ಬಿಜೆಪಿ ಸರ್ಕಾರ ವರ್ಷ ತುಂಬಿಸಿದ್ದೇ ಒಂದು ಸಾಧನೆ: ಕಾಂಗ್ರೆಸ್ ವ್ಯಂಗ್ಯ
ಮೈಸೂರು, ಜುಲೈ 27: ಬಿಜೆಪಿ ನೇತೃತ್ವದ ಸರ್ಕಾರ ವರ್ಷ ತುಂಬಿಸಿದ್ದೇ ಒಂದು ಸಾಧನೆ ಎಂದು ಬಿಜೆಪಿ ವರ್ಷದ ಸಾಧನೆಯ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ವರ್ಷದ ಸಾಧನೆ ಬಗ್ಗೆ ಮನೆ ಮನೆಗೆ ಪುಸ್ತಕ ಮಾಡಿ ತಲುಪಿಸುತ್ತಿದ್ದಾರೆ. ಏಪ್ರಿಲ್ ನಿಂದ ಜುಲೈ ವರೆಗೆ ಆರ್ ಬಿಐ ನಿಂದ 10 ಸಾವಿರ ಕೋಟಿ ರುಪಾಯಿ ಸಾಲ ಮಾಡಿದ್ದಾರೆ. ವೈದ್ಯಕೀಯ ಖರ್ಚಿಗೆ 3 ಸಾವಿರ ಕೋಟಿ ರುಪಾಯಿ ಸಾಲ ಮಾಡಿದ್ದಾರೆ. ಯಾವ ಕಾರಣಕ್ಕಾಗಿ 3 ಸಾವಿರ ಕೋಟಿ ಖರ್ಚು ಮಾಡಿದ್ದಾರೆಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
"ಸಾ.ರಾ ಮಹೇಶ್ ನನ್ನ ಸಮನಲ್ಲ, ಅವನ ಬಗ್ಗೆ ನಾನು ಮಾತನಾಡೋದಿಲ್ಲ"
ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ 2.5 ಲಕ್ಷ ರೂ. ಸಾಲ ಹೇರಿದ್ದಾರೆ, ಇದೇ ಬಿಜೆಪಿಯವರ ಸಾಧನೆ. ಕೊರೊನಾ ವೈರಸ್ ನಿಂದ ಸಾವಿಗೀಡಾದವರಿಗೆ 250, ಅವರ ಬೂದಿ ನೀಡೋದಕ್ಕೆ 100 ರೂ. ನೀಡೋದನ್ನು ನಿಲ್ಲಿಸಿರೋದನ್ನು ತಮ್ಮ ಸಾಧನೆಯ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಎಂದು ಎಂ.ಲಕ್ಷ್ಮಣ್ ಟೀಕಿಸಿದರು.
ಹಿಂದೆ ಸಿದ್ದರಾಮಯ್ಯನವರು ಸಾಲ ಮಾಡಿದ್ದನ್ನು ಊರ ತುಂಬಾ ಸಾರಿಕೊಂಡು ಬಂದಿದ್ದರು. ಆದರೆ ಈಗ ಇವರು ಒಂದು ವರ್ಷದಲ್ಲೇ 42 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ, ಇದೇ ಅವರ ಸಾಧನೆ. ಮುಂದೆ ಬಿಜೆಪಿಯವರ ಭ್ರಷ್ಟಾಚಾರವನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದರು.
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಸಮಾಧಿ ಮಾಡಿದ್ದೀರಿ, ಇದು ನಿಮ್ಮ ಸಾಧನೆ. ರಾಜ್ಯದ ಜನತೆ ಮೇಲೆ ಚಪ್ಪಡಿ ಎಳೆದಿದ್ದೀರಿ, ಸಿದ್ದರಾಮಯ್ಯ 5 ವರ್ಷದಲ್ಲಿ 165 ಕಾರ್ಯಕ್ರಮ ಈಡೇರಿಸಿದ್ದಾರೆ. ನೀವು ಯಾವ ಯೋಜನೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರೊಬ್ಬರ ಕಲ್ಯಾಣ ಮಂಟಪದಲ್ಲಿ ದಿನಸಿ ಕಿಟ್; ಚರ್ಚೆಗೆ ಗ್ರಾಸವಾದ ಸಂಗತಿ
ಬಿಜೆಪಿಯವರು ಆರ್ ಬಿಐ ನಲ್ಲಿ 4 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ನೇರವಾಗಿ ರಾಜ್ಯ ಸರ್ಕಾರವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಕಾಂಗ್ರೆಸ್ ಕರ್ನಾಟಕ ಇತಿಹಾಸದಲ್ಲೇ 70 ವರ್ಷದಲ್ಲಿ 2 ಲಕ್ಷ ಕೋಟಿ ಸಾಲ ತೆಗೆದುಕೊಂಡಿದೆ. ಆದರೆ ಈಗ ಇವರು ಇನ್ನೊಂದು ವರ್ಷದಲ್ಲೇ ಇದನ್ನು ಮುರಿಯುವ ಸಾಧನೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರಿಗೆ ಪೊಸಿಷನ್ ಇಲ್ಲ ಎಂದಿರುವ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್.ಲಕ್ಷ್ಮಣ್, ಸಿದ್ದರಾಮಯ್ಯ ನವರ ಪೊಸಿಷನ್ ಬಗ್ಗೆ ನೀವು ಮಾತನಾಡಬೇಕಿಲ್ಲ. ನೀವು ನಿಮ್ಮ ಪೊಸಿಷನ್ ನೋಡಿಕೊಳ್ಳಿ. ಬೆಂಗಳೂರು ಉಸ್ತುವಾರಿ ವೇಳೆ ಯಡಿಯೂರಪ್ಪ ಕಾಲಿಗೆ ಬಿದ್ದು ಉಸ್ತುವಾರಿ ಪಡೆದುಕೊಂಡಿರಿ. ಆದರೂ ನಿಮಗೆ ಪೂರ್ತಿ ಬೆಂಗಳೂರಿನ ಉಸ್ತುವಾರಿ ನೀಡಲಿಲ್ಲ ಎಂದು ತಿರುಗೇಟು ನೀಡಿದರು.
ನಿಮಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕಿಲ್ಲ. ನಿಮ್ಮ ಹೈಕಮಾಂಡ್ ಗೆ ನಿಮ್ಮ ಬಗ್ಗೆ ನಿಮ್ಮವರೇ ದೂರು ನೀಡಿದ್ದಾರೆ. ನೀವೊಬ್ಬ ಅಡ್ಜಸ್ಟ್ಮೆಂಟ್ ರಾಜಕಾರಣಿ, ನೀವು ಯಾವತ್ತೂ ಜೆಡಿಎಸ್ ವಿರುದ್ಧ ಮಾತನಾಡಲ್ಲ ಎಂದು ದೂರು ನೀಡಿದ್ದಾರೆ. ಇನ್ನೂ ಕೆಲ ದಿನಗಳಲ್ಲಿ ನಿಮ್ಮನ್ನು ನಿಮ್ಮವರೇ ಕೆಳಗೆ ಇಳಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.