ರಾಜ್ಯ ಸರ್ಕಾರ ಸಿಡಿಗಳ ಅಸ್ತಿತ್ವದಲ್ಲಿ ನಡೆಯುತ್ತಿದೆ: ಕೆಪಿಸಿಸಿ ಲೇವಡಿ
ಮೈಸೂರು, ಮಾರ್ಚ್ 3: ರಾಜ್ಯದಲ್ಲಿ ಪ್ರಸ್ತುತ ಸಿಡಿಗಳ ಸರ್ಕಾರ ಅಸ್ತಿತ್ವದಲ್ಲಿದ್ದು, ಸೆಕ್ಸ್ ಸಿಡಿ, ಭ್ರಷ್ಟಾಚಾರದ ಸಿಡಿಗಳಿಂದ ಈ ಸರ್ಕಾರ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.
ಮೈಸೂರು ನಗರ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ""ಜಾರಕಿಹೊಳಿ ರಾಜೀನಾಮೆ ನೀಡಿದರೆ ಸಾಲದು, ಬದಲಾಗಿ ಅವರ ಮೇಲೆ FIR ದಾಖಲು ಮಾಡಬೇಕು. ಸಂತ್ರಸ್ಥೆ ದೂರು ನೀಡಿದ್ದರೂ ಮತ್ತೊಬ್ಬರು ದೂರು ನೀಡಬಹುದು. ಇದನ್ನು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಯಾರು ಯಾರ ಮೇಲಾದರೂ ದೂರು ನೀಡಬಹುದು. ಹೀಗಾಗಿ ದೂರುದಾರ ದಿನೇಶ್ ಕಲ್ಲಹಳ್ಳಿ ಕೊಟ್ಟಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಬೇಕು'' ಅಂತ ಒತ್ತಾಯಿಸಿದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿ ಅಭಿಮಾನಿಗಳ ಪ್ರತಿಭಟನೆ
""ನಾನು ಸಿಎಂ ಬಿ.ಎಸ್ ಯಡಿಯೂರಪ್ಪ ಮೇಲೆ ಆರೋಪ ಮಾಡಿದಾಗ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು. ಸೋನಿಯಾ ಗಾಂಧಿ, ಮೋದಿ ಆಡಳಿತದ ಬಗ್ಗೆ ಮಾತನಾಡಿದಾಗ ಶಿವಮೊಗ್ಗದಲ್ಲಿ ದೂರು ನೀಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು'' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
""2009ರಲ್ಲಿ ಎಂ.ಪಿ ರೇಣುಕಾಚಾರ್ಯ, 2012ರಲ್ಲಿ ಹಾಲಪ್ಪ, ಸವದಿ, ಸಿ.ಸಿ ಪಾಟೀಲ್, ಕೃಷ್ಣ ಪಾಲೇಮಾರ್, 2013ರಲ್ಲಿ ರಘುಪತಿ ಭಟ್, 2014ರಲ್ಲಿ ರಾಮದಾಸ್, 2019ರಲ್ಲಿ ಕಳಕಪ್ಪ ಬಂಡಿ, 2019ರಲ್ಲಿ ಪ್ರತಾಪ್ ಸಿಂಹ ಆಡಿಯೋ ಇದೀಗ 2021ರಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣ ಹೊರಬಂದಿದೆ. ಬಿಜೆಪಿ ಅವರಿಗೆ ಆಡಳಿತ ಮಾಡೋಕೆ ಬರೋದಿಲ್ಲ. ಈ ರೀತಿಯ ಅನೈತಿಕ ವಿಚಾರಕ್ಕಷ್ಟೇ ಕೇಸರಿ ಪಡೆ ನಾಯಕರು ಸೀಮಿತ'' ಎಂದು ಟೀಕಿಸಿದರು.
""ADR ಸಂಸ್ಥೆ ನೀಡಿರುವ ವರದಿಯಲ್ಲಿ 100ರಲ್ಲಿ 70 ಮಂದಿ ಬಿಜೆಪಿಗರು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದಾರೆ. ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಸಿ.ಟಿ ರವಿ ಈ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಸರ್ಕಾರದ ಮಂತ್ರಿಗಳಿಗೆ ಕ್ಯಾರೆಕ್ಟರ್ ಅಂಡ್ ಕಂಡಕ್ಟ್ ಬಗ್ಗೆ ಮೂರು ತಿಂಗಳಿಗೊಮ್ಮೆ ಒಂದು ಟ್ರೈನಿಂಗ್ ಪ್ರೋಗ್ರಾಂ ಮಾಡಿ, ಬಿಜೆಪಿಯಲ್ಲಿರುವ ಮಹಿಳೆಯರು ಹಾಗೂ ಪಕ್ಷಕ್ಕೆ ಸೇರುವವರು ಎಚ್ಚರಿಕೆಯಿಂದ ಇರಬೇಕು'' ಎಂದರು.