Breaking: FDA ಅಭ್ಯರ್ಥಿಯಿಂದ ಲಂಚ ಪಡೆದ ಆರೋಪ: ಮೈಸೂರಿನಲ್ಲಿ PSI ಅಶ್ವಿನಿ ಸಸ್ಪೆಂಡ್
ಮೈಸೂರು, ಸೆಪ್ಟೆಂಬರ್ 19: ಪ್ರಥಮ ದರ್ಜೆ ಸಹಾಯಕ ಹುದ್ದೆ ಕೊಡಿಸುವುದಾಗಿ ಅಭ್ಯರ್ಥಿಯೊಬ್ಬನಿಂದ ಲಂಚ ಪಡೆದಿದ್ದ ಆರೋಪದ ಮೇಲೆ ಮೈಸೂರಿನ ಎನ್.ಆರ್. ಸಂಚಾರ ವಿಭಾಗದ ಪಿಎಸ್ಐ ಅಶ್ವಿನಿ ಅನಂತಪೂರರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಬಾಗಲಕೋಟೆಯ ಜಮಖಂಡಿ ತಾಲೂಕಿ ಚಿಕ್ಕಲಕಿ ಗ್ರಾಮದ ಬಸವರಾಜ ಝಳಕಿ ಅಭ್ಯರ್ಥಿಯ ಸಹೋದರ ಸಂಗಮೇಶ್ ಜೊತೆಗೆ ಅಶ್ವಿನಿ ಡೀಲ್ ಬಗ್ಗೆ ಮಾತನಾಡುತ್ತಿದ್ದ ಆಡಿಯೋ ವೈರಲ್ ಆಗಿತ್ತು. 2020ರಲ್ಲಿ ನಡೆದಿದ್ದ ಪ್ರಥಮ ದರ್ಜೆ ಪರೀಕ್ಷೆ ವೇಳೆ ಕೆಲಸ ಕೊಡಿಸುವುದಾಗಿ 15 ಲಕ್ಷರು ಗಳಿಗೆ ಅಶ್ವಿನಿ ಅನಂತಪುರ ಬೇಡಿಕೆ ಇಟ್ಟಿದ್ದು, ಮುಂಗಡ ಹಣವಾಗಿ 2 ಲಕ್ಷ ರೂ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ದಾಖಲೆಗಳ ಸಮೇತ ಆರೋಪ ಮಾಡಿದ್ದರು. ಸಂಗಮೇಶ್ ಝಳಕಿ ಜತೆ ಹಣದ ವ್ಯವಹಾರದ ಬಗ್ಗೆ ಸಂಭಾಷಣೆ ನಡೆಸಿರುವ ಆಡಿಯೋ, ವಾಟ್ಸಪ್ ಚಾಟಿಂಗ್, ಬ್ಯಾಂಕ್ ವಿವರಗಳನ್ನು ಲಕ್ಷ್ಮಣ್ ಬಹಿರಂಗಗೊಳಿಸಿದ್ದರು. ಪ್ರಕರಣವನ್ನು ಪರಿಗಣಿಸಿದ ನಗರ ಪೊಲೀಸ್ ಆಯುಕ್ತರು ವಿಚಾರಣೆ ಬಾಕಿ ಇರಿಸಿ ತಕ್ಷಣ ಜಾರಿಗೆ ಬರುವಂತೆ ಅಶ್ವಿನಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶೀಘ್ರದಲ್ಲೇ ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ
ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿಯ ಮರುಪರೀಕ್ಷೆ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿಯ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದ ಕಾರಣಕ್ಕೆ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಲಾಹಿದೆ. 545 ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಇಲಾಖೆ ಬದ್ಧವಾಗಿದೆ.
ಕೆಲವು ಅಭ್ಯರ್ಥಿಗಳು ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ. ಆರೋಪಿ ಅಭ್ಯರ್ಥಿಗಳಿಗೆ ಮುಂದೆ ಯಾವುದೇ ಸ್ಮರ್ಧಾತ್ಮಕ ಪರೀಕ್ಷೆಗೆ ಅವಕಾಶ ಸಿಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.