೇಕು. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪಾಗುತ್ತದೆ ಎಂದರು.
ಇತ್ತ ಕಳೆದ 4 ವರ್ಷಗಳಿಂದಲೂ ಮಹಿಷ ದಸರಾ ಪ್ರತಿಷ್ಠಾನ ಸಮಿತಿ ವತಿಯಿಂದ ಸ್ವಂತ ಖರ್ಚಿನಿಂದಲೇ ಆಚರಿಸಿಕೊಂಡು ಬಂದಿರುವ ಮಹಿಷ ದಸರಾವನ್ನು ನಾಡಹಬ್ಬ ಚಾಮುಂಡಿ ದಸರಾದಂತೆ ರಾಜ್ಯ ಸರ್ಕಾರವೇ ಆಚರಿಸಬೇಕು.
ಮುಂದಿನ ಅಕ್ಟೋಬರ್ 7 ರಂದು ನಡೆಯುವ ಮಹಿಷಾ ದಸರಾವನ್ನು ಜಂಬೂ ಸವಾರಿ ರೀತಿ ಆನೆಯ ಮೇಲೆ ಮನುಷ್ಯನ ಪ್ರತಿಮೆಯನ್ನು ಕೂರಿಸಿ ಮೆರವಣಿಗೆ ಮಾಡಬೇಕು. ಆ ಮೂಲಕ ಪ್ರಾಚೀನ ಪಕ್ಷಾಚರಣೆ ಹಾಗೂ ದ್ರಾವಿಡ ಸಂಸ್ಕೃತಿಯನ್ನು ಸರ್ಕಾರ ಪ್ರೋತ್ಸಾಹ ಮಾಡಬೇಕು ಎಂದು ಒತ್ತಾಯಿಸಿದರು.