ಕೆ.ಆರ್ ನಗರ ಕ್ಷೇತ್ರ; ಜಿಟಿ ದೇವೇಗೌಡ ಕುಟುಂಬಕ್ಕೆ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್
ಮೈಸೂರು, ಫೆಬ್ರವರಿ 9: ಮೈಸೂರಿನ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಚಾಮುಂಡೇಶ್ವರಿ ಶಾಸಕ ಜಿಟಿ ದೇವೆಗೌಡ ಕುಟುಂಬಕ್ಕೆ ಕೆ.ಆರ್ ನಗರ ಕ್ಷೇತ್ರದ ಹಾಲಿ ಶಾಸಕ ಸಾ.ರಾ ಮಹೇಶ್ ಅವರು ಪರೋಕ್ಷವಾಗಿ ಪಂಥಾಹ್ವಾನ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಾ.ರಾ ಮಹೇಶ್, ಕೆ.ಆರ್ ನಗರಕ್ಕೆ ಅಭಿನಂದನೆಗೆಂದು ಬಂದವರು ರಾಜಕೀಯವಾಗಿ ಬರಲಾರರು. ರಾಜಕೀಯವಾಗಿ ಬಂದರೆ ಅವರನ್ನು ಎದುರಿಸಲು ನಾನು ಸಿದ್ಧ ಎಂದು ಹೇಳಿದರು.
ಮೈಸೂರಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ; ಸಾ. ರಾ. ಮಹೇಶ್, ಸೋಮಶೇಖರ್ ಭೇಟಿ!
ಅಭಿನಂದನೆ, ಹುಟ್ಟುಹಬ್ಬ, ಶವಸಂಸ್ಕಾರಕ್ಕೆ ಬಂದವರೆಲ್ಲಾ ರಾಜಕೀಯ ಮಾಡುವುದಕ್ಕಾಗುವುದಿಲ್ಲ ಎಂದು ಸಾ.ರಾ.ಮಹೇಶ್ ಅವರು ಜಿ.ಟಿ.ದೇವೇಗೌಡರ ಹೆಸರೇಳದೆ ಪರೋಕ್ಷವಾಗಿ ಟಾಂಗ್ ನೀಡಿದರು.
ಈ ಹಿಂದೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾದವರನ್ನೇ 22 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದೇನೆ. ನನ್ನ ಕ್ಷೇತ್ರದ ಜನ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಕೆ.ಆರ್ ನಗರದಲ್ಲಿ ಈ ಮೊದಲು ಸತತವಾಗಿ ಎರಡು ಬಾರಿ ಯಾರಿಗೂ ಅವಕಾಶ ಸಿಕ್ಕಿರಲಿಲ್ಲ. ಅಂತಹದರಲ್ಲಿ ಇಲ್ಲಿನ ಜನರು ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ ಎಂದು ಸಾ.ರಾ ಮಹೇಶ್ ತಿಳಿಸಿದರು.
ನನ್ನ ಪಕ್ಷ, ನಮ್ಮ ಜನ, ಕಾರ್ಯಕರ್ತರು ಇರುವವರೆಗೂ ಯಾವುದಕ್ಕೂ ತೊಂದರೆಯಿಲ್ಲ. ಚುನಾವಣೆ ಬರಲಿ, ಆ ಸಂದರ್ಭದಲ್ಲಿ ಯಾವ ರೀತಿಯ ಬೆಳವಣಿಗೆ ಇರುತ್ತದೆಯೋ ನೋಡೋಣ ಎಂದು ಕೆ.ಆರ್ ನಗರ ಶಾಸಕ ಸಾ.ರಾ.ಮಹೇಶ್ ಹೇಳಿದರು.