ಆತ್ಮ ನಿರ್ಭರ್ ಬಜೆಟ್ ಅಲ್ಲ, ಆತ್ಮ ಬರ್ಬಾದ್ ಬಜೆಟ್
ಮೈಸೂರು, ಫೆಬ್ರವರಿ 2: ಕೇಂದ್ರ ಸರ್ಕಾರದ ಬಜೆಟ್ ಮಂಡನೆ ವಿಚಾರವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಲಕ್ಷ್ಮಣ್, ನಮ್ಮ ರಾಜ್ಯದ ಭಿಕ್ಷೆಯಿಂದ ನೀವು ರಾಜ್ಯಸಭಾ ಸದಸ್ಯೆಯಾಗಿದ್ದೀರಿ. ಆದರೆ ಕರ್ನಾಟಕದ ಬಗ್ಗೆ ಕಿಂಚಿತ್ತು ಕೃತಜ್ಞತೆ ನಿಮಗೆ ಇಲ್ಲ ಎಂದು ಕಿಡಿಕಾರಿದರು.
ನೀವೂ ಮೂಲತಃ ತಮಿಳುನಾಡಿನವರು. ಅಲ್ಲಿಯ ಚುನಾವಣೆಯ ಕಾರಣ ತಮಿಳುನಾಡಿಗೆ 6.2 ಲಕ್ಷ ಕೋಟಿ ಅನುದಾನ ಕೊಟ್ಟಿದ್ದೀರಾ. ಆದರೆ ಕರ್ನಾಟಕಕ್ಕೆ ಕೇವಲ 14 ಸಾವಿರ ಕೋಟಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಹಣಕ್ಕೆ ಕೇಂದ್ರ ಕೈ ಹಾಕಲಿದೆ
ರಾಜ್ಯದ ಬಿಜೆಪಿ ಮುಖಂಡರೇ, ನಿಮಗೆ ಮಾನ ಮರ್ಯಾದೆ ಇದ್ದರೆ ಈ ಬಗ್ಗೆ ಉತ್ತರ ಕೊಡಿ. ಇದು ಆತ್ಮ ನಿರ್ಭರ್ ಬಜೆಟ್ ಅಲ್ಲ, ಆತ್ಮ ಬರ್ಬಾದ್ ಬಜೆಟ್ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿಕೆ ನೀಡಿದರು.
2013-14 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ, ವಿತ್ತೀಯ ಕೊರತೆ ಶೇ.2.2 ಇತ್ತು. ಈಗ ಶೇ 9.8 ರಷ್ಟಿದೆ. ಈ ಕೊರತೆಯನ್ನು ಸರ್ಕಾರ ಎಲ್ಲಿಂದ ತುಂಬಿಸುತ್ತದೆ? ಬ್ಯಾಂಕ್ ನಲ್ಲಿರುವ ಜನರ ಹಣಕ್ಕೆ ಕೇಂದ್ರ ಕೈ ಹಾಕಲಿದೆ. ಸಾರ್ವಜನಿಕರ ಠೇವಣಿ ಹಣಕ್ಕೆ ಕುತ್ತು ಬರಲಿದೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹೇಳಿದರು.
ಸಾಲದ ಕೂಪಕ್ಕೆ ದೇಶವನ್ನು ತಳ್ಳುತ್ತಿದೆ
2014ರ ಮೇ ತಿಂಗಳಲ್ಲಿ 52 ಲಕ್ಷ ಕೋಟಿ ಸಾಲ ಇತ್ತು. ಡಿಸೆಂಬರ್ 2020ಕ್ಕೆ 107 ಲಕ್ಷ ಕೋಟಿ ಸಾಲ ಮಾಡಿದೆ. ಕಾಂಗ್ರೆಸ್ ಸರ್ಕಾರ 60 ವರ್ಷದಲ್ಲಿ ಮಾಡಿದ್ದು ಕೇವಲ 52 ಲಕ್ಷ ಕೋಟಿ. ಆದರೆ 6 ವರ್ಷಗಳಲ್ಲಿ ಮೋದಿ ಸರ್ಕಾರ 107 ಲಕ್ಷ ಕೋಟಿ ಸಾಲ ಮಾಡಿ ಸಾಲದ ಕೂಪಕ್ಕೆ ದೇಶವನ್ನು ತಳ್ಳುತ್ತಿದೆ ಎಂದರು. 2021-22 ರಲ್ಲಿ 12 ಲಕ್ಷ ಕೋಟಿ ಸಾಲ ಪಡೆಯಲು ಹೊರಟಿದೆ. ಇದು ಬಿಜೆಪಿ ಸಾಧನೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸರ್ಕಾರ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿಕಾರಿದರು.
ಜನಸಾಮಾನ್ಯರು ಎಚ್ಚರದಿಂದ ಇರಿ
ಜನಸಾಮಾನ್ಯರು ಎಚ್ಚರದಿಂದ ಇರಿ, ಬ್ಯಾಂಕಿನಲ್ಲಿ ನೀವು ಇಟ್ಟ ಫಿಕ್ಸೈಡ್ ಡಿಪಾಸಿಟ್ಗೂ ಸರ್ಕಾರ ಕೈ ಹಾಕುತ್ತೆ. ಅಲ್ಪ ಸ್ವಲ್ಪ ಹಣ ಕೂಡಿಟ್ಟ ನಿಮ್ಮ ಹಣಕ್ಕೂ ಕತ್ತರಿ ಬೀಳುತ್ತದೆ. ಇದು ಇನ್ನಾರು ತಿಂಗಳಲ್ಲಿ ನಿಮ್ಮ FD ಹಣಕ್ಕೆ ಕೇಂದ್ರ ಕೈ ಹಾಕಿದರೂ ಅಚ್ಚರಿ ಇಲ್ಲ. ಜನಸಾಮಾನ್ಯರು ಈಗಲೇ ಈ ಬಗ್ಗೆ ಎಚ್ಚರ ವಹಿಸಿ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದರು.
ಎಲ್ಐಸಿಯನ್ನು ಖಾಸಗೀಕರಣ ಮಾಡುತ್ತಿದೆ
ದೇಶದ ಜನರನ್ನು ಭಿಕ್ಷೆ ಬೇಡುವಂತ ಸ್ಥಿತಿಗೆ ಬಿಜೆಪಿ ತಂದು ಬಿಡುತ್ತದೆ. ಆ ದಿನ ಕೂಲಿ ಮಾಡಬೇಕು, ತಿನ್ನಬೇಕು. ಏನು ಸಂಪಾದನೆ ಮಾಡಬಾರದು. ಇಂತಹ ಅಜೆಂಡಾ ಬಿಜೆಪಿ ಇಟ್ಟುಕೊಂಡು ಆಡಳಿತ ಮಾಡುತ್ತಿದೆ. ಎಲ್ಐಸಿಯನ್ನು ಖಾಸಗೀಕರಣ ಮಾಡುತ್ತಿದೆ. ಮೂರು ಬ್ಯಾಂಕ್ ಗಳನ್ನು ಪ್ರೈವೇಟ್ ಸೆಕ್ಟರ್ಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಜನರನ್ನು ಭಿಕ್ಷೆ ಬೇಡವ ಸ್ಥಿತಿಗೆ ಬಿಜೆಪಿ ಇನ್ನೆರಡು ವರ್ಷದಲ್ಲಿ ತರುವ ಅಜೆಂಡಾ ಇಟ್ಟುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.